ಭಾವುಕರಾದ ಮಾದಾರ ಚನ್ನಯ್ಯ ಶ್ರೀ
Team Udayavani, Dec 30, 2019, 3:04 AM IST
ಚಿತ್ರದುರ್ಗ: ಶ್ರೀ ವಿಶ್ವೇಶತೀರ್ಥ ಶ್ರೀಗಳು ಹರಿಪಾದ ಸೇರಿದ ಸುದ್ದಿ ತಿಳಿದು ಮಾದಾರ ಚನ್ನಯ್ಯ ಸ್ವಾಮೀಜಿ ಕಣ್ಣೀರಿಟ್ಟರು. ಮಾಧ್ಯಮಗಳ ಜತೆ ಮಾತನಾಡಿದ ಮಾದಾರ ಚನ್ನಯ್ಯ ಸ್ವಾಮೀಜಿ, “ಪೇಜಾವರ ಶ್ರೀಗಳು ನನ್ನನ್ನು ಪುತ್ರನಂತೆ ಕಾಣುತ್ತಿದ್ದರು. ಹತ್ತು ವರ್ಷಗಳ ಅವರ ಜತೆಗಿನ ಒಡನಾಟ ಅತ್ಯಂತ ಖುಷಿ ನೀಡಿತ್ತು.
ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದ ವೇಳೆಯೂ ನನ್ನನ್ನು ನೆನಪು ಮಾಡಿಕೊಳ್ಳುತ್ತಿದ್ದರು ಎಂದು ಶ್ರೀಗಳ ಆಪ್ತ ಸಹಾಯಕರು ತಿಳಿಸಿದ್ದರು. ನಾನು ರಾಜಕೀಯ ಸೇರುತ್ತೇನೆಂಬ ವದಂತಿ ಹಬ್ಬಿದಾಗ ಶ್ರೀಗಳು ನನ್ನ ಜತೆಗೆ ಮಾತನಾಡಿದ್ದರು. ಅಂತಹ ಆಕಾಂಕ್ಷೆ ಇದ್ದರೆ ತಿಳಿಸಿ. ನಾನು ಮೇಲ್ಮಟ್ಟದಲ್ಲಿ ಮಾತನಾಡುತ್ತೇನೆ ಎಂದಿದ್ದರು. ಆದರೆ ನಾನು ನಿರಾಕರಿಸಿದಾಗ ಧಾರ್ಮಿಕ ಕ್ಷೇತ್ರದಲ್ಲೇ ಮುಂದುವರಿದು ಸಮುದಾಯದ ಜತೆಗಿರಲು ಸೂಚಿಸಿದ್ದರು ಎಂದರು.
ಸಮಾನತೆಯ ಚಳವಳಿಗೆ ಅವರು ನನ್ನನ್ನು ಸಾಕ್ಷೀಕರಿಸಿದ್ದರು. ಅಸಮಾನತೆ ಹೊಡೆದೋಡಿ ಸಲು ದೊಡ್ಡ ಮಟ್ಟದಲ್ಲಿ ಧ್ವನಿ ಎತ್ತಿದ್ದರು. ಈ ಕಾರಣಕ್ಕೆ ಪ್ರಗತಿಪರರು ಹಾಗೂ ಸಮುದಾಯ ಎರಡೂ ಕಡೆಯಿಂದ ಟೀಕೆ ವ್ಯಕ್ತವಾದವು. ಅವರ ಪಾದಯಾತ್ರೆಯನ್ನು ನಾಟಕ ಎಂದು ಜರಿದರು. ಆದರೆ ಶ್ರೀಗಳು ಟೀಕೆಗಳಿಗೆ ಎದೆ ಗುಂದದೆ ತಮ್ಮ ಕಾಯಕ ಮುಂದುವರಿಸಿದರು.
ಮೈಸೂರಿನ ಬ್ರಾಹ್ಮಣ ಕೇರಿಯಲ್ಲಿ ನಮ್ಮ ಪಾದಯಾತ್ರೆ ನಡೆಸುವ ಮೂಲಕ ನಮ್ಮ ಜತೆ ಅವರ ಬಾಂಧವ್ಯ ಬೆಳೆಯಿತು. ಚಿತ್ರದುರ್ಗದ ಮಾದಾರ ಚನ್ನಯ್ಯ ಗುರುಪೀಠಕ್ಕೆ ಬರಬೇಕು ಎನ್ನುವುದು ಅವರ ಆಸೆಯಾಗಿತ್ತು. ಆದರೆ ಆ ಆಸೆ ಹಾಗೇ ಉಳಿಯಿತು ಎನ್ನುತ್ತಾ ಮಾದಾರ ಚನ್ನಯ್ಯ ಶ್ರೀಗಳು ಗದ್ಗದಿತರಾದರು.