ಡೆಂಘೀ ತಡೆಗೆ ಮುನ್ನೆಚ್ಚರಿಕೆಯೇ ಮದ್ದು
Team Udayavani, Jun 5, 2020, 2:53 PM IST
ಸಾಂದರ್ಭಿಕ ಚಿತ್ರ
ಮೊಳಕಾಲ್ಮೂರು: ತಾಲೂಕಿನ ಪ್ರತಿಯೊಂದು ಗ್ರಾಮಗಳಿಗೆ ತೆರಳಿ ಆಟೋದಲ್ಲಿ ಮೈಕಿಂಗ್ ಮುಖಾಂತರ ಡೆಂಘೀ ಹರಡದಂತೆ ಸಮುದಾಯಕ್ಕೆ ಜಾಗೃತಿ ಮೂಡಿಸಬೇಕಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ| ಪದ್ಮಾವತಿ ತಿಳಿಸಿದರು.
ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ತಾಲೂಕು ಆರೋಗ್ಯ ಇಲಾಖೆ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಡೆಂಘೀ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪ್ರಸ್ತುತದಲ್ಲಿ ಮುಂಗಾರು ಮಳೆ ಸುರಿಯುತ್ತಿರುವುದರಿಂದ ಸೊಳ್ಳೆಗಳ ಪ್ರಮಾಣ ಹೆಚ್ಚಾಗಲಿರುವುದರಿಂದ ಡೆಂಘೀ ಪ್ರಕರಣ ಏರಿಕೆಯಾಗುವ ಸಾಧ್ಯತೆಯೂ ಇದೆ. ಮನೆಗಳಲ್ಲಿನ ನೀರಿನ ಸಂಗ್ರಹಾಗಾರಗಳಲ್ಲಿ ಸೊಳ್ಳೆ ಮರಿ ಉತ್ಪತ್ತಿಯಾಗದಂತೆ ಜಾಗೃತಿ ವಹಿಸಬೇಕಾಗಿದೆ. ಮನೆಗಳಲ್ಲಿನ ನೀರಿನ ತೊಟ್ಟಿಗಳು, ಡ್ರಮ್ಗಳನ್ನು ವಾರಕ್ಕೊಮ್ಮೆ ಚೆನ್ನಾಗಿ ಉಜ್ಜಿ ತೊಳೆಯಬೇಕಾಗಿದೆ. ತೊಳೆದ ನೀರಿನ ತೊಟ್ಟಿಗಳು ಮತ್ತು ಡ್ರಮ್ ಗಳನ್ನು ಒಣಗಿಸಿ ಮರು ಬಳಕೆ ಮಾಡಬೇಕು ಎಂದರು.
ಸೊಳ್ಳೆಯಿಂದ ಹರಡುವ ಸಾಂಕ್ರಾಮಿಕ ರೋಗಗಳನ್ನು ತಡೆಯಬೇಕಾದರೆ ಸಮುದಾಯದ ಸಹಕಾರ ಅಗತ್ಯವಾಗಿದ್ದು, ಡೆಂಘೀ ಮತ್ತು ಚಿಕನ್ ಗುನ್ಯಾ ನಿಯಂತ್ರಣಕ್ಕೆ ಮುನ್ನೆಚ್ಚರಿಕೆಯೇ ಮದ್ದು. ಕ್ಷೇತ್ರ ಮಟ್ಟದಲ್ಲಿ ಆರೋಗ್ಯ ಸಹಾಯಕರು ಬಂದಾಗ ನಿಮ್ಮಲ್ಲಿ ಜ್ವರ, ಮೈ, ಕೈ ನೋವು, ತಲೆನೋವು ಇದ್ದಲ್ಲಿ ಹತ್ತಿರದ ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕಾಗಿದೆ. ಡೆಂಘೀ ಜ್ವರಕ್ಕೆ ನಿರ್ದಿಷ್ಟವಾದ ಚಿಕಿತ್ಸೆ ಇರುವುದಿಲ್ಲ. ರೋಗ ಲಕ್ಷಣಕ್ಕೆ ಅನುಗುಣವಾಗಿ ಚಿಕಿತ್ಸೆ ನೀಡಲಾಗುವುದು. ಆದ್ದರಿಂದ ರೋಗ ಬಾರದಂತೆ ಮುಂಜಾಗ್ರತೆ ಕ್ರಮ ಅನುಸರಿಸಿ ಡೆಂಘೀ ನಿರ್ಮೂಲನೆ ಮಾಡಬೇಕಿದೆ ಎಂದರು.
ಶಸ್ತ್ರಚಿಕಿತ್ಸಕ ಡಾ| ಅಭಿನವ್, ಕೀಟಶಾಸ್ತ್ರಜ್ಞೆ ನಂದಿನಿ ಕಡಿ, ಜಿಲ್ಲಾ ಆರೋಗ್ಯ ಮೇಲ್ವಿಚಾರಕರಾದ ಒ.ಶ್ರೀನಿವಾಸ್, ವೈ. ತಿಪ್ಪೇಸ್ವಾಮಿ ತಾಲೂಕು ಆರೋಗ್ಯ ಮೇಲ್ವಿಚಾರಕ ವೆಂಕಟೇಶ್, ಶುಶ್ರೂಷಕಿ ಸುಧಾ, ಜಯಲಕ್ಷ್ಮೀ, ನಿರ್ಮಲಾ, ರೇಣುಕಾ, ಆರೋಗ್ಯ ಸಹಾಯಕಿ ರೂಪಾ, ಸರಸ್ವತಿ ಮತ್ತು ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.