ಬದನಕಜೆ: 7 ಕುಟುಂಬಗಳಿಗೆ ಸವಲತ್ತು ದೂರ!
Team Udayavani, Jul 2, 2018, 2:35 AM IST
ಸುಬ್ರಹ್ಮಣ್ಯ: ಅದು ಕಂದಾಯ ಗ್ರಾಮ. ರೇಷನ್, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಹಕ್ಕುಪತ್ರ ಎಲ್ಲವೂ ಇದೆ. ಆದರೂ ನಿವಾಸಿಗಳು ಉಳಿದೆಲ್ಲ ಸೌಕರ್ಯಗಳಿಂದ ವಂಚಿತರು! ಸುಳ್ಯ ತಾಲೂಕಿನ ಉಬರಡ್ಕ ಗ್ರಾಮದ ಬದನಕಜೆ ಕಾಲನಿಯ ಏಳು ಆದಿವಾಸಿ ಕುಟುಂಬಗಳ ದುರಂತ ಕತೆಯಿದು. ಸುಳ್ಯ – ಉಬರಡ್ಕ ಸಂಪರ್ಕ ರಸ್ತೆಯ ಸೂಂತೋಡು ಬಳಿಯಿಂದ ದಟ್ಟಾರಣ್ಯದ ಒಳಗೆ ಕಡಿದಾದ ರಸ್ತೆಗಳಲ್ಲಿ ತೆರಳಬೇಕು. ದೊಡ್ಡ ಗುಂಡಿಗಳು, ಮರದ ಬೇರುಗಳೇ ರಸ್ತೆಗೆ ಚಾಚಿವೆ. ಒಂದೆರಡು ಕಡೆ ಕಾಂಕ್ರೀಟ್ ಕಂಡಿದ್ದರೂ ಬಹುತೇಕ ಕಚ್ಚಾ ರಸ್ತೆ. ವಾಹನ ಸಂಚಾರ ಬಿಡಿ, ನಡೆದಾಡುವುದಕ್ಕೂ ಅಲ್ಲಿ ಸಾಧ್ಯವಿಲ್ಲ. ಏರು ತಗ್ಗು ಹತ್ತಿಳಿಯುತ್ತ ಮೂರು ತಾಸು ಕ್ರಮಿಸಬೇಕು.
ವೈರಿಂಗ್ ಇದೆ, ವಿದ್ಯುತ್ತಿಲ್ಲ
ಬಡತನದ ಕಾರಣ 7 ಕುಟುಂಬಗಳ ಸದಸ್ಯರೂ ಕೂಲಿ ಕೆಲಸಕ್ಕೆ ಹೋಗುತ್ತಾರೆ. ಹೆಚ್ಚಿನವರು ರಸ್ತೆ ಸರಿಯಿಲ್ಲದೆ ಅರ್ಧದಲ್ಲೆ ಶಾಲೆ ಬಿಟ್ಟವರು. ಶೌಚಾಲಯ ಇರುವುದು ಒಂದು ಮನೆಯಲ್ಲಿ ಮಾತ್ರ. ವಿದ್ಯುತ್ ಸಂಪರ್ಕವೂ ಇಲ್ಲ. ಎರಡು ವರ್ಷಗಳ ಹಿಂದೆ ರಾಜೀವ್ ಗಾಂಧಿ ವಿದ್ಯುತ್ ಯೋಜನೆಯಡಿ 40 ಕಂಬ ನೆಟ್ಟು ವಿದ್ಯುತ್ ತಂತಿ ಎಳೆದಿದ್ದರು. ಮನೆಗೆ ವೈರಿಂಗ್ ಮಾಡಿಸಿದ್ದರು. ಒಂದು ಬಾರಿ ಕರೆಂಟ್ ಬಂತು. ಮತ್ತೆಂದೂ ಉರಿಯಲಿಲ್ಲ. ತಂತಿ ಮತ್ತು ಕಂಬಗಳು ನೆಲಕ್ಕೆ ಉರುಳಿವೆ.
