ಮಕ್ಕಳ ಹೃದಯ ರೋಗ ಸಮಸ್ಯೆಯ ಚಿಕಿತ್ಸೆಗೆ ನೆರವು
Team Udayavani, Mar 21, 2017, 5:23 PM IST
ಮಹಾನಗರ: ಬೆಂಗಳೂರು ಡಾ| ಬಿ.ಆರ್. ಅಂಬೇಡ್ಕರ್ ಮೆಡಿಕಲ್ ಕಾಲೇಜಿನ 1987ರ ಬ್ಯಾಚ್ನ ಹಳೆ ವಿದ್ಯಾರ್ಥಿಗಳು ನಗರದ ಎ.ಜೆ. ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದಲ್ಲಿ ಆರ್ಥಿಕವಾಗಿ ಹಿಂದುಳಿದ ಇಬ್ಬರು ಮಕ್ಕಳ ಹೃದ್ರೋಗ ಸಮಸ್ಯೆಯ ಚಿಕಿತ್ಸೆಯ ವೆಚ್ಚವನ್ನು ಭರಿಸಿದ್ದಾರೆ.
“ಈ ವರ್ಷದ ಪ್ರಾರಂಭದಲ್ಲಿ ಸಂಸ್ಥೆಯ ಹಳೆ ವಿದ್ಯಾರ್ಥಿಗಳಾದ ನಾವು 30ನೇ ವಾರ್ಷಿಕೋತ್ಸವದ ಅಂಗವಾಗಿ ಬೆಂಗಳೂರಿನಲ್ಲಿ ಪುನರ್ಮಿಲನ ಕಾರ್ಯಕ್ರಮ ಹಮ್ಮಿಕೊಂಡಿದ್ದೆವು. ಇಲ್ಲಿ ಸಂಗ್ರಹವಾದ ಹಣವನ್ನು ಒಳ್ಳೆಯ ಕಾರ್ಯಕ್ಕೆ ವಿನಿಯೋಗಿಸಲು ತೀರ್ಮಾ ನಿಸಿದ್ದೆವು. ಅದರಂತೆ ಮಕ್ಕಳ ಹೃದ್ರೋಗ ಸಮಸ್ಯೆಯ ಚಿಕಿತ್ಸೆಯ ಹಣವನ್ನು ವಿನಿಯೋಗಿಸಲಾಗಿದೆ’ ಎಂದು ಹಳೆ ವಿದ್ಯಾರ್ಥಿ, ಎ.ಜೆ. ಆಸ್ಪತ್ರೆಯ ಇಂಟರ್ವೆನ್ಶನಲ್ ಹೃದ್ರೋಗ ತಜ್ಞ ಡಾ| ಪುರುಷೋತ್ತಮ ತಿಳಿಸಿದರು.
ಹುಟ್ಟುತ್ತಲೇ ಹೃದ್ರೋಗ ಸಮಸ್ಯೆ ಯಿಂದ ಬಳಲುತ್ತಿದ್ದ ಇಬ್ಬರು ಮಕ್ಕಳ ಚಿಕಿತ್ಸೆ ನಡೆಸಲಾಗಿದೆ. 16 ವರ್ಷದ ಬಾಲಕಿಯ ವೆಂಟ್ರಿಕ್ಯೂಲರ್ ಸೆಪ್ಟಲ್ಡಿಪೆಕ್ಟ್ ಮತ್ತು ಶ್ವಾಸಕೋಶದ ಸ್ಟೆನೋಸಿಸ್ನ ತೊಂದರೆಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. 2 ವರ್ಷದ ಹೆಣ್ಣು ಮಗುವಿನ ಪೆಟೆಂಟ್ಡಕ್ಟಸ್ ಅರ್ಟರಿಯೊಸಸ್ ತೊಂದರೆಗೆ ಶಸ್ತ್ರಚಿಕಿತ್ಸಾರಹಿತ ಸಾಧನ ವನ್ನು ಅಳವಡಿಸುವ ಮೂಲಕ ಸರಿ ಪಡಿಸಲಾಗಿದೆ.
ಈ ಯಶಸ್ವಿ ಚಿಕಿತ್ಸೆಗಳನ್ನು ಎ.ಜೆ. ಆಸ್ಪತ್ರೆಯ ವೈದ್ಯರಾದ ಮಕ್ಕಳ ಹೃದ್ರೋಗ ಶಸ್ತ್ರಚಿಕಿತ್ಸಾ ತಜ್ಞ ಡಾ| ಗೌರವ್ ಶೆಟ್ಟಿ, ಮುಖ್ಯ ಹೃದ್ರೋಗ ಅರಿವಳಿಕೆ ತಜ್ಞ ಡಾ| ಗುರುರಾಜ್ ತಂತ್ರಿ, ಇಂಟರ್ವೆನ್ಶನಲ್ ಹೃದ್ರೋಗತಜ್ಞ ಡಾ| ಪುರುಷೋತ್ತಮ್, ಮಕ್ಕಳ ಹೃದ್ರೋಗ ತಜ್ಞ ಡಾ| ಪ್ರೇಮ್ ಆಳ್ವ ನಡೆಸಿದರು. ಚಿಕಿತ್ಸೆಗಳನ್ನು ರಿಯಾಯಿತಿ ದರದಲ್ಲಿ ನಡೆಸಲು ಸಹಾಯ ಮಾಡಿದ ಎ.ಜೆ. ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ| ಪ್ರಶಾಂತ್ ಮಾರ್ಲ ಅವರಿಗೆ ಡಾ| ಪುರುಷೋತ್ತಮ ಕೃತಜ್ಞತೆ ಸಲ್ಲಿಸಿದರು. ಡಾ| ಸಂಭ್ರಮ್ ಶೆಟ್ಟಿ ಸಹಕರಿಸಿದರು.