Biometric ವಂಚನೆ ಪ್ರಕರಣ: ಸೂತ್ರಧಾರನಿಗೆ ಪೊಲೀಸರ ಶೋಧ
Team Udayavani, Nov 11, 2023, 10:56 PM IST
ಮಂಗಳೂರು: ಮಂಗಳೂರಿನ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಆಸ್ತಿ ನೋಂದಣಿ ಮಾಡುವ ಸಂದರ್ಭ ನೀಡಿದ ಬಯೋಮೆಟ್ರಿಕ್ ಮತ್ತು ಆಧಾರ್ ಮಾಹಿತಿಯನ್ನು ಕದ್ದು ಆಧಾರ್ ಸಕ್ರಿಯಗೊಳಿಸಿದ ಪಾವತಿ ವ್ಯವಸ್ಥೆ(ಎಇಪಿಎಸ್) ಮೂಲಕ ಹಲವರ ಖಾತೆಯಿಂದ ಹಣ ವರ್ಗಾಯಿಸಿ ವಂಚಿಸಿರುವ ಪ್ರಕರಣದ ಪ್ರಮುಖ ಆರೋಪಿಯ ಬಂಧನ ಬಾಕಿ ಇದೆ ಎಂದು ನಗರದ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಬಿಹಾರ ಮೂಲದ ಮೂವರನ್ನು ಬಂಧಿಸಿ ಪಂಚನಾಮೆ ನಡೆಸಲಾಗಿದೆ. ಅವರಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
ಆರೋಪಿಗಳಿಂದ ಲ್ಯಾಪ್ಟಾಪ್, ಪ್ರಿಂಟರ್ ಮೊದಲಾದವುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಂಗಳೂರಿನ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಆಸ್ತಿ ನೋಂದಣಿ ಮಾಡಿಸಿದ ಅನಂತರ ಹಣ ಅಕ್ರಮವಾಗಿ ವರ್ಗಾವಣೆಯಾಗಿರುವ ಬಗ್ಗೆ 60 ಮಂದಿ ದೂರು ನೀಡಿದ್ದು 10 ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದವರು ತಿಳಿಸಿದ್ದಾರೆ.
3-4 ಗ್ಯಾಂಗ್ಗಳು
ಬಿಹಾರದ 3ರಿಂದ 4 ತಂಡಗಳು ಬಯೋಮೆಟ್ರಿಕ್ ಮಾಹಿತಿ ಕಳವು ಮಾಡಿ ವಂಚಿಸುವ ಕೃತ್ಯದಲ್ಲಿ ತೊಡಗಿಕೊಂಡಿರುವುದು ತನಿಖೆ ವೇಳೆ ಗೊತ್ತಾಗಿದೆ. ತಲೆಮರೆಸಿಕೊಂಡಿರುವ ಸೂತ್ತಧಾರ ಆಸ್ತಿ ನೋಂದಣಿಗೆ ಸಂಬಂಧಿಸಿದ ಕಾವೇರಿ-2.0 ತಂತ್ರಜ್ಞಾನದಿಂದ ಮಾಹಿತಿಯನ್ನು ಕದ್ದು ಇತರ ಆರೋಪಿಗಳಿಗೆ ನೀಡುತ್ತಿದ್ದ. ಇತರ ಆರೋಪಿಗಳು ಎಇಪಿಎಸ್ ಮೂಲಕ ಹಣ ವರ್ಗಾವಣೆ ಮಾಡಿಕೊಳ್ಳುತ್ತಿದ್ದರು. ಇದೇ ರೀತಿ ಬೇರೆ ರಾಜ್ಯಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಕೂಡ ಕಳವು ಮಾಡಿದ್ದಾರೆ. ಹಾಗಾಗಿ ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳ ಪೊಲೀಸ್ ಠಾಣೆಗಳಿಗೆ ಹಾಗೂ ಆಂಧ್ರ ಮತ್ತು ತಮಿಳುನಾಡು ಪೊಲೀಸರಿಗೂ ಪತ್ರ ಬರೆಯಲಾಗಿದೆ ಎಂದು ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.