ಮನಸ್ಸಿಗೆ ಮುದ ನೀಡುವ ಸಾಹಿತ್ಯ ರಚಿಸಿ: ರಾಜಶೇಖರಪ್ಪ
ಅನಾಥ ಮಕ್ಕಳಿಗೆ ಪುಸ್ತಕ ವಿತರಣೆ ಕಾರ್ಯ ಪ್ರಶಂಸನೀಯ
Team Udayavani, Jul 22, 2019, 1:12 PM IST
ಚಿತ್ರದುರ್ಗ: ಸಾಹಿತ್ಯೋತ್ಸವ ಕಾರ್ಯಕ್ರಮವನ್ನು ಸಂಶೋಧಕ ಡಾ.ಬಿ.ರಾಜಶೇಖರಪ್ಪ ಉದ್ಘಾಟಿಸಿದರು.
ಚಿತ್ರದುರ್ಗ: ಮನಸ್ಸಿನ ಸಮತೋಲನಕ್ಕಾಗಿ ಮತ್ತು ಜೀವನ ಮೌಲ್ಯಗಳನ್ನು ಮೈಗೂಡಿಸಿಕೊಂಡು ಬದುಕು ನೀಡುವಂತ ಹದವಾದ ಸಾಹಿತ್ಯ ಬೇಕಾಗಿದೆ ಎಂದು ಸಂಶೋಧಕ ಡಾ.ಬಿ.ರಾಜಶೇಖರಪ್ಪ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸಾಹಿತ್ಯ ಸಾಮ್ರಾಜ್ಯ ನಾಟ್ಯ ಸಂಘ, ಮಂಗಳೂರಿನ ಕಥಾಬಿಂದು ಪ್ರಕಾಶನದಿಂದ ಹಮ್ಮಿಕೊಂಡಿದ್ದ ಅನಾಥಾಶ್ರಮದ ಮಕ್ಕಳಿಗೆ ಪುಸ್ತಕ ವಿತರಣೆ, ಸಾಹಿತ್ಯೋತ್ಸವ, ರಾಜ್ಯಮಟ್ಟದ ಕವಿಗೋಷ್ಠಿ ಹಾಗೂ ಮದಕರಿ ನಾಯಕ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಸಾಹಿತ್ಯ ಎಲ್ಲರನ್ನು ಸೆಳೆದಪ್ಪಲಿದೆ. ಸಾಹಿತ್ಯ ಮನಸ್ಸಿಗೆ ಮುದ ನೀಡುವುದರ ಜತೆಗೆ ಹದವನ್ನೂ ಕೊಡುತ್ತದೆ.
ಸಾಹಿತ್ಯದಲ್ಲಿ ವಿವೇಚನೆ ಮತ್ತು ಯೋಚನೆ ಎರಡು ಇದ್ದರೆ ಸಾಹಿತ್ಯ ಅಭ್ಯಾಸ ಮಾಡಲು ಆಕರ್ಷಿಸಲಿದೆ ಎಂದು ತಿಳಿಸಿದರು. ಸಾಹಿತ್ಯ ರಚನೆ ಅಥವಾ ಸಾಹಿತ್ಯ ಓದಲು ಮಾನಸಿಕವಾಗಿ ಕೆಲವು ಸಿದ್ಧತೆಗಳನ್ನು ಮಾಡಿಕೊಂಡಾಗ ಮಾತ್ರ ಸಾಹಿತ್ಯ ರಚನೆ ಸಾಧ್ಯವಾಗಲಿದೆ. ಸಾಹಿತ್ಯ ರಚನೆಯಾದಾಗ ಬದುಕಿಗೆ ಬೇಕಾದದ್ದನ್ನು ಪಡೆದುಕೊಳ್ಳಲು ಸಾಧ್ಯ ಎಂದು ಹೇಳಿದರು.
