ಸಕ್ಕರೆ ಕಾರ್ಖಾನೆ ಪುನರಾರಂಭಕ್ಕೆ ಮನವಿ
Team Udayavani, Jul 27, 2020, 11:13 AM IST
ಹಿರಿಯೂರು: ವಾಣಿವಿಲಾಸ ಸಕ್ಕರೆ ಕಾರ್ಖಾನೆಯನ್ನುಪುನರಾರಂಭಿಸಬೇಕು ಎಂದು ಕೃಷಿಕ ಸಮಾಜದ ಅಧ್ಯಕ್ಷ ಎಚ್.ಆರ್. ತಿಮ್ಮಯ್ಯ ಅವರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಹಾಗೂ ಸಂಸದ ಎ. ನಾರಾಯಣಸ್ವಾಮಿ ಅವರಲ್ಲಿ ಮನವಿ ಮಾಡಿದ್ದಾರೆ. ವಾಣಿವಿಲಾಸ ಸಹಕಾರಿ ಸಕ್ಕರೆ ಕಾರ್ಖಾನೆ ಸುಮಾರು
1971-72ರಲ್ಲಿ ಪ್ರಾರಂಭಗೊಂಡಿದೆ. ಪ್ರತಿನಿತ್ಯ 1250 ಮೆಟ್ರಿಕ್ ಟನ್ ಕಬ್ಬು ಅರೆಯುವ ಸಾಮರ್ಥ್ಯ ಹೊಂದಿದ್ದು, ಸುಮಾರು 250 ಎಕರೆ ವಿಸ್ತೀರ್ಣ ಪ್ರದೇಶದ ವ್ಯಾಪ್ತಿಯಲ್ಲಿ ಸ್ಥಾಪಿಸಲಾಗಿದೆ. ಬೆಂಗಳೂರು-ಪೂನಾ ರಾಷ್ಟ್ರೀಯ ಹೆದ್ದಾರಿ ಹಾಗೂ ಶ್ರೀರಂಗಪಟ್ಟಣ-ಬೀದರ್ ರಾಷ್ಟ್ರೀಯ ಹೆದ್ದಾರಿಗಳ ನಡುವೆ ಈ ಕಾರ್ಖಾನೆ ಸ್ಥಾಪನೆಗೊಂಡಿದೆ. ಸಕ್ಕರೆ ಕಾರ್ಖಾನೆ ಜಿಲ್ಲೆಯ ಹಿರಿಯೂರು, ಚಳ್ಳಕೆರೆ, ಚಿತ್ರದುರ್ಗ, ಹೊಸದುರ್ಗ, ಹೊಳಲ್ಕೆರೆ ತಾಲೂಕುಗಳು ಅಲ್ಲದೆ ತುಮಕೂರು
ಜಿಲ್ಲೆಯ ಶಿರಾ, ಚಿಕ್ಕನಾಯಕನಹಳ್ಳಿ ತಾಲೂಕುಗಳ ಕಬ್ಬು ಬೆಳೆಯುವ ಪ್ರದೇಶದ ವ್ಯಾಪ್ತಿ ಹೊಂದಿದೆ. ಈ ಸಕ್ಕರೆ ಕಾರ್ಖಾನೆಗೆ ಹೊಂದಿಕೊಂಡಂತೆ ಇದರ ತ್ಯಾಜ್ಯ ಮಲಾಸಿನ್ನಿಂದ ಸ್ಪಿರಿಟ್ ತಯಾರು ಮಾಡಲು ಡಿಸ್ಟಲರಿಯನ್ನೂ ಪ್ರಾರಂಭಿಸಲಾಗಿತ್ತು. ಆದರೆ ಕ್ರಮೇಣ ಜಿಲ್ಲೆ ಸತತ ಬರಗಾಲಕ್ಕೆ ತುತ್ತಾಯಿತು.
ಅಲ್ಲದೆ ವಾಣಿವಿಲಾಸ ಸಾಗರದಲ್ಲಿ ನೀರಿನ ಕೊರತೆಯುಂಟಾಗಿ ರೈತರು ಕಬ್ಬು ಬೆಳೆಯುವುದನ್ನು ನಿಲ್ಲಿಸಿದ ಪರಿಣಾಮ ಈ ಕಾರ್ಖಾನೆ ಕಬ್ಬು ಅರೆಯುವುದನ್ನು ನಿಲ್ಲಿಸಿ ಲಾಕ್ಡೌನ್ ಘೋಷಿಸಲಾಯಿತು. ಇದರಿಂದ ಈ ಸಕ್ಕರೆ ಕಾರ್ಖಾನೆಯನ್ನೇ ನಂಬಿದ ನೂರಾರು ಕುಟುಂಬಗಳು ಹಾಗೂ ಕಾರ್ಖಾನೆ ಕಾರ್ಮಿಕರ ಬದುಕು ಬೀದಿಪಾಲಾಯಿತು ಎಂದಿದ್ದಾರೆ.
ಇದೀಗ ವಾಣಿವಿಲಾಸ ಸಾಗರಕ್ಕೆ ಪ್ರತಿ ವರ್ಷ ಭದ್ರಾ ಜಲಾಶಯದಿಂದ ಸುಮಾರು 10 ಟಿಎಂಸಿ ನೀರು ಬರುವ ಸಂಭವವಿದೆ. ರೈತರು ಕಬ್ಬು ಬೆಳೆಯಲು ಪ್ರೋತ್ಸಾಹ ನೀಡಿ ಸಾವಿರಾರು ಕುಟುಂಬಗಳಿಗೆ ಆಶ್ರಯವಾದ ಈ ಕಾರ್ಖಾನೆಯನ್ನು ಮತ್ತೆ ತೆರೆಯಬೇಕು ಎಂಬುದು ಈ ಜಿಲ್ಲೆಯ ಜನರ ಒತ್ತಾಸೆಯಾಗಿದೆ. ಕಾರ್ಮಿಕ ಮತ್ತು ಸಕ್ಕರೆ ಖಾತೆ ಸಚಿವ ಶಿವರಾಂ ಹೆಬ್ಟಾರ್ ರವರು ಸಕ್ಕರೆ ನಿರ್ದೇಶನಾಲಯದ ಅ ಧಿಕಾರಿಗಳೊಂದಿಗೆ ಸಭೆ ನಡೆಸಿ
ಸಕ್ಕರೆ ಕಾರ್ಖಾನೆಯನ್ನು ಮಾರಾಟ ಮಾಡುವ ಸಲುವಾಗಿ ಒಬ್ಬ ವಿಶೇಷಾಧಿಕಾರಿಯನ್ನು ನೇಮಿಸಿರುವುದಾಗಿ ತಿಳಿದುಬಂದಿದೆ. ಯಾವುದೇ ಕಾರಣಕ್ಕೂ ಜಿಲ್ಲೆಯ ರೈತರ ಸ್ವತ್ತಾಗಿರುವ ವಾಣಿವಿಲಾಸ ಸಕ್ಕರೆ ಕಾರ್ಖಾನೆಯನ್ನು ಮಾರಾಟ ಮಾಡದೆ ಪುನರಾರಂಭಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.