Champa Shashti ಕರಾವಳಿಯಾದ್ಯಂತ ಷಷ್ಠಿ ಮಹೋತ್ಸವ ಸಂಭ್ರಮ
Team Udayavani, Dec 19, 2023, 12:09 AM IST
ಮಂಗಳೂರು/ ಉಡುಪಿ: ಕರಾವಳಿಯ ವಿವಿಧ ಸುಬ್ರಹ್ಮಣ್ಯ ದೇವಾಲಯಗಳಲ್ಲಿ, ನಾಗ ಸಾನ್ನಿಧ್ಯವಿರುವ ದೇಗುಲಗಳಲ್ಲಿ ಷಷ್ಠಿ ಮಹೋತ್ಸವ ಸೋಮವಾರ ನಡೆಯಿತು.
ದೇವರಿಗೆ ವಿಶೇಷ ಪೂಜೆ, ಬಲಿ ಉತ್ಸವ, ರಥೋತ್ಸವ, ಅನ್ನಸಂತರ್ಪಣೆ ಇತ್ಯಾದಿ ನೆರವೇರಿತು. ನಾಗಾರಾಧನ ಕ್ಷೇತ್ರಗಳಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ, ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನ ಸಹಿತ ವಿವಿಧ ದೇವಸ್ಥಾನಗಳಲ್ಲಿ ಷಷ್ಠಿ ಬ್ರಹ್ಮರಥೋತ್ಸವ ವಿಜೃಂಭಣೆ ಯಿಂದ ನೆರವೇರಿತು.
ಕುಡುಪು ಕ್ಷೇತ್ರದಲ್ಲಿ ಭಕ್ತರಿಂದ ಶ್ರೀ ದೇವರಿಗೆ 23 ಸಾವಿರ ತಂಬಿಲ ಹಾಗೂ 8 ಸಾವಿರ ಪಂಚಾಮೃತ ಅಭಿಷೇಕ ಸೇವೆಗಳು ನಡೆದವು. 25 ಸಾವಿರಕ್ಕೂ ಅಧಿಕ ಮಂದಿ ಅನ್ನಪ್ರಸಾದ ಸ್ವೀಕರಿಸಿದರು.
ಉಡುಪಿಯಲ್ಲಿ ಷಷ್ಠಿ ಮಹೋತ್ಸವ
ಉಡುಪಿ ಶ್ರೀಕೃಷ್ಣ ಮಠ ಸಹಿತ ತಾಂಗೋಡು, ಮಾಂಗೋಡು, ಅರಿತೋಡು, ಮುಚ್ಚಲಕೋಡು ನಾಗಾಲಯಗಳು, ನೀಲಾವರದ ಪಂಚಮಿಕಾನ, ಮಂದಾರ್ತಿಯ ನಾಗ ಸನ್ನಿಧಿ, ಕಲ್ಲಂಗಳ ಶ್ರೀ ವಾಸುಕೀ ಸುಬ್ರಹ್ಮಣ್ಯ ದೇವಸ್ಥಾನ, ಸಗ್ರಿ ಶ್ರೀ ವಾಸುಕೀ ಸುಬ್ರಹ್ಮಣ್ಯ ದೇವಸ್ಥಾನ, ಬಡಗುಪೇಟೆ ಅನಂತ ವಾಸುಕೀ ಸುಬ್ರಹ್ಮಣ್ಯ ದೇವಸ್ಥಾನ, ಬೊಮ್ಮರಬೆಟ್ಟು ಮತ್ತೂರು ಕೊಂಡಾಡಿ ಶ್ರೀ ಅನಂತಶೇಷ ಕಾಳಿಂಗ ವಾಸುಕೀ ಸುಬ್ರಹ್ಮಣ್ಯ ದೇವಸ್ಥಾನ, ಮಣಿಪಾಲದ ನಾಗಬ್ರಹ್ಮಸ್ಥಾನ, ದೊಡ್ಡಣಗುಡ್ಡೆಯ ಶ್ರೀ ಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ದೇವಸ್ಥಾನ, ಪಾದೆಬೆಟ್ಟು ಸುಬ್ರಹ್ಮಣ್ಯ ದೇವಸ್ಥಾನ, ನಿಂಜೂರು ವಾಸುಕೀ ಸುಬ್ರಹ್ಮಣ್ಯ ದೇವಸ್ಥಾನ, ಕಾಳಾವರ, ಕಂದಾವರ ಸುಬ್ರಹ್ಮಣ್ಯ ದೇವಸ್ಥಾನ, ಗುಡ್ಡೆಮ್ಮಾಡಿ ಸುಬ್ರಹ್ಮಣ್ಯ ದೇವಸ್ಥಾನ ಸಹಿತ ಸಹಿತ ವಿವಿಧ ನಾಗಾಲಯಗಳಲ್ಲಿ ವಿಶೇಷ ಪೂಜೆ ನಡೆಯಿತು.
ಕುಟುಂಬ ನಾಗಬನ, ಸಾರ್ವಜನಿಕ ನಾಗಕ್ಷೇತ್ರ, ದೇವಸ್ಥಾನಗಳಲ್ಲಿನ ನಾಗಬನಗಳಲ್ಲಿ ವಿಶೇಷ ಪೂಜೆಗಳು ನಡೆದಿದ್ದು, ಎಲ್ಲ ನಾಗಕ್ಷೇತ್ರಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿದರು. ವಿವಿಧೆಡೆ ನಾಗಕ್ಷೇತ್ರಗಳಲ್ಲಿ ಸಾರ್ವಜನಿಕ ಅನ್ನಸಂತರ್ಪಣೆ ಆಯೋಜಿಸಲಾಗಿತ್ತು. ಸಾವಿರಾರು ಮಂದಿ ಭಕ್ತರು ಅನ್ನ ಪ್ರಸಾದ ಸ್ವೀಕರಿಸಿದರು.
ಮಂಜೇಶ್ವರದಲ್ಲಿ
ಷಷ್ಠಿ ಬ್ರಹ್ಮರಥೋತ್ಸವ
ಮಂಗಳೂರು: ಹದಿನೆಂಟು ಪೇಟೆಯ ದೇವಸ್ಥಾನ ಖ್ಯಾತಿಯ ಮಂಜೇಶ್ವರದ ಶ್ರೀಮದನಂತೇಶ್ವರ ದೇವಸ್ಥಾನ ದಲ್ಲಿ ಚಂಪಾಷಷ್ಠಿ ಉತ್ಸವ ಸಂಪನ್ನಗೊಂಡಿತು. ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಭದ್ರ ನರಸಿಂಹ ಹಾಗೂ ಸುಬ್ರಹ್ಮಣ್ಯ ದೇವರ ಬ್ರಹ್ಮರಥೋತ್ಸವ ನಡೆಯಿತು.