ಧಾರಾಕಾರ ಮಳೆ: ಮನೆಗೆ ನುಗ್ಗಿದ ನೀರು
Team Udayavani, May 19, 2018, 6:05 PM IST
ಹೊಳಲ್ಕೆರೆ: ತಾಲೂಕಿನ ವಿವಿಧೆಡೆ ಗುರುವಾರ ತಡರಾತ್ರಿ ಸುರಿದ ಧಾರಾಕಾರ ಮಳೆಯಿಂದ ತಗ್ಗು ಪ್ರದೇಶಗಳ ಮನೆಗೆ ನೀರು ನುಗ್ಗಿ ಅಪಾರ ಹಾನಿಯಾಗಿದೆ.
ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಚರಂಡಿ ನೀರು ಮನೆಗಳಿಗೆ ನುಗ್ಗಿದ ಪರಿಣಾಮ ನೂರಾರು ಮನೆಗಳು ಜಲಾವೃತಗೊಂಡಿದ್ದು, ಲಕ್ಷಾಂತರ ಮೌಲ್ಯದ ವಸ್ತುಗಳು ನೀರು ಪಾಲಾಗಿವೆ. ಗುರುವಾರ ರಾತ್ರಿ ಸತತವಾಗಿ 3ಗಂಟೆಗಳ ಕಾಲ ಸುರಿದ ಮಳೆಗೆ ಪಟ್ಟಣದ ಬಂಡಮ್ಮ ದೇವಸ್ಥಾನ, ಚನ್ನಪ್ಪ ಬಡಾವಣೆ ಸೇರಿದಂತೆ ತಗ್ಗು ಪ್ರದೇಶಗಳ
ಮನೆಗಳಿಗೆ ಮಳೆಯ ನೀರು ನುಗ್ಗಿ ನಿವಾಸಿಗಳು ರಾತ್ರಿ ಹೊತ್ತು ನೀರಿನಲ್ಲಿ ಕಾಲಕಳೆಯುವಂತಾಗಿದೆ.
ಪಟ್ಟಣದ ಬಸ್ ನಿಲ್ದಾಣ, ಗಣಪತಿ ರಸ್ತೆ, ಕುರುಬರ ಬಡಾವಣೆ, ಚನ್ನಪ್ಪ ಬಡಾವಣೆಗಳಲ್ಲಿ, ಬಂಡೇಮ್ಮ ದೇವಸ್ಥಾನ ಭಾಗದಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲವಾಗಿದೆ. ಹೀಗಾಗಿ ಮಳೆ ನೀರು ಸರಾಗವಾಗಿ ಹರಿಯದೆ ಇರುವ ಚಿಕ್ಕಪುಟ್ಟ ಚರಂಡಿಗಳು ತುಂಬಿದ ಬಳಿಕ ಮನೆಗಳಿಗೆ ನುಗ್ಗಿದೆ. ಈ ಚರಂಡಿ ನೀರನ್ನು ತೆಗೆದುಹಾಕಲು ನಿವಾಸಿಗಳು ಹರಸಾಹಸ ಪಡುತ್ತಿದ್ದರು. ನೀರಿನ ಜತೆ ಚರಂಡಿಯಲ್ಲಿರುವ ಹೊಲಸು ಹಾಗೂ ಘನತಾಜ್ಯಗಳು ಕೊಚ್ಚಿಕೊಂಡು ಮನೆಯೊಳಗೆ ಸೇರಿಕೊಂಡಿದ್ದರಿಂದ ದುರ್ವಾಸನೆ ಬೀರುತ್ತಿತ್ತು.
ಮಳೆ ನೀರಿನಿಂದ ಮನೆಯಲ್ಲಿದ್ದ ದವಸ ಧಾನ್ಯ, ಬಟ್ಟೆ, ಪಾತ್ರೆ, ಇತರೆ ಸಾಮಗ್ರಿಗಳು ನೀರಿನಲ್ಲಿ ಕೊಚ್ಚಿ ಹೊಗಿವೆ. ಮನೆಯಲ್ಲಿದ್ದ ಅಕ್ಕಿ, ಜೋಳ, ರಾಗಿ ಸೇರಿದಂತೆ ಆಹಾರ ಪರ್ದಾಥಗಳು ನೀರಿನಲ್ಲಿ ನೆನೆದು ಉಪಯೋಗಕ್ಕೆ ಬಾರದಂತೆ ಆಗಿವೆ.
ಪಂಚಾಯತ್ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನದಿಂದಾಗಿಯೇ ಮನೆಗಳು ಜಲಾವೃತಗೊಂಡಿವೆ. ಪಟ್ಟಣದ ನೀರೆಲ್ಲ ಚನ್ನಪ್ಪ ಬಡಾವಣೆಯ ನೂರಾರು ಮನೆಗಳಿಗೆ ನುಗ್ಗುತ್ತಿದ್ದರೂ ಸೂಕ್ತ ಚರಂಡಿ ಸೌಲಭ್ಯ ಕಲ್ಪಿಸಿಕೊಟ್ಟಿಲ್ಲ. ಸೂಕ್ತ ಸೌಲಭ್ಯ ಕಲ್ಪಿಸಬೇಕು ಎಂದು ಚನ್ನಪ್ಪ ಬಡಾವಣೆ ನಿವಾಸಿ ವಿಶ್ವನಾಥ ಒತ್ತಾಯಿಸಿದರು.
ಪಪಂ ನಿರ್ಲಕ್ಷ್ಯಕ್ಕೆ ಆಕ್ರೋಶ
ಚರಂಡಿ ಸ್ವತ್ಛಗೊಳಿಸಲಿ ಸುಮಾರು ಒಂದು ಕಿ.ಮೀ. ದೂರದ ಚರಂಡಿ ನೀರೆಲ್ಲ ನಮ್ಮ ಬಡಾವಣೆಗಳಿಗೆ ಹರಿದು
ಬರುತ್ತಿವೆ. ಚರಂಡಿಗಳನ್ನು ವರ್ಷ ಕಳೆದರೂ ಸ್ವತ್ಛಗೊಳಿಸದ ಪಪಂ ವಿರುದ್ಧ ಸುರೇಶ್ ಆಕ್ರೋಶ ವ್ಯಕ್ತಪಡಿಸಿದರು.’
ಸೂಕ್ತ ಪರಿಹಾರಕ್ಕೆ ಒತ್ತಾಯ ಮುಖ್ಯರಸ್ತೆಯಲ್ಲಿ ನೀರು ಹರಿಯಲು ಸೂಕ್ತ ಚರಂಡಿ ಸೌಲಭ್ಯವಿಲ್ಲ. ಹಾಗಾಗಿ ಚಿತ್ರದುರ್ಗ
ಶಿವಮೊಗ್ಗ ರಸ್ತೆಯ ಮೇಲಿನ ನೀರು ಮನೆಯೊಳಗೆ ನುಗ್ಗಿವೆ. ಮನೆಯಲ್ಲಿರುವ ಎಲ್ಲ ವಸ್ತುಗಳು ನೀರಿನಲ್ಲಿ ಮುಳುಗಿದೆ. ಪಪಂನವರು ಆಗಿರುವ ನಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಬಸವೇಶ್ವರ ಖಾನಾವಳಿ ಮಾಲಿಕ ಚಂದ್ರಪ್ಪ ನಾಡಿಗ್ ಒತ್ತಾಯಿಸಿದರು.