Sub-Registrar ಬಯೋಮೆಟ್ರಿಕ್ ವಂಚನೆ: ಮೂಲ ಪತ್ತೆಯೇ ಸವಾಲು
ಸಬ್ರಿಜಿಸ್ಟ್ರಾರ್ ಕಚೇರಿಯಲ್ಲಿ ಪರಿಶೀಲನೆ; ವಿವಿಧೆಡೆ ವಂಚನೆ ಸಾಧ್ಯತೆ
Team Udayavani, Oct 10, 2023, 11:24 PM IST
ಮಂಗಳೂರು: ಸಾರ್ವಜನಿಕರ ಬಯೋಮೆಟ್ರಿಕ್ ಮಾಹಿತಿ ಪಡೆದು ಆಧಾರ್ ಸಕ್ರಿಯಗೊಳಿಸಿದ ಪಾವತಿ ವ್ಯವಸ್ಥೆ (ಎಇಪಿಎಸ್) ಬಳಸಿ ವ್ಯಾಪಕವಾಗಿ ವಂಚನೆ ನಡೆಯುತ್ತಿದ್ದು ಇದನ್ನು ಭೇದಿಸುವುದು ಪೊಲೀಸರಿಗೆ ದೊಡ್ಡ ಸವಾಲಾಗಿದೆ.
ಇತ್ತೀಚೆಗೆ ಮಂಗಳೂರಿನಲ್ಲಿಯೂ ಎಇಪಿಎಸ್ ಪ್ರಕರಣಗಳು ಬೆಳಕಿಗೆ ಬಂದಿದ್ದು ವಂಚಕರ ಜಾಡು ಇನ್ನೂ ಪತ್ತೆಯಾಗಿಲ್ಲ. ಮಂಗಳೂರಿನ ಸಬ್ರಿಜಿಸ್ಟ್ರಾರ್ ಕಚೇರಿಯಲ್ಲಿ ಆಸ್ತಿ ನೋಂದಣಿಯ ಬಳಿಕ ಹಲವರ ಖಾತೆಯಿಂದ ಎಇಪಿಎಸ್ ಮೂಲಕ ವಂಚಕರು ಹಣ ವರ್ಗಾಯಿಸಿಕೊಂಡ ಬಗ್ಗೆ ಇತ್ತೀಚೆಗೆ ಮಂಗಳೂರು ಸೈಬರ್ ಪೊಲೀಸ್ ಠಾಣೆಗೆ 13 ದೂರುಗಳು ಬಂದಿದ್ದವು. ಒಂದು ಎಫ್ಐಆರ್ ದಾಖಲಾಗಿತ್ತು. ಒಬ್ಬೊಬ್ಬರ ಖಾತೆಯಿಂದ 10,000 ರೂ. ಹಣವನ್ನು ವರ್ಗಾಯಿಸಿಕೊಂಡಿರುವುದು ಗೊತ್ತಾಗಿತ್ತು.
ಕಚೇರಿಯಲ್ಲಿ ಪರಿಶೀಲನೆ
ಮಂಗಳೂರಿನ ಸಬ್ರಿಜಿಸ್ಟ್ರಾರ್ ಕಚೇರಿಯಲ್ಲಿ ಆಸ್ತಿ ನೋಂದವಣಿ ಸಂದರ್ಭ ಬಯೋಮೆಟ್ರಿಕ್ ನೀಡಿದ್ದ ಹಲವರ ಖಾತೆಯಿಂದ ಹಣ ವರ್ಗಾವಣೆಯಾಗಿರುವ ಹಿನ್ನೆಲೆಯಲ್ಲಿ ಸೈಬರ್ ಪೊಲೀಸರು ಈಗಾಗಲೇ ಸಬ್ರಿಜಿಸ್ಟ್ರಾರ್ ಕಚೇರಿಯಲ್ಲಿ ತಪಾಸಣೆ ನಡೆಸಿದ್ದಾರೆ. ಇಲಾಖೆಯ ಸೈಟನ್ನು ಹ್ಯಾಕ್ ಮಾಡಿ ಬಯೋಮೆಟ್ರಿಕ್ ಮಾಹಿತಿ ಕದಿಯಿರುವ ಸಾಧ್ಯತೆಯೂ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಏನಿದು ಎಇಪಿಎಸ್ ವಂಚನೆ?
