ಎ.ಜೆ. ಆಸ್ಪತ್ರೆಯಲ್ಲಿ “ಮಧುಮೇಹಿಗಳ ಕ್ಷೇಮ ಕೇಂದ್ರ’ ಉದ್ಘಾಟನೆ
Team Udayavani, Nov 17, 2019, 3:10 AM IST
ಮಂಗಳೂರು: ನಗರದ ಕುಂಟಿಕಾನದಲ್ಲಿರುವ ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ “ಮಧುಮೇಹಿಗಳ ಕ್ಷೇಮ ಕೇಂದ್ರ’ (ಡಯಾಬಿಟೀಸ್ ವೆಲೆ°ಸ್ ಕ್ಲಿನಿಕ್) ಶನಿವಾರ ಉದ್ಘಾಟನೆಗೊಂಡಿತು. ಎಂಡೋಕ್ರಿನೊಲೊಜಿಸ್ಟ್ ತಜ್ಞ ಡಾ| ಗಣೇಶ್ ಬಿ.ಕೆ. ಮಾತನಾಡಿ, ಮಧು ಮೇಹವನ್ನು ಹೇಗೆ ತಡೆಗಟ್ಟಬಹುದು, ಬಂದಲ್ಲಿ ಉಲ್ಬಣಿಸದಂತೆ ಹೇಗೆ ನಿಭಾಯಿಸಬಹುದು ಎಂಬ ಬಗ್ಗೆ ಸಲಹೆ ಮತ್ತು ಚಿಕಿತ್ಸೆಯನ್ನು ಕ್ಷೇಮ ಕೇಂದ್ರದಲ್ಲಿ ಪಡೆಯಬಹುದು ಎಂದರು.
ಆರಂಭಿಕ ಹಂತದಲ್ಲೇ ತಡೆಯಲು 2-3 ತಿಂಗಳಿಗೊಮ್ಮೆ ಮಧುಮೇಹ ಪರೀಕ್ಷೆ, ವರ್ಷಕ್ಕೊಮ್ಮೆ ಅಂಗಾಂಗ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದರು. ಎಂಡೋಕ್ರಿನೊಲೊಜಿಸ್ಟ್ ತಜ್ಞ ಡಾ| ಕಿಶನ್ ದೇಲಂಪಾಡಿ ಮಾತನಾಡಿ, ಮಧುಮೇಹಿಗಳು ದ್ರಾಕ್ಷಿ, ಬಾಳೆಹಣ್ಣು, ಹಲಸಿನ ಹಣ್ಣಿನಿಂದ ದೂರ ಇರಬೇಕು ಎಂದು ಸಲಹೆ ನೀಡಿದರು.
ಶೇ. 25 ರಿಯಾಯಿತಿ
ಡಾ| ಶಿಲ್ಪಾ ಮೂಲ್ಕಿ ಮಾತನಾಡಿ, ಮಧುಮೇಹಿಗಳ ಆರೋಗ್ಯವನ್ನು ಸುಧಾರಿಸಲು ಎ.ಜೆ. ಆಸ್ಪತ್ರೆಯು ಮಧುಮೇಹಕ್ಕೆ ಸಮಗ್ರ ಚಿಕಿತ್ಸೆಗೆ ಒತ್ತು ನೀಡಿ ಡಯಾಬಿಟೀಸ್ ವೆಲೆ°ಸ್ ಕ್ಲಿನಿಕ್ ಆರಂಭಿಸಿದೆ. ಮಧುಮೇಹ ಆರೈಕೆಗೆ ಎ.ಜೆ. ಆಸ್ಪತ್ರೆಯಲ್ಲಿ ಕೈಗೆಟಕುವ ದರದಲ್ಲಿ ವಿವಿಧ ಪ್ಯಾಕೇಜ್ಗಳಿದ್ದು, ನವೆಂಬರ್ ಅಂತ್ಯದ ವರೆಗೆ ಶೇ. 25ರಷ್ಟು ರಿಯಾಯಿತಿ ಸೌಲಭ್ಯವಿದೆ ಎಂದರು.
ಎ.ಜೆ. ಆಸ್ಪತ್ರೆ ವೈದ್ಯಕೀಯ ಆಡಳಿತ ನಿರ್ದೇಶಕಿ ಅಮಿತಾ ಮಾರ್ಲ ಉಪಸ್ಥಿತರಿದ್ದರು. ಆರತಿ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.
ಎಳೆಯರನ್ನೂ ಬಿಡದ ಮಧುಮೇಹ!
ದೇಹದಲ್ಲಿ ಬೊಜ್ಜಿನ ಪ್ರಮಾಣ ಹೆಚ್ಚಾಗಿ ರಕ್ತದಲ್ಲಿ ಗ್ಲುಕೋಸ್ ಅಂಶ ಜಾಸ್ತಿಯಾಗಿ ಮಧುಮೇಹ ರೋಗ ಬರಬಹುದು. ಕಳೆದ 20 ವರ್ಷಗಳ ಹಿಂದೆ 40ರಿಂದ 50 ವರ್ಷದೊಳಗಿನ ಮಂದಿಗೆ ಮಧುಮೇಹ ಕಾಯಿಲೆ ಬರುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ 20-30 ವರ್ಷದೊಳಗಿನವರಲ್ಲೂ ಮಧುಮೇಹ ಕಾಣಿಸುತ್ತಿದೆ. ಶೇ. 10ರಷ್ಟು ಶಾಲಾ-ಕಾಲೇಜು ಮಕ್ಕಳಲ್ಲಿ ಬೊಜ್ಜುತನ ಕಾಣಿಸುತ್ತದೆ ಎಂದು ಡಾ| ಗಣೇಶ್ ಬಿ.ಕೆ. ಹೇಳಿದರು.