ನಕಲಿ ಖಾತೆಗೆ ಹಣ-ಪ್ರತಿಭಟನೆ
Team Udayavani, May 19, 2020, 7:25 AM IST
ಚಿತ್ರದುರ್ಗ: ಕೋವಿಡ್ ವೈರಸ್ ನಿಯಂತ್ರಣಕ್ಕೆ ಲಾಕ್ಡೌನ್ ಆಗಿರುವ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶ್ರಮಿಕ ವರ್ಗಕ್ಕೆ ಹಣದ ನೆರವು ನೀಡುವುದಾಗಿ ಘೋಷಿಸಿದ್ದು, ನಿಜವಾದ ಕಟ್ಟಡ ಕಾರ್ಮಿಕರಿಗೆ ಈವರೆಗೆ ಹಣ ತಲುಪದೆ ನಕಲಿ ಕಾರ್ಮಿಕರ ಖಾತೆಗಳಿಗೆ ಜಮೆಯಾಗಿದೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಚಿತ್ರದುರ್ಗ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಮಿತಿಯಿಂದ ಸೋಮವಾರ ಕಾರ್ಮಿಕ ಅಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಸರ್ಕಾರ ಘೋಷಿಸಿರುವ ಐದು ಸಾವಿರ ರೂ. ಕಾರ್ಮಿಕರ ಖಾತೆಗಳಿಗೆ ಜಮಾ ಆಗುತ್ತಿರುವುದನ್ನು ಖಾತ್ರಿ ಪಡಿಸಬೇಕು. ಲಾಕ್ಡೌನ್ನಿಂದ ಲಾಕ್ ಆಗಿರುವ ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ಹೋಗಲು ಉಚಿತ ರೈಲು ಸಂಚಾರ ಆರಂಭಿಸಬೇಕು ಎಂದು ಇದೇ ವೇಳೆ ಆಗ್ರಹಿಸಿದರು. ಕಟ್ಟಡ ಕಾರ್ಮಿಕರ ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಸಿ.ಕೆ.ಗೌಸ್ಪೀರ್, ಜಿಲ್ಲಾಧ್ಯಕ್ಷ ಬಿ.ಸಿ.ನಾಗರಾಜಚಾರಿ, ಖಜಾಂಚಿ ಷೇಕ್ಖಲೀಂವುಲ್ಲಾ, ಸಹ ಕಾರ್ಯದರ್ಶಿ ಭಾಸ್ಕರಚಾರಿ, ಎಂ.ಡಿ.ಜಿಕ್ರಿಯಾ, ಕೃಷ್ಣ, ಎಂ.ಡಿ.ಸಮೀವುಲ್ಲಾ, ಸಣ್ಣಮ್ಮ, ಅಬ್ದುಲ್ಲಾ, ಡಾರ್ಜಿನ್ ರಾಜ, ಸಣ್ಣ ಈರಪ್ಪ, ಲಕ್ಕಪ್ಪ, ದಾದಾಪೀರ್, ಕುಮಾರ್ ಮತ್ತಿತರರಿದ್ದರು.