ಮಸ್ಕತ್ನಲ್ಲಿ ಬಂಧನ:ಬಿಡುಗಡೆಗೆ ಸಹಕರಿಸಲು ವಿದೇಶ ಸಚಿವರಿಗೆ ಮನವಿ
Team Udayavani, Jul 6, 2019, 9:52 AM IST
ಮಂಗಳೂರು: ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲು ಅವರು ಗುರುವಾರ ಕೇಂದ್ರ ವಿದೇಶಾಂಗ ಖಾತೆ ರಾಜ್ಯ ಸಚಿವ ವಿ. ಮುರಳೀಧರನ್ ಅವರನ್ನು ಭೇಟಿ ಮಾಡಿ ಕೆಲವು ದಿನಗಳ ಹಿಂದೆ ಮಸ್ಕತ್ ಪೊಲೀಸರಿಂದ ಬಂಧಿತರಾದ ಬೆಳ್ತಂಗಡಿ ತಾಲೂಕಿನ ಕಾಶಿಪಟ್ಣ ನಿವಾಸಿ ಪ್ರಕಾಶ್ ಪೂಜಾರಿ ಅವರನ್ನು ಭಾರತಕ್ಕೆ ಕರೆತರುವ ವಿಚಾರದಲ್ಲಿ ಮಧ್ಯ ಪ್ರವೇಶಿಸಲು ಮಸ್ಕತ್ನ ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ವಿನಂತಿಸಿದರು.
ಈ ಬಗ್ಗೆ ವಿದೇಶಾಂಗ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡ ಸಚಿವರು ಕಾನೂನು ತೊಡಕು ನಿವಾರಣೆಯಾದ ತತ್ಕ್ಷಣ ಅವರನ್ನು ಸ್ವದೇಶಕ್ಕೆ ಕರೆತರುವ ಭರವಸೆ ನೀಡಿದರು.
ಇದಲ್ಲದೆ ಉದ್ಯೋಗಕ್ಕೆಂದು ಕುವೈಟ್ಗೆ ತೆರಳಿ ಸಿಲುಕಿಕೊಂಡಿರುವ 73 ಭಾರತೀಯರ ಪೈಕಿ ಮರಳಲಿಚ್ಛಿಸಿರುವ 13 ಭಾರತೀಯರು ಸ್ವದೇಶಕ್ಕೆ ವಾಪಸಾಗಲು ಹಣಕಾಸಿನ ಅಡಚಣೆ ಇರುವುದರಿಂದ ಅವರಿಗೆ ವಿಮಾನ ಟಿಕೆಟ್ ವ್ಯವಸ್ಥೆ ಮಾಡಿಸಿ ಕೊಡಲು ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ನಳಿನ್ ಅವರು ಸಚಿವರಲ್ಲಿ ಮನವಿ ಮಾಡಿದರು.
ವಿಮಾನ ಟಿಕೆಟ್ನ ವ್ಯವಸ್ಥೆ ಮಾಡಿಸಿ ಕೊಡುವ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸಿ ಪರಿಶೀಲಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು ಎಂದು ನಳಿನ್ ತಿಳಿಸಿದ್ದಾರೆ.