ಎಷ್ಟೋ ಜನ ಅನಾಥ ಮಕ್ಕಳು, ಬಡ ಕುಟುಂಬದಿಂದ ಬಂದವರು, ಗ್ರಾಮೀಣ ಪ್ರದೇಶದ ಮಕ್ಕಳು ಅಪರಿಮಿತ ಸಾಧನೆ ಮಾಡಿ ದೊಡ್ಡ ಹೆಸರು ಪಡೆದಿದ್ದಾರೆ. ಬಡ ಮತ್ತು ಅನಾಥ ಮಕ್ಕಳಿಗೆ ಪುಸ್ತಕ ವಿತರಣೆ ಮಾಡುತ್ತಿರುವುದು ಪ್ರಶಂಸನೀಯ ಸಂಗತಿ. ಓದಿಗೆ ಬಡತನ ಅಡ್ಡಿಯಾಗದು ಎಂದು ಅಭಿಪ್ರಾಯಪಟ್ಟರು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ 30ಕ್ಕೂ ಹೆಚ್ಚು ಕವಿಗಳು ಕವಿಗೋಷ್ಠಿಯಲ್ಲಿ ಭಾಗವಹಿಸಿ ಕವನಗಳನ್ನು ವಾಚಿಸಿದರು.
ವೆಂಕಟೇಶ್ವರ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಪ್ರೊ.ಬಸವರಾಜ ಟಿ.ಬೆಳಗಟ್ಟ ಮಾತನಾಡಿ, ಬಡತನದಿಂದ ಬರುವಂತ ಮಕ್ಕಳನ್ನು ಕೀಟಲೆ ಮಾಡಬೇಡಿ. ಬಡತನ ಯಾರಿಗೂ ಶಾಶ್ವತವಲ್ಲ, ಆರ್ಥಿಕವಾಗಿ ಸಬಲರಾಗಿರುವಂತ ಕುಟುಂಬದ ಮಕ್ಕಳು ಬಡ ಮಕ್ಕಳನ್ನು ಕಂಡರೆ ಅಥವಾ ಬಡ ಮಕ್ಕಳು ಕೊಳೆಯಾದ, ಚಿಂದಿಯಾದ ಬಟ್ಟೆ ಧರಿಸಿದ್ದರೆ ಅಗೌರವದಿಂದ ಕಾಣಬೇಡಿ, ಅದರಿಂದಿರುವ ಅಸಹಾಯಕತೆ, ಬಡತನವನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪಿ.ವಿ. ಮಲ್ಲಿಕಾರ್ಜುನಯ್ಯ, ಗೋಪಾಲಕೃಷ್ಣ ಕಟ್ಟೇತ್ತಿಲ, ದೇವಿ ಪ್ರಸಾದ್ ಶೆಟ್ಟಿ, ಕೇಶವ ಶಕ್ತಿನಗರ, ಡಾ.ಪಡ್ಡಂಭೈಲು ಕೃಷ್ಣಪ್ಪ ಗೌಡ, ಡಾ.ಶೇಖರ ಅಜೆಕಾರು ಅವರಿಗೆ ಮದಕರಿ ನಾಯಕ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮುಖ್ಯ ಗ್ರಂಥಾಲಯಾಧಿಕಾರಿ ಪಿ.ಆರ್.ತಿಪ್ಪೇಸ್ವಾಮಿ, ನಿವೃತ್ತ ಪ್ರಾಧ್ಯಾಪಕಿ ಯಶೋಧ ರಾಜಶೇಖರಪ್ಪ, ಮಂಗಳೂರಿನ ಕಥಾ ಬಿಂದು ಪ್ರಕಾಶನದ ಸಂಘಟಕ ಪಿ.ವಿ. ಪ್ರದೀಪ ಕುಮಾರ್, ಲೇಖಕ ಎಚ್.ಆನಂದ ಕುಮಾರ್, ಗಾಂಧಿ ಮತ್ತು ಅಂಬೇಡ್ಕರ್ ಅನಾಥಾಶ್ರಮದ ಕಾರ್ಯದರ್ಶಿ ವಿ.ಕೆ. ಶಂಕರಪ್ಪ, ರಂಗಭೂಮಿ ಕಲಾವಿದ ಟಿ.ನಾಗೇಂದ್ರ, ಸಾಹಿತಿ ನಿರ್ಮಲ ಮಂಜುನಾಥ, ಶಿಕ್ಷಕಿ ಗೀತಾ ಮಂಜು ಇದ್ದರು.