ಸ್ವಚ್ಛ ಪರಿಸರಕ್ಕೆ ಮಾದರಿಯಾದ ಹೊಟೇಲ್
ಯುವಕ ಮಂಡಲದಿಂದ ಕೊಳಚೆ ನೀರಿಗೆ ಇಂಗುಗುಂಡಿ ನಿರ್ಮಾಣ
Team Udayavani, Apr 12, 2019, 6:00 AM IST
ಕನಕಮಜಲಿನ ಶ್ರೀರಾಮ್ ಪೇಟೆಯಲ್ಲಿರುವ ಹೊಟೇಲ್ ಶ್ರೀರಾಮ….
ಕನಕಮಜಲು: ಪರಿಸರ ಮಾಲಿನ್ಯ ತಡೆಗೆ ಗ್ರಾಮೀಣ ಜನರೂ ಇತ್ತೀಚೆಗೆ ಒಲವು ತೋರುತ್ತಿದ್ದಾರೆ. ಕನಕ ಮಜಲು ಯುವಕ ಮಂಡಲ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮಾದರಿ ವ್ಯವಸ್ಥೆಯೊಂದನ್ನು ರೂಪಿಸಿದೆ. ಕನಕಮಜಲಿನ ಹೊಟೇಲ್ನಿಂದ ಹರಿಯುವ ಕೊಳಚೆ ನೀರಿಗೆ ಪ್ರತ್ಯೇಕ ಇಂಗು ಗುಂಡಿಯನ್ನು ನಿರ್ಮಿಸಿ ಸ್ವತ್ಛ ಪರಿಸರಕ್ಕೆ ಮಾದರಿಯಾಗಿದೆ.
ಕನಕಮಜಲು ಶ್ರೀರಾಂಪೇಟೆ ಯಲ್ಲಿರುವ ಹೊಟೇಲ್ ಶ್ರೀರಾಮದಲ್ಲಿ ಕೊಳಚೆ ನೀರು ಹರಿಯುವಿಕೆಗೆ ಇಂಗು ಗುಂಡಿಯನ್ನು ನಿರ್ಮಿಸಲಾಗಿದೆ. ಹೊಟೇಲ್ನಲ್ಲಿ ಕೈ ಹಾಗೂ ಪಾತ್ರೆ ತೊಳೆದ ನೀರು ನೇರ ಇಂಗು ಗುಂಡಿಗೆ ಹೋಗುತ್ತಿದೆ. ನೆಹರೂ ಯುವ ಕೇಂದ್ರ ಮಂಗಳೂರು, ಮಹಾತ್ಮಾ ಗಾಂಧಿ ಯುವ ಸ್ವಚ್ಛ ಮಹಾ ಅಭಿಯಾನ್, ಯುವಜನ ವಿಕಾಸ ಕೇಂದ್ರ-ಯುವಕ ಮಂಡಲ ಕನಕಮಜಲು ಅವರ ಸ್ವತ್ಛತಾ ಹಿ ಸೇವಾ ಎನ್ನುವ ಅಭಿಯಾನದ ಮೂಲಕ ಈ ಕಾರ್ಯ ನಡೆಸಲಾಗಿದೆ. ಭಾರತ ಸರಕಾರದ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯದ ಅಡಿಯಲ್ಲಿ ನೆಹರೂ ಯುವಕೇಂದ್ರ ಮಂಗಳೂರು ಇವರ ಮಹಾತ್ಮಾ ಗಾಂಧಿ ಸ್ವತ್ಛ ಮಹಾ ಅಭಿಯಾನ್ ಯೋಜನೆಯಲ್ಲಿ ಕನಕಮಜಲು ಯುವಕ ಮಂಡಲ ಈ ಕಾಮಗಾರಿಯನ್ನು ನಡೆಸಿದೆ.
ಶ್ರಮದಾನ
ಹೊಟೇಲ್ ಪಕ್ಕದಲ್ಲಿಯೇ ನಿರ್ಮಿಸಲಾಗಿರುವ ಇಂಗು ಗುಂಡಿ ಸುಮಾರು 6 ಅಡಿ ಆಳವಿದೆ. ಕನಕ ಮಜಲು ಯುವಕ ಮಂಡಲದ ಸದಸ್ಯರು ಶ್ರಮದಾನದ ಮೂಲಕ ಈ ಗುಂಡಿಯನ್ನು ನಿರ್ಮಿಸಿದ್ದಾರೆ. ಸ್ಥಳೀಯ ನಿವಾಸಿಯೋರ್ವರು ಗುಂಡಿ ತೋಡಲು ತಮ್ಮ ಹಿಟಾಚಿ ಕೊಟ್ಟು ಸಹಕರಿಸಿದ್ದಾರೆ. ಗುಂಡಿಯ ಒಳಗೆ ರಿಂಗ್ ಅಳವಡಿಸಲಾಗಿದೆ.
ಪೈಪ್ ಅಳವಡಿಕೆ
ಕೊಳಚೆ ನೀರು ಹರಿಯಲು ಪೈಪ್ ಅಳವಡಿಸಿ ಸಿಮೆಂಟಿನ ಮುಚ್ಚಳಿಕೆ ಹಾಕಲಾಗಿದೆ. ಈ ಇಂಗು ಗುಂಡಿಗೆ ಸುಮಾರು 8 ಸಾವಿರ ರೂ. ಖರ್ಚು ತಗಲಿದೆ. 2 ಸಾವಿರ ರೂ.ಗಳನ್ನು ಹೊಟೇಲ್ ಮಾಲಕರು ಹಾಗೂ ಉಳಿದ ಹಣವನ್ನು ಮಂಗಳೂರು ನೆಹರೂ ಯುವ ಕೇಂದ್ರ ಭರಿಸಿದೆ.
ಪರಿಸರ ಮಾಲಿನ್ಯಕ್ಕೆ ತಡೆ
ಪರಿಸರ ಮಲಿನವಾಗದಂತೆ ತಡೆಯುವುದಕ್ಕೆ ಇಂಗುಗುಂಡಿ ನಿರ್ಮಿಸಲಾಗಿದೆ. ಸ್ವತ್ಛತೆಗೆ ಒತ್ತು ಕೊಟ್ಟು ಈ ರೀತಿಯ ವ್ಯವಸ್ಥೆ ಮಾಡಿದ್ದೇವೆ. ಹಲವರ ಸಹಕಾರದಿಂದ ಈ ಕಾರ್ಯ ಕೈಗೂಡಿದೆ. ಸ್ವತ್ಛತೆಗೆ ಎಲ್ಲರೂ ಆದ್ಯತೆ ಕೊಡಬೇಕು.
ಮೋಹನ್, ಶ್ರೀರಾಮ… ಹೊಟೇಲ್ ಮಾಲಕ
ಶಿವಪ್ರಸಾದ್ ಮಣಿಯೂರು