ಪೊಲೀಸರ ಮೇಲೆ ಹೂಮಳೆಗರೆದ ಜನ
Team Udayavani, Apr 30, 2020, 5:53 PM IST
ಚಿತ್ರದುರ್ಗ: ಕೋವಿಡ್ ಜಾಗೃತಿ ಜಾಥಾ ನಡೆಸಿದ ಪೊಲೀಸರ ಮೇಲೆ ನಾಗರಿಕರು ಹೂಮಳೆ ಸುರಿಸಿದರು.
ಚಿತ್ರದುರ್ಗ: ಪೊಲೀಸ್ ಇಲಾಖೆಯಿಂದ ಜನರಲ್ಲಿ ಕೋವಿಡ್ ಕುರಿತು ಜಾಗೃತಿ ಮೂಡಿಸಲು ನಗರದ ವಿವಿಧ ಬಡಾವಣೆಗಳಲ್ಲಿ ಜಾಗೃತಿ ಜಾಥಾ ನಡೆಸಲಾಯಿತು. ಈ ವೇಳೆ ನಾಗರಿಕರು ಪೊಲೀಸರ ಮೇಲೆ ಹೂಮಳೆ ಸುರಿಸಿದರು.
ಈ ವೇಳೆ ಸಾರ್ವಜನಿರನ್ನುದ್ದೇಶಿಸಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ರಾಧಿಕಾ, ಕೊರೊನಾ ಕುರಿತು ಪ್ರತಿಯೊಬ್ಬರೂ ಎಚ್ಚರಿಕೆಯಿಂದ ಇರಬೇಕು. ನಿರ್ಲಕ್ಷ್ಯ ವಹಿಸಿದರೆ ಸಾವು ಸಂಭವಿಸುವ ಸಾಧ್ಯತೆ ಇರುತ್ತದೆ. ಜಿಲ್ಲೆಯ ನಾಗರಿಕರು ಇದುವರೆಗೆ ಪೊಲೀಸ್ ಇಲಾಖೆಗೆ ಸಹಕಾರ ನೀಡಿದ್ದೀರಿ, ಮುಂದೆಯೂ ಸಹಕಾರ ನೀಡಬೇಕು. ಹೊರ ದೇಶದಲ್ಲಿ ನಿರಂತರವಾಗಿ ಸಾವು ಸಂಭವಿಸುತ್ತಿದ್ದು ಹೆಚ್ಚು ಜನಸಂಖ್ಯೆ ಇರುವ ನಾವು ಜಾಗೃತರಾಗಿರಬೇಕು ಎಂದು ತಿಳಿಸಿದರು.
ಕೋವಿಡ್ ಸೋಂಕು ಹರಡದಂತೆ ಲಾಕ್ಡೌನ್ ಜಾರಿಯಲ್ಲಿದ್ದು ಈಗ ಸ್ವಲ್ಪ ಸಡಿಲವಾಗಿದ್ದರೂ ಸಾರ್ವಜನಿಕರ ಅನಗತ್ಯ ಸಂಚಾರ ಮಾಡಿದರೆ ಕ್ರಮ ಕೈಗೊಳ್ಳಲಾಗುವುದು. ಕೆಲ ಸೇವೆಗಳಿಗೂ
ವಿನಾಯಿತಿ ನೀಡಿದ್ದರೂ ಸಹ ಎಲ್ಲರು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಹಾಗೂ ಮಾಸ್ಕ್ ಧರಿಸಬೇಕು ಅನಗತ್ಯ ಸಂಚಾರ ಹಾಗೂ ಬೀಡಾ ಅಂಗಡಿಗಳಲ್ಲಿ ಸಿಗರೇಟ್ ಹಾಗೂ ಎಲ್ಲಾ ತರಹದ ಗುಟಕಾಗಳನ್ನು ಸಂಪೂರ್ಣ ನಿಷೇಧಿಸಲಾಗಿದೆ. ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಿಬ್ಬಂದಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದು ಅವರ ಮೇಲೆ ಹಲ್ಲೆ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಅನಗತ್ಯವಾಗಿ ಸಂಚಾರ ಮಾಡಿದ ವಾಹನ ಸವಾರರ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಎಲ್ಲಾಕಡೆ ಡ್ರೋಣ್ ಕ್ಯಾಮೆರಾ ಬಳಸಲಾಗಿದ್ದು. ಯಾವುದೇ ಅಹಿತಕರ ಘಟನೆ ನಡೆಸಿದರೂ ಡ್ರೋಣ್ ಮೂಲಕ ಕಂಡು ಹಿಡಿದು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಈ ವೇಳೆ ಎಎಸ್ಪಿ ಮಹಾನಿಂಗ ನಂದಗಾವಿ, ಡಿವೈಎಸ್ಪಿ ಪಾಂಡುರಂಗಪ್ಪ, ನಗರಸಭಾ ಸದಸ್ಯ ದೀಪಕ್ ಹಾಗೂ ನಗರಸಭೆ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಇದ್ದರು.