ಬೈಕಂಪಾಡಿ: ದುರಸ್ತಿಯಾಗದ ಹೆದ್ದಾರಿ
Team Udayavani, Dec 28, 2017, 11:53 AM IST
ಬೈಕಂಪಾಡಿ: ಸುರತ್ಕಲ್ನಿಂದ ಮಂಗಳೂರುವರೆಗೆ ಹೆದ್ದಾರಿ, ಸರ್ವಿಸ್ ರಸ್ತೆಗಳಲ್ಲಿ ಭಾರೀ ಗಾತ್ರದ ಹೊಂಡಗಳಿದ್ದು ಹೆದ್ದಾರಿ ಇಲಾಖೆ ದುರಸ್ತಿಪಡಿಸುವ ಭರವಸೆ ನೀಡಿಯೂ ಮಾಡಿಲ್ಲ ಎಂದು ಆರೋಪಿಸಿ ಡಿವೈಎಫ್ಐ ವತಿಯಿಂದ ಬುಧವಾರ ಬೈಕಂಪಾಡಿಯಲ್ಲಿ ಅಣುಕು ಶವ ಯಾತ್ರೆ, ರಸ್ತೆ ಮಧ್ಯೆ ದಹನ ಕ್ರಿಯೆ ನಡೆಸಿ ಪ್ರತಿಭಟಿಸಲಾಯಿತು.
ಈ ಸಂದರ್ಭ ಮಾತನಾಡಿದ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಹೆದ್ದಾರಿ ಇಲಾಖೆ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದಾಗ ನ. 15ರ ಒಳಗಾಗಿ ದುರಸ್ತಿಪಡಿಸುವ ಭರವಸೆ ನೀಡಿತ್ತು. ಬಳಿಕ ಶಾಸಕರು ಸೂಚನೆ ನೀಡಿದಾಗ ಡಿ. 15ರ ಒಳಗಾಗಿ ದುರಸ್ತಿಯ ಭರವಸೆ ನೀಡಲಾಯಿತು. ಅಧಿಕಾರಿಗಳು ಕೊಟ್ಟ ಮಾತು ಉಳಿಸಿಕೊಂಡಿಲ್ಲ. ಸಂಸದ ನಳಿನ್ ಕುಮಾರ್ ಈ ಕ್ಷೇತ್ರ ಪ್ರತಿನಿ ಧಿಸುತ್ತಿದ್ದರೂ ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಇಲ್ಲಿ ನಡೆದ ಅಪಘಾತದಿಂದ ಪ್ರಾಣ ಹಾನಿ, ಹಲವು ಮಂದಿ ಅಂಗವೈಕಲ್ಯಕ್ಕೆ ತುತ್ತಾಗಿ ಜೀವನ ಕಳೆದುಕೊಂಡಿದ್ದು ಹೆದ್ದಾರಿ ಇಲಾಖೆ, ಜಿಲ್ಲಾಡಳಿತದ ಜತೆಗೆ ಸಂಸದರೂ ಕಾರಣ. ತತ್ಕ್ಷಣ ಅವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.
ಟೋಲ್ ನಿಯಮ ಬಾಹಿರ
ಹೆದ್ದಾರಿ ಇಲಾಖಾ ಕಾನೂನಿನಲ್ಲಿ ಯಾವುದೇ ಪೂರ್ಣಗೊಳ್ಳದ ಕಾಮಗಾರಿ ಹಾಗೂ ರಸ್ತೆ ಸರಿ ಇಲ್ಲದ ಭಾಗದಲ್ಲಿ ಟೋಲ್ ಪಡೆಯುವಂತಿಲ್ಲ ಎಂದಿದೆ. ಆದರೆ ಈ ಭಾಗದಲ್ಲಿ ಈ ನಿಯಮ ಪಾಲನೆಯಾಗುತ್ತಿಲ್ಲ ಎಂದರು.
ಹೆದ್ದಾರಿ ಪ್ರಾಧಿಕಾರದ ಅಣಕು ಶವ ಯಾತ್ರೆ!
ಬೈಕಂಪಾಡಿಯ ಎಪಿಎಂಸಿ ಮಾರುಕಟ್ಟೆಯಿಂದ ಬೈಕಂಪಾಡಿ ಕೈಗಾರಿಕಾ ರಸ್ತೆ ತಿರುವುವರೆಗೆ ಅಣಕು ಶವ ಯಾತ್ರೆ ನಡೆಸಿ ಹೆದ್ದಾರಿ ಮಧ್ಯದಲ್ಲಿ ಇರಿಸಿ ದಹನ ನಡೆಸಲಾಯಿತು. ಮುಖಂಡರಾದ ಬಿ.ಕೆ. ಇಮ್ತಿಯಾಝ್, ಕಾರ್ಪೊರೇಟರ್ ದಯಾನಂದ ಶೆಟ್ಟಿ , ಶ್ರೀನಾಥ್ ಕುಲಾಲ್, ಅಬೂಬಕರ್ ಬಾವಾ, ಶ್ರೀನಿವಾಸ್ ಹೊಸಬೆಟ್ಟು, ಮಕ್ಸೂದ್, ಅಜ್ಮಲ್ ಅಹ್ಮದ್, ನೌಷಾದ್ ಬಾವಾ ಪಾಲ್ಗೊಂಡಿದ್ದರು.