ಎಇಪಿಎಸ್ ಎನ್ನುವುದು ಬ್ಯಾಂಕ್ ತನ್ನ ಗ್ರಾಹಕರಿಗೆ ಆಧಾರ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಗಳಿಂದ ಬಯೋಮೆಟ್ರಿಕ್ ಉಪಯೋಗಿಸಿ ಹಣವನ್ನು ವಿದ್ಡ್ರಾ ಮತ್ತು ರವಾನೆಯಂತಹ ಬ್ಯಾಂಕಿಂಗ್ ವಹಿವಾಟುಗಳನ್ನು ನಿರ್ವಹಿಸಲು ಅನುವು ಮಾಡಿಕೊಡುವ ವ್ಯವಸ್ಥೆ. ಆಧಾರ್ ಕಾರ್ಡ್ದಾರರು ತಮ್ಮ ಆಧಾರ್ ಸಂಖ್ಯೆ ಮತ್ತು ಬಯೋಮೆಟ್ರಿಕ್ ದೃಢೀಕರಣವನ್ನು ಬಳಸಿಕೊಂಡು ವಹಿವಾಟು ನಡೆಸಬಹುದು. ಆದರೆ ಇದೀಗ ಎಇಪಿಎಸ್ನಲ್ಲಿ ಭಾರೀ ವಂಚನೆಯಾಗುತ್ತಿರುವ ಘಟನೆ ದೇಶದಾದ್ಯಂತ ವರದಿಯಾಗುತ್ತಿದೆ. ಸೈಬರ್ ವಂಚಕರು ಬಳಕೆದಾರರ ಆಧಾರ್ ದತ್ತಾಂಶಗಳನ್ನು ಸರಕಾರಿ ವೆಬ್ಸೈಟ್ಗಳಿಂದ ಅಥವಾ ಇತರ ಮೂಲಗಳಿಂದ ಸಂಗ್ರಹಿಸಿ ಅದನ್ನು ಪಿಒಎಸ್/ಮೈಕ್ರೋ ಎಟಿಎಂ ಮೂಲಕ ಹಣ ವಿದ್ಡ್ರಾ ಅಥವಾ ವರ್ಗಾವಣೆ ಮಾಡುತ್ತಿದ್ದಾರೆ. ಯಾವುದೇ ರೀತಿಯ ಪಾಸ್ವರ್ಡ್ ಅಥವಾ ಒಟಿಪಿಯ ಅಗತ್ಯವೇ ಇಲ್ಲದೆ ಸೈಬರ್ ವಂಚಕರು ಹಣ ವರ್ಗಾಯಿಸಿ ವಂಚಿಸುತ್ತಿದ್ದಾರೆ.
ಬಯೋಮೆಟ್ರಿಕ್ ಲಾಕ್ ಮಾಡಿ
ಮಂಗಳೂರು ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿ ಬಳಿಕ ಹಲವರ ಬ್ಯಾಂಕ್ ಖಾತೆಗಳಿಂದ ಹಣ ವರ್ಗಾವಣೆ ಆಗಿರುವ ಬಗ್ಗೆ ಬಂದಿರುವ ದೂರುಗಳ ತನಿಖೆ ನಡೆಯುತ್ತಿದೆ. ವಂಚನೆ ಎಲ್ಲಿ ನಡೆದಿದೆ ಎಂಬುದು ದೃಢಪಟ್ಟಿಲ್ಲ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು ಪೂರಕ ಮಾಹಿತಿ ಲಭ್ಯವಾಗಿದೆ. ಸಾರ್ವಜನಿಕರು ಕೂಡ ಸೈಬರ್ ವಂಚನೆ ಬಗ್ಗೆ ಜಾಗರೂಕರಾಗಿರುವುದು ಅತೀ ಅಗತ್ಯ. ಸುರಕ್ಷಿತವಾಗಿರಲು ಆಧಾರ್ ಕಾರ್ಡ್ ಬಯೋಮೆಟ್ರಿಕ್ ಲಾಕ್ ಅನ್ನು ಆಧಾರ್ ವೆಬ್ಸೈಟ್/ಆಧಾರ್ ಆ್ಯಪ್ ಮೂಲಕ ಸಕ್ರಿಯಗೊಳಿಸಬೇಕು.
-ಅನುಪಮ್ ಅಗರ್ವಾಲ್,
ಪೊಲೀಸ್ ಆಯುಕ್ತರು, ಮಂಗಳೂರು