ಪಿಲಿಕುಳ: ‘ಚಿಂಟು’ ಚಿರತೆಗೆ ಸಿಸೇರಿಯನ್ : ಬದುಕುಳಿಯಲಿಲ್ಲ ಮರಿಗಳು!
Team Udayavani, Sep 18, 2020, 7:51 PM IST
ಮಂಗಳೂರು: ಸಿಸೇರಿಯನ್ ಶಸ್ತ್ರಚಿಕಿತ್ಸೆಯ ಮೂಲಕ ಮಹಿಳೆಯರಿಗೆ ಹೆರಿಗೆ ಮಾಡಿಸುವುದನ್ನು ನೀವು ಕೇಳಿಯೇ ಇರುತ್ತೀರಿ.
ಆದರೆ ಇಲ್ಲೊಂದು ಘಟನೆಯಲ್ಲಿ ಪ್ರಸವ ಸಮಸ್ಯೆಯಿಂದ ಬಳಲುತ್ತಿದ್ದ ಚಿರತೆಯೊಂದಕ್ಕೆ ಇದೀಗ ಸಿಸೇರಿಯನ್ ಶಸ್ತ್ರಚಿಕಿತ್ಸೆಯನ್ನು ನಡೆಸಲಾಗಿದೆ.
ಮಂಗಳೂರಿನ ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಪಾಲನೆಯಲ್ಲಿದ್ದ ‘ಚಿಂಟು’ ಹೆಸರಿನ ಚಿರತೆಯೇ ಈ ರೀತಿಯಾಗಿ ಸಿಸೇರಿಯನ್ ಶಸ್ತ್ರಚಿಕಿತ್ಸೆಗೊಳಗಾದವಳಾಗಿದ್ದಾಳೆ.
ಇಲ್ಲಿನ ಎಂಟು ವರ್ಷ ಪ್ರಾಯದ ಚಿಂಟು ಹೆಸರಿನ ಹೆಣ್ಣು ಚಿರತೆಗೆ ಹೆರಿಗೆ ಸಮಯದಲ್ಲಿ ತೀವ್ರ ಸಮಸ್ಯೆ ಕಾಣಿಸಿಕೊಂಡಿತ್ತು ಮತ್ತು ಇದರಿಂದಾಗಿ ಚಿಂಟುವಿನ ಆರೋಗ್ಯ ಸ್ಥಿತಿ ಗಂಭೀರವಾಗತೊಡಗಿತ್ತು.
ಪರಿಸ್ಥಿತಿಯ ಗಂಭೀರತೆಯನ್ನು ಅರಿತುಕೊಂಡ ಮೃಗಾಲಯದ ಪಶು ವೈದ್ಯಾಧಿಕಾರಿಗಳು ತಕ್ಷಣವೇ ಚಿಂಟುವಿಗೆ ಶಸ್ತ್ರಚಿಕಿತ್ಸೆ ನಡೆಸಲು ನಿರ್ಧರಿಸಿದರು. ಹೀಗೆ ಶಸ್ತ್ರಚಿಕಿತ್ಸೆ ನಡೆಸಿ ಗರ್ಭದಲ್ಲೇ ಮೃತಪಟ್ಟಿದ್ದ ಎರಡು ಮರಿಗಳನ್ನು ಹೊರತೆಗೆದು ತಾಯಿ ಚಿರತೆಯ ಪ್ರಾಣವನ್ನು ಉಳಿಸಲಾಗಿದೆ.
ಇದೀಗ ಚಿಂಟು ಚೇತರಿಸಿಕೊಳ್ಳುತ್ತಿದ್ದಾಳೆ. ಮೃಗಾಲಯದ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಆಕೆಯ ಆರೋಗ್ಯದ ನಿಗಾ ವಹಿಸಿದ್ದಾರೆ. ಚಿಂಟುವಿಗೆ ಶಸ್ತ್ರಚಿಕಿತ್ಸೆಯನ್ನು ಮೃಗಾಲಯದ ವೈದ್ಯಾಧಿಕಾರಿಗಳಾದ ಡಾ. ವಿಷ್ಣು ದತ್ ಹಾಗೂ ಡಾ. ಯಶಸ್ವಿ ಅವರು ನಡೆಸಿದರು.
ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಸದ್ಯ 10 ಚಿರತೆಗಳಿವೆ. ಇಲ್ಲಿನ ನಿರ್ದೇಶಕರಾಗಿರುವ ಎಚ್.ಜೆ.ಭಂಡಾರಿ ಅವರು ಈ ಎಲ್ಲಾ ಮಾಹಿತಿಯನ್ನು ಮಾಧ್ಯಮ ಪ್ರಕಟನೆ ಮೂಲಕ ನೀಡಿದ್ದಾರೆ.