ದೇಜಮ್ಮ, ಪರಮೇಶ್ವರ, ಅಕ್ಕಮ್ಮ, ಮಾಲಿಂಗ, ಆನಂದ, ಕೃಷ್ಣಪ್ಪ, ನಾಗಪ್ಪ ಈ ಕುಟುಂಬಗಳ ಯಜಮಾನರು. ನಾಲ್ಕು ಕುಟುಂಬಗಳಿಗೆ ತಲಾ 62 ಸೆಂಟ್ಸ್ ಜಾಗವಿದ್ದರೆ, ಒಬ್ಬರಿಗೆ 9 ಸೆಂಟ್ಸ್, ಇಬ್ಬರಿಗೆ ತಲಾ ಐದು ಸೆಂಟ್ಸ್ ಜಾಗವಿದೆ. ಇಲ್ಲಿ ಒಟ್ಟು 10 ಪುರುಷರು, 9 ಮಹಿಳೆಯರು ಹಾಗೂ 7 ಮಕ್ಕಳಿದ್ದಾರೆ. ಏಳು ಮನೆಗಳಲ್ಲಿ ಒಟ್ಟು 26 ಜನರಿದ್ದು, 20 ಜನರಿಗೆ ಮತದಾನದ ಹಕ್ಕೂ ಇದೆ.
ರಸ್ತೆ ಸಮಸ್ಯೆ
ಮಳೆಗಾಲಕ್ಕೆ ಬೇಕಾದ ಆಹಾರ ವಸ್ತುಗಳನ್ನು ಮೊದಲೇ ಸಂಗ್ರಹಿಸಬೇಕು. ಅನಾರೋಗ್ಯಕ್ಕೆ ತುತ್ತಾದಾಗ ಸುಳ್ಯಕ್ಕೆ ನಡೆದು ಬಂದು ಔಷಧ ಒಯ್ಯುತ್ತಾರೆ. ಕಾಯಿಲೆ ತೀವ್ರವಾಗಿದ್ದರೆ ಕಂಬಳಿಯಲ್ಲಿ ಹೊತ್ತು ತರುತ್ತಾರೆ. ಸೌಲಭ್ಯಗಳಿಗೆ ಆಗ್ರಹಿಸಿ ಎರಡು ವರ್ಷಗಳ ಹಿಂದೆ ಮತದಾನ ಬಹಿಷ್ಕಾರಕ್ಕೆ ನಿರ್ಧರಿಸಿದಾಗ ತಹಶೀಲ್ದಾರ್ ಗ್ರಾಮಸ್ಥರ ಮನವೊಲಿಸಿ, ರಸ್ತೆ ನಿರ್ಮಿಸಲು ಅಡ್ಡಿಪಡಿಸದಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದರು.
ಆರೈಕೆ ಸಿಗುತ್ತಿಲ್ಲ
ನಕ್ಸಲ್ ಪ್ಯಾಕೇಜ್ ಅಡಿಯಲ್ಲಿ ಅಕ್ಕಿ, ಮೊಟ್ಟೆ, ಹೆಸರುಕಾಳು, ಅಲಸಂಡೆ ಬೀಜ, ಕಡಲೆ ಸಿಗುತ್ತವೆ. ಆದರೆ, ಆರೋಗ್ಯ ತಪಾಸಣೆ ಮಾಡುತ್ತಿಲ್ಲ. 13 ವರ್ಷಗಳ ಹಿಂದೆ ಮಂಗನ ಕಾಯಿಲೆ ಕಾಡಿತ್ತು. ಕ್ಯಾನ್ಸರ್ಪೀಡಿತೆ ಜಾನಕಿ ಎಂಬ ಯುವತಿ, ಪಕ್ಷವಾತಕ್ಕೆ ತುತ್ತಾಗಿದ್ದ ವ್ಯಕ್ತಿಯೊಬ್ಬರು ಸೂಕ್ತ ಆರೈಕೆಯಿಲ್ಲದೆ ಮೃತಪಟ್ಟಿದ್ದರು. ಕಾಯಿಲೆಗಳಿಗೆ ತುತ್ತಾದಾಗ ಆರೈಕೆ ಸಿಗುತ್ತಿಲ್ಲ ಎನ್ನುತ್ತಾರೆ ಸ್ಥಳೀಯರು.
