ಸಿರಿಧಾನ್ಯ ಆಹಾರ ಪದ್ಧತಿ ಮೈಗೂಡಿಸಿಕೊಳ್ಳಿ: ರವೀಂದ್ರ
Team Udayavani, Apr 8, 2018, 2:23 PM IST
ಚಿತ್ರದುರ್ಗ: ನಾಗರಿಕರು ಒಂದಲ್ಲ ಒಂದು ಸಮಯದಲ್ಲಿ ಖನ್ನತೆಗೆ ಒಳಗಾಗುತ್ತಾರೆ. ಆ ಸಮಸ್ಯೆ ನಿವಾರಣೆಗೆ ನಾವೇ ಗುರುಗಳಾಗಿ ಪರಿಹಾರ ಕಂಡುಕೊಳ್ಳಬೇಕು ಎಂದು ಜಿಪಂ ಸಿಇಒ ಪಿ.ಎನ್. ರವೀಂದ್ರ ಹೇಳಿದರು.
ಇಲ್ಲಿನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ವಿಶ್ವ ಆರೋಗ್ಯ ದಿನಾಚರಣೆ ಮತ್ತು ಮತದಾನ ಹಕ್ಕು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬ ಮನುಷ್ಯ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಸಿರಿಧಾನ್ಯ ಆಹಾರ ಪದ್ಧತಿಯನ್ನು ಮೈಗೂಡಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು. ಜೀವನದಲ್ಲಿ ಯಾವುದೇ ಸಮಸ್ಯೆಗಳಿಗೆ ಎದೆಗುಂದದೆ ಸಿಗುವ ಅವಕಾಶ ಬಳಸಿಕೊಂಡು ಬದುಕಿನಲ್ಲಿ ಆರೋಗ್ಯದಿಂದ ಸಂತೋಷವಾಗಿರಬೇಕು ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ| ಪಾಲಾಕ್ಷಪ್ಪ ಮಾತನಾಡಿ, ಪ್ರಸಕ್ತ ವರ್ಷದ ಘೋಷಣೆ ಆರೋಗ್ಯ ರಕ್ಷಣೆ ಎಲ್ಲರಿಗೂ ಎಲ್ಲೆಡೆಗೂ ಎಂಬುದಾಗಿದೆ. ಆರೋಗ್ಯದ ಬಗ್ಗೆ ಅರಿತುಕೊಳ್ಳಬೇಕು. ಸುವರ್ಣ ಆರೋಗ್ಯ ಟ್ರಸ್ಟ್ ವತಿಯಿಂದ ಎಲ್ಲ ರೀತಿಯ ಗಂಭೀರ ಕಾಯಿಲೆಗಳಿಗೆ ಉಚಿತ ಆರೋಗ್ಯ ಸೇವೆ ನೀಡಲಾಗುತ್ತಿದೆ. ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ಈಗಿನ ಆಹಾರ ವಿಷಪೂರಿತವಾಗಿದ್ದು ಆಹಾರ ಸೇವಿಸುವ ಪದ್ಧತಿಯಲ್ಲಿ ಸಿರಿಧಾನ್ಯಗಳ ಬಳಕೆಯಿಂದ ಸಮತೋಲನ ಆಹಾರ ಸೇವಿಸುವ ರೂಢಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಬಹುದು. ಆಶಾ ಕಾರ್ಯಕರ್ತೆಯರು ಗ್ರಾಮೀಣ ಭಾಗದಲ್ಲಿ ಸಾರ್ವಜನಿಕರಿಗೆ ಆರೋಗ್ಯದ ಬಗ್ಗೆ ಅರಿವು ಮೂಡಿಸಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಮಲೇರಿಯಾ ನಿಯಂತ್ರಣಾಧಿಕಾರಿ ಜಯಮ್ಮ, ರೆಡ್ಕ್ರಾಸ್ ಸಂಸ್ಥೆ ಅಧ್ಯಕ್ಷ ಮಹೇಂದ್ರನಾಥ್ ಮಾತನಾಡಿದರು. ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ| ಸುಧಾ ಮತ್ತಿತರ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ನೀರಜ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸ್ವಯಂಪ್ರೇರಣೆಯಿಂದ ಮತದಾನ ಮಾಡಿ ಪ್ರಜಾಪ್ರಭುತ್ವದಲ್ಲಿ ಮತದಾನ ಪ್ರಮುಖವಾಗಿದ್ದು, ಪ್ರತಿಯೊಬ್ಬ ಅರ್ಹ ಪ್ರಜೆಗಳು ಕಡ್ಡಾಯವಾಗಿ ತಪ್ಪದೇ ಚುನಾವಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಮತದಾನ ಮಾಡಬೇಕು. ಮಿಂಚಿನ ನೋಂದಣಿ ಕಾರ್ಯಕ್ರಮ ಏ. 8ರಿಂದ ಪ್ರಾರಂಭವಾಗಲಿದೆ. ಹಣ, ಆಮಿಷಗಳಿಗೆ ಬಲಿಯಾಗದೆ ಸ್ವಯಂ ಪ್ರೇರಣೆಯಿಂದ ಮತದಾನ ಮಾಡಬೇಕು. ಆಶಾ ಕಾರ್ಯಕರ್ತೆಯರು ತಮ್ಮ ಸುತ್ತಮುತ್ತಲಿನ ಜನಸಾಮಾನ್ಯರಿಗೆ ಮತದಾನದ ಬಗ್ಗೆ ಅರಿವು ಮೂಡಿಸಬೇಕು ಎಂದು ಜಿಪಂ ಸಿಇಒ ಪಿ.ಎನ್. ರವೀಂದ್ರ ಸೂಚಿಸಿದರು.