ಆ. 18ರಿಂದ ಕರಾವಳಿಯ 15 ಥಿಯೇಟರ್ನಲ್ಲಿ “ಅಬತರ’ ತುಳು ಸಿನೆಮಾ ತೆರೆಗೆ
Team Udayavani, Aug 15, 2022, 7:45 AM IST
ಮಂಗಳೂರು: ಬೊಳ್ಳಿ ಮೂವೀಸ್ ಮತ್ತು ಅವಿಕ ಪ್ರೊಡಕ್ಷನ್ನಲ್ಲಿ ಅರ್ಜುನ್ ಕಾಪಿಕಾಡ್ ನಿರ್ದೇಶನದಲ್ಲಿ ತಯಾರಾದ ಬಹು ನಿರೀಕ್ಷೆಯ ತುಳು ಸಿನೆಮಾ “ಅಬತರ’ ಆ. 18ರಂದು ಕರಾವಳಿ ಜಿಲ್ಲೆಯ 15 ಚಿತ್ರ ಮಂದಿರಗಳಲ್ಲಿ ತೆರೆಕಾಣಲಿದೆ ಎಂದು ನಿರ್ದೇಶಕ-ನಟ ಅರ್ಜುನ್ ಕಾಪಿಕಾಡ್ ಪತ್ರಿಕಾಗೊಷ್ಠಿಯಲ್ಲಿ ತಿಳಿಸಿದರು.
ಮಂಗಳೂರಿನಲ್ಲಿ ರೂಪವಾಣಿ, ಭಾರತ್ ಮಾಲ್, ಸಿನೆಪೊಲಿಸ್, ಪಿವಿಆರ್, ಮೂಡುಬಿದಿರೆಯಲ್ಲಿ ಅಮರಶ್ರೀ, ಬೆಳ್ತಂಗಡಿಯಲ್ಲಿ ಭಾರತ್, ಸುರತ್ಕಲ್ನಲ್ಲಿ ನಟರಾಜ್, ಸಿನೆಗ್ಯಾಲಕ್ಸಿ, ಉಡುಪಿಯಲ್ಲಿ ಕಲ್ಪನಾ, ಮಣಿಪಾಲದಲ್ಲಿ ಭಾರತ್ ಸಿನೆಮಾಸ್, ಐನಾಕ್ಸ್, ಕಾರ್ಕಳದಲ್ಲಿ ರಾಧಿಕಾ, ಪ್ಲಾನೆಟ್, ಪುತ್ತೂರಿನಲ್ಲಿ ಅರುಣಾ, ಸುಳ್ಯದ ಸಂತೋಷ್ ಚಿತ್ರಮಂದಿರದಲ್ಲಿ ತೆರೆ ಕಾಣಲಿದೆ ಎಂದರು.
ನಿಖೀಲ್ ಸಾಲ್ಯಾನ್ ನಿರ್ಮಾಪಕ, ವೀರಾಜ್ ಅತ್ತಾವರ ಸಹ ನಿರ್ಮಾಪಕರಾಗಿರುವ ಈ ಸಿನೆಮಾವನ್ನು ಮುಂದಿನ ದಿನಗಳಲ್ಲಿ ಮುಂಬಯಿ, ಬೆಂಗಳೂರು, ಕಾಸರಗೋಡು, ಮುಳ್ಳೇರಿಯ, ಸಕಲೇಶಪುರ, ಶುಂಠಿಕೊಪ್ಪ, ತೀರ್ಥಹಳ್ಳಿ, ಕುಂದಾಪುರ, ಶಿವಮೊಗ್ಗ ಮುಂತಾದೆಡೆ ಬಿಡುಗಡೆಗೊಳ್ಳಲಿದೆ.
ಆ. 16, 17ರಂದು 2 ಜಿಲ್ಲೆಯ ವಿವಿಧ ಅನಾಥಶ್ರಮದಲ್ಲಿರುವ ಮಕ್ಕಳಿಗೆ ಸಿನೆಮಾವನ್ನು ಉಚಿತವಾಗಿ ಪ್ರದರ್ಶಿಸಲಾಗುವುದು ಎಂದರು.
ನಟ ನವೀನ್ ಡಿ. ಪಡೀಲ್ ಮಾತನಾಡಿ, ಪ್ರೇಕ್ಷಕರು ಇಷ್ಟ ಪಡುವಂತೆ ಇದು ಸಂಪೂರ್ಣ ಹಾಸ್ಯ ಚಿತ್ರದ ಪ್ಯಾಕೇಜ್. ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಲಾಗಿದೆ. ಡಾ| ದೇವದಾಸ್ ಕಾಪಿಕಾಡ್ ಕಥೆ ರಚಿಸಿದ್ದಾರೆ. ಅರ್ಜುನ್ ಕಾಪಿಕಾಡ್’ ಅಭಿನಯದ ಜತೆಗೆ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದಾರೆ.
ಡಾ| ದೇವದಾಸ್ ಕಾಪಿಕಾಡ್, ನವೀನ್ ಡಿ. ಪಡೀಲ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು, ಸಾಯಿ ಕೃಷ್ಣ, ಶನಿಲ್ ಗುರು, ಚೇತನ್ ರೈ ಮಾಣಿ, ಲಕ್ಷ್ಮೀಶ್, ಸುನಿಲ್ ಚಿತ್ರಾಪುರ ಮತ್ತು ನಾಯಕ ನಟಿಯಾಗಿ ಗಾನ ಭಟ್, ಕ್ರಿಸ್ಟಿನಾ ನಟಿಸಿದ್ದಾರೆ.
ಛಾಯಾಚಿತ್ರಗ್ರಾಹಕರಾಗಿ ವಿಷ್ಣುಪ್ರಸಾದ್, ಜೇಕೋಬ್, ಕಾರ್ಯಕಾರಿ ನಿರ್ಮಾಪಕರಾಗಿ ಸಂದೀಪ್ ಶೆಟ್ಟಿ ಕೆಲಸ ಮಾಡಿದ್ದಾರೆ ಎಂದರು.
ಶರ್ಮಿಲಾ ಡಿ. ಕಾಪಿಕಾಡ್, ಸಾಯಿಕೃಷ್ಣ, ನಿಖೀಲ್ ಸಾಲ್ಯಾನ್, ವಿರಾಜ್ ಅತ್ತಾವರ, ಶನಿಲ್ ಗುರು, ಗಾನ ಭಟ್, ಕ್ರಿಸ್ಟಿನಾ, ಲಕ್ಷ್ಮೀಶ್ ಪತ್ರಿಕಾಗೋಷ್ಠಿಯಲ್ಲಿದ್ದರು.