4ನೇ ಶನಿವಾರ: ಕೆಲವೆಡೆ ರಜೆಯಲ್ಲೂ ಕೆಲಸ !
ತಿಳಿಯದೇ ಬಂದು ವಾಪಸ್ ಹೋದ ಸಾರ್ವಜನಿಕರು
Team Udayavani, Jun 23, 2019, 5:12 AM IST
ಕಾಪು ತಾಲೂಕು ಕಚೇರಿಯಲ್ಲಿ ಕರ್ತವ್ಯ ನಿರತ ಸಿಬಂದಿ.
ಮಂಗಳೂರು/ಉಡುಪಿ: ರಾಜ್ಯ ಸರಕಾರಿ ನೌಕರರಿಗೆ ತಿಂಗಳ ನಾಲ್ಕನೇ ಶನಿವಾರದಂದು ಸರಕಾರ ರಜೆ ಘೋಷಿಸಿದ್ದರಿಂದ ಶನಿವಾರ ಸರಕಾರಿ ಕಚೇರಿಗಳ ಎಲ್ಲ ವಿಭಾಗಗಳು ಮುಚ್ಚಿದ್ದವು. ಆದರೆ ಸರಕಾರದ ಆದೇಶದ ಬಗ್ಗೆ ಮಾಹಿತಿ ಇಲ್ಲದೇ ಇದ್ದ ಕೆಲ ಸಾರ್ವಜನಿಕರು ಕಚೇರಿಗೆ ಬಂದು ಬರಿಗೈಲಿ ವಾಪಸಾಗಬೇಕಾಯಿತು.
ಉಭಯ ಜಿಲ್ಲೆಗಳ ಜಿಲ್ಲಾಧಿಕಾರಿ ಕಚೇರಿ, ಜಿ.ಪಂ. ಕಚೇರಿ, ತಾಲೂಕು ಕಚೇರಿಗಳು, ಆರ್ಟಿಒ ಕಚೇರಿಗಳು, ನಗರ ಸಭೆ, ನಗರ ಪಾಲಿಕೆ ಕಚೇರಿಗಳು, ರೈತಸಂಪರ್ಕ ಕೇಂದ್ರ, ಮಿನಿ ವಿಧಾನಸೌಧ ಇತ್ಯಾದಿ ಸಾರ್ವಜನಿಕ ಸೇವೆಗೆ ಅಗತ್ಯವಿರುವ ಕಚೇರಿಗಳು ಮುಚ್ಚಿದ್ದವು. ಯಾವತ್ತಿನಷ್ಟು ಜನರು ಇಲ್ಲಿಗೆ ಬರದಿದ್ದರೂ ಒಂದಷ್ಟು ಜನ ಬಂದು, ರಜೆ ಫಲಕ ನೋಡಿ ವಾಪಸಾದರು.
ರಜೆ ಇದ್ದರೂ ಕೆಲಸ
ಬೆಳ್ತಂಗಡಿ, ಬಂಟ್ವಾಳ, ಸುಳ್ಯ, ಕಾಪು ಮುಂತಾದೆಡೆಗಳಲ್ಲಿ ತಾ.ಪಂ.ಕಚೇರಿಗಳಲ್ಲಿ ಸಿಬಂದಿ ಕೆಲಸ ಮಾಡಿದರು. ಬೆಳ್ತಂಗಡಿ ತಹಶೀಲ್ದಾರ್ ಗಣಪತಿ ಶಾಸ್ತ್ರಿ ಸೇರಿದಂತೆ ಕಚೇರಿಯ ಬಹುತೇಕ ಸಿಬಂದಿ ಕರ್ತವ್ಯ ನಿರ್ವಹಿಸಿದ್ದಾರೆ. ಕಡತ ವಿಲೇವಾರಿ ದೃಷ್ಟಿಯಿಂದ ಕೆಲಸ ಮಾಡಲಾಗಿತ್ತು. ಕೆಲವೆಡೆ ಪ್ರಧಾನಮಂತ್ರಿ ಕಿಸಾನ್ ಸಮ್ಮನ್ ಯೋಜನೆ ನೋಂದಣಿ ನಿಮಿತ್ತ ರೈತರಿಗೆ ಅನುಕೂಲ ಮಾಡಿ ಕೊಡಲು ಸಿಬಂದಿ ಸೇವೆ ಸಲ್ಲಿಸಿದರು.
ಈವರೆಗೆ ಕೇಂದ್ರ ಸರಕಾರಿ ನೌಕರರಿಗೆ ಎರಡನೇ ಮತ್ತು ನಾಲ್ಕನೇ ಶನಿವಾರ ರಜೆ ಇದ್ದರೆ, ರಾಜ್ಯ ಸರಕಾರಿ ನೌಕರರಿಗೆ ತಿಂಗಳ ಎರಡನೇ ಶನಿವಾರ ಮಾತ್ರ ರಜೆ ನೀಡಲಾಗುತ್ತಿತ್ತು. ಆದರೆ, ಕಳೆದ ಕೆಲವು ಸಮಯಗಳ ಹಿಂದೆ ಕೇಂದ್ರ ಸರಕಾರಿ ನೌಕರರಂತೆ ರಾಜ್ಯ ಸರಕಾರಿ ನೌಕರರಿಗೂ ಪ್ರತಿ ತಿಂಗಳ ನಾಲ್ಕನೇ ಶನಿವಾರ ರಜೆ ನೀಡುವು ದಾಗಿ ರಾಜ್ಯ ಸರಕಾರ ಘೋಷಿಸಿತ್ತು.ಎಲ್ಲೆಡೆ ನ್ಯಾಯಾಲಯ ಎಂದಿನಂತೆ ಕಾರ್ಯಾಚರಿಸಿತು.