ಹೂಳು ತುಂಬಿದ ಪುತ್ತೂರಿನ ಬಿದಿರಹಳ್ಳ ಕಾಲುವೆ
ಸೊಳ್ಳೆ ಉತ್ಪತ್ತಿ ಕೇಂದ್ರವಾಗಿದೆ; ಮಳೆಗಾಲಕ್ಕೆ ತೊಂದರೆ
Team Udayavani, May 13, 2019, 6:00 AM IST
ನಗರ : ಇನ್ನೇನು ಮಳೆಗಾಲ ಆರಂಭಗೊಳ್ಳುತ್ತದೆ. ಆದರೆ ಪುತ್ತೂರು ನಗರದ ಪಾಲಿಗೆ ರಾಜಕಾಲುವೆ ಎನಿಸಿರುವ ಶ್ರೀ ಮಹಾಲಿಂಗೇಶ್ವರ ದೇವಾಲಯದ ಸುತ್ತ ಹರಿಯುವ ಕಾಲುವೆಯ ಕಳೆಯನ್ನು ತೆಗೆದಿದ್ದಾರೆಯೇ ವಿನಾ ಸಮರ್ಪಕವಾಗಿ ಹೂಳೆತ್ತಿಲ್ಲ. ಇದರ ಪರಿಣಾಮ ಸೊಳ್ಳೆ ಉತ್ಪತ್ತಿಯ ಕೇಂದ್ರವಾಗಿ ಈ ಕಾಲುವೆ ಕಾಣಿಸುತ್ತಿದೆ.
ಮಳೆಗಾಲ ಬಂತೆಂದರೆ ಸಾಕು ಸೊಳ್ಳೆಗಳ ಸಾಮ್ರಾಜ್ಯ ನಿರ್ಮಾಣವಾಗುತ್ತದೆ. ಇದಕ್ಕೆ ಪ್ರಮುಖ ಕಾರಣವೆನಿಸುವುದು ನಗರವನ್ನು ಸುತ್ತುವರಿದು ಹರಿಯುವ ಬಿದಿರಹಳ್ಳ ಎನ್ನುವ ರಾಜಕಾಲುವೆ. ಈ ಕಾಲುವೆ ನಗರದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪಕ್ಕದಿಂದ ಹಾದು ಹೋಗಿ ಎಪಿಎಂಸಿ ರಸ್ತೆಯ ಆದರ್ಶ ಆಸ್ಪತ್ರೆಯ ತನಕ ಗಮನಿಸಿದರೆ ಇದರಲ್ಲಿ ಉತ್ಪಾದಿತವಾಗುವ ಸೊಳ್ಳೆಗಳು ಸಾಂಕ್ರಾಮಿಕ ರೋಗ ಹರಡುವಷ್ಟು ಮಟ್ಟಿಗೆ ಕೊಳಚೆ ತುಂಬಿ ಹರಿಯುತ್ತಿದೆ. ನಗರದ ಹೊಟೇಲ್ಗಳ ತ್ಯಾಜ್ಯವೇ ಹೂಳು ತುಂಬಿರುವುದಕ್ಕೆ ಪ್ರಮುಖ ಕಾರಣವಾಗಿದೆ. ಉಳಿದಂತೆ ಸ್ಥಳೀಯ ಮನೆ, ಅಂಗಡಿಗಳ ತ್ಯಾಜ್ಯ ಈ ಕಾಲುವೆಯನ್ನು ಪ್ರತಿನಿತ್ಯ ಸೇರುತ್ತದೆ.
ಈ ರಾಜಕಾಲುವೆ ಹರಿಯುವ ಭಾಗದಲ್ಲಿ ನೂರಾರು ಅಂಗಡಿಗಳು ಮತ್ತು ಮನೆಗಳು ಇದ್ದು, ದಿನವೂ ಮೂಗು ಮುಚ್ಚಿಕೊಂಡು ಬದುಕು ಸಾಗಿಸುವ ಸ್ಥಿತಿ ನಿರ್ಮಾಣವಾಗಿದೆ. ಬೊಳುವಾರು ಬಳಿಯಲ್ಲಿ ಕೊಳಚೆ ವಾಸನೆ ರಸ್ತೆಯಲ್ಲಿ ಹೋಗುವವರಿಗೂ ರಾಚುತ್ತಿದೆ. ಹಾಗಿದ್ದರೂ ಅಧಿಕಾರಿಗಳಿಗೆ ಮಾತ್ರ ಇನ್ನೂ ಕೊಳಚೆ ವಾಸನೆ ಮುಟ್ಟಿಲ್ಲ. ಹಾಗಾಗಿ ಸ್ವಚ್ಛತೆ ನಡೆಸುವ ಗುತ್ತಿಗೆದಾರರಿಗೂ ಸಮಸ್ಯೆ ಮುಟ್ಟಿಲ್ಲ.
ಕೃತಕ ನೆರೆಯಾದರೆ?
ಈ ಬಿದಿರಹಳ್ಳ ರಾಜ ಕಾಲುವೆಯ ಹೂಳೆತ್ತದೆ ಇದ್ದರೆ ಈ ಬಾರಿ ಮಳೆಗಾಲ ದಲ್ಲಿ ನಗರದಲ್ಲಿ ಕೃತಕ ನೆರೆ ಉಂಟು ಮಾಡುವುದರಲ್ಲಿ ಯಾವುದೇ ಸಂದೇಹ ಇಲ್ಲ. ಅಷ್ಟೊಂದು ಹೂಳು ತುಂಬಿಕೊಂಡಿದೆ. ಜತೆಗೆ ಈ ರಾಜಕಾಲುವೆ ಯಲ್ಲಿ ಅಂಗಡಿ ಮತ್ತು ಮನೆಗಳ ಕಸ, ಪುತ್ತೂರಿನ ವಿವಿಧ ಹೊಟೇಲ್ಗಳ ತ್ಯಾಜ್ಯ ತುಂಬಿಕೊಂಡಿದೆ. ಸಾಂಕ್ರಾಮಿಕ ರೋಗಗಳ ಕೊಡುಗೆ ನೀಡಲು ಈ ರಾಜಕಾಲುವೆ ಸಾಕು ಎನ್ನುವುದು ಈ ರಾಜಕಾಲುವೆಯ ಪಕ್ಕದಲ್ಲಿ ವಾಸ ಮಾಡುವ ಸ್ಥಳೀಯರ ಅಭಿಪ್ರಾಯ.
ನಗರಸಭೆ 30 ಲಕ್ಷ ರೂ. ಅನುದಾನದಲ್ಲಿ ತೋಡುಗಳ ಹಾಗೂ ಚರಂಡಿಗಳ ಹೂಳೆತ್ತಲು ಯೋಜನೆ ಹಮ್ಮಿಕೊಂಡು ಕಾಮಗಾರಿ ಆರಂಭಿಸಿತ್ತು. ಆದರೆ ಈ ರಾಜ ಕಾಲುವೆಯ ಸಂಪೂರ್ಣ ಸ್ವಚ್ಛತೆಯ ಕುರಿತು ಗಂಭೀರ ಯೋಚನೆಯೇ ಮಾಡಿಲ್ಲ. ಬಿದಿರ ಹಳ್ಳ ರಾಜಕಾಲುವೆಯಲ್ಲಿ ತುಂಬಿರುವ ಹೂಳು ಮತ್ತು ಕೊಳಚೆ ಸ್ವಚ್ಛ ಮಾಡುವುದು ನಗರಸಭೆಯ ಪ್ರಮುಖ ಆದ್ಯತೆ ಆಗಬೇಕಾಗಿದೆ.