Chitradurga: ಮಂಗಳಮುಖಿ ಸಾಕಿದ್ದ 43 ಮೇಕೆ, 5 ಕುರಿಗಳನ್ನು ಕದ್ದೊಯ್ದ ಕಳ್ಳರು
Team Udayavani, Oct 27, 2023, 8:52 PM IST
ಭರಮಸಾಗರ: ರಾಷ್ಟ್ರೀಯ ಹೆದ್ದಾರಿ 44ರ ಕೊಳಹಾಳ್ ಮಾರ್ಗದ ಕಸವನಹಳ್ಳಿ ಬಳಿ ಮಂಗಳಮುಖಿಯೊಬ್ಬರು ಸಾಕಾಣಿಕೆ ಮಾಡುತ್ತಿದ್ದ 43 ಮೇಕೆ ಮತ್ತು 5 ಕುರಿಗಳನ್ನು ಕಳ್ಳರು ಕದ್ದೊಯ್ದಿರುವ ಪ್ರಕರಣ ನಡೆದಿದೆ.
ಇಲ್ಲಿನ ಕಸವನಹಳ್ಳಿ ಗೇಟ್ ಸಮೀಪ ಮಂಗಳಮುಖಿ ಅರುಂಧತಿ ಸ್ವಾವಲಂಬನೆ ಮನೋಭಾವ ಬೆಳೆಸಿಕೊಂಡು ವಿಭಿನ್ನವಾಗಿ ಜೀವನ ನಡೆಸಬೇಕು. ಮಂಗಳಮುಖಿಯರಿಗೆ ಅಂಟಿರುವ ಭಿಕ್ಷಾಟನೆ ಕಳಂಕದಿಂದ ದೂರ ಉಳಿಯಬೇಕು. ಏನನ್ನಾದರೂ ಸಾಧಿಸಲೇಬೇಕು ಎಂಬ ಹಠದಿಂದ ಇಲ್ಲೊಂದು ಸಣ್ಣ ಶೆಡ್ ನಿರ್ಮಿಸಿಕೊಂಡು ಕಳೆದ ಒಂದೆರಡು ವರ್ಷಗಳಿಂದ ಮೇಕೆ, ಕುರಿ ಸಾಕಾಣಿಕೆ ಮಾಡುತ್ತಿದ್ದರು.
ಗುರುವಾರ ಕೆಲಸ ಒಂದರ ನಿಮಿತ್ತ ಚಿಕ್ಕಮಗಳೂರಿಗೆ ತೆರಳಿದ್ದ ವೇಳೆ ಕಳ್ಳರು ಮೇಕೆ, ಕುರಿಗಳನ್ನು ಕದ್ದೊಯ್ದಿದ್ದಾರೆ. ಈ ಕುರಿತು ಭರಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.