ಸಾವಿನ ದವಡೆ ಸೇರಿದರು
ಹಿಡಿ ಉಪ್ಪು ತರಬೇಕಿದ್ದರೂ ಮೂರು ತಾಸು ನಡೆದೇ ಸಾಗಬೇಕು. ಕಷ್ಟಗಳಿಂದ ನೊಂದ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಸ್ಥಳೀಯರೊಬ್ಬರು ಮಾಹಿತಿ ನೀಡಿದ್ದಾರೆ.
ಕೊಚ್ಚಿ ಹೋದ ಜಲ್ಲಿ
ವಿದ್ಯುತ್ ಹಾಗೂ ರಸ್ತೆಯದೇ ಇಲ್ಲಿ ಪ್ರಮುಖ ಸಮಸ್ಯೆ. ರಸ್ತೆ ಬಳಕೆಗೆ ಅರಣ್ಯ ಇಲಾಖೆ ಅಡ್ಡಿ ಇತ್ತು. ಈಗ ಇಲಾಖೆ ಒಪ್ಪಿಗೆ ಸೂಚಿಸಿದ್ದರಿಂದ ಇದ್ದ ಅಡ್ಡಿ ನಿವಾರಣೆಗೊಂಡಿದೆ. ರಸ್ತೆ ನಿರ್ಮಾಣಕ್ಕೆ ಜಲ್ಲಿ ತಂದು ರಾಶಿ ಹಾಕಿದ್ದಾರೆ. ಆದರೆ, ಜಡಿ ಮಳೆಗೆ ಜಲ್ಲಿಕಲ್ಲುಗಳು ಕೊಚ್ಚಿ ಹೋಗುತ್ತಿವೆ. ಬೇಗನೆ ರಸ್ತೆ ಕೆಲಸ ಆರಂಭಿಸಿ ಎಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.
ಸಮನ್ವಯದ ಮೂಲಕ ಅಭಿವೃದ್ಧಿ
ಮೀಸಲು ಅರಣ್ಯದೊಳಗೆ ಬದನಕಜೆ ಕಾಲನಿಗೆ ರಸ್ತೆ ಹಾದುಹೋಗಿದೆ. ಅರಣ್ಯ ಇಲಾಖೆ ಜತೆ ಸಮನ್ವಯ ಸಾಧಿಸಿ ಹಂತ ಹಂತವಾಗಿ ರಸ್ತೆ ಅಭಿವೃದ್ಧಿ ನಡೆಸುತ್ತೇವೆ. ಈಗ ರಸ್ತೆ ಕಾಮಗಾರಿಗೆ ಟೆಂಡರ್ ಆಗಿದ್ದು, ಕಾಮಗಾರಿಗೆ ಮಳೆ ಅಡ್ಡಿಯಾಗಿದೆ. ಜಿಗಣೆ ಕಾಟದಿಂದಾಗಿ ಉತ್ತರ ಕರ್ನಾಟಕದ ಕೂಲಿ ಕಾರ್ಮಿಕರು ಕೆಲಸಕ್ಕೆ ನಿಲ್ಲುತ್ತಿಲ್ಲ.
– ಹರೀಶ್ ರೈ, ಉಬರಡ್ಕ ಗ್ರಾ.ಪಂ. ಅಧ್ಯಕ್ಷ
— ಬಾಲಕೃಷ್ಣ ಭೀಮಗುಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್ ಪೋಸ್ಟ್ ವರದಿ
Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