ದ.ಕ.: ಲಾಕ್ಡೌನ್ ಆರಂಭ : ಸಾರಿಗೆ, ವಾಣಿಜ್ಯ ಚಟುವಟಿಕೆ ಸ್ಥಗಿತ
ಉಡುಪಿ ಜಿಲ್ಲಾ ಗಡಿ ಬಂದ್ ; ಚರ್ಚ್ಗಳಲ್ಲಿ ಪೂಜೆ ರದ್ದು
Team Udayavani, Jul 16, 2020, 6:30 AM IST
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ 19 ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಜು. 15ರ ರಾತ್ರಿ 8 ಗಂಟೆಯಿಂದ ಲಾಕ್ಡೌನ್ ಆರಂಭವಾಗಿದೆ. ಜು. 23ರ ಬೆಳಗ್ಗೆ 5 ಗಂಟೆಯವರೆಗೆ ಜಾರಿಯಲ್ಲಿರಲಿದೆ.
ಅನಾವಶ್ಯಕ ತಿರುಗಾಡುತ್ತಿದ್ದವರನ್ನು ಪೊಲೀಸರು ತಡೆದು ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಬೆಳಗ್ಗೆ 8ರಿಂದ ಮಧ್ಯಾಹ್ನ 11ರ ವರೆಗೆ ಪಡಿತರ ಅಂಗಡಿಗಳು, ದಿನಸಿ ಅಂಗಡಿ ಸೇರಿದಂತೆ ಆಹಾರ, ದವಸ ಧಾನ್ಯಗಳು, ಹಣ್ಣು ತರಕಾರಿ ಇತ್ಯಾದಿ ಮಾರಾಟಕ್ಕೆ ಅನುಮತಿ ಇದೆ.
ಯಾರಿಗೆ ವಿನಾಯಿತಿ
ಆರೋಗ್ಯ, ವೈದ್ಯಕೀಯ, ಶಿಕ್ಷಣ, ಪೊಲೀಸ್, ಗೃಹ ರಕ್ಷಕದಳ, ನಾಗರಿಕ ರಕ್ಷಣೆ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳು, ವಿಪತ್ತು ನಿರ್ವಹಣೆ, ಮಂಗಳೂರು ಪಾಲಿಕೆ ಚಟುವಟಿಕೆಗಳಿಗೆ ವಿನಾಯಿತಿಯಿದೆ.
ಎಲ್ಲ ಆಹಾರ ಸಂಸ್ಕರಣೆ, ಸಂಬಂಧಿತ ಕೈಗಾರಿಕೆಗಳು, ಬ್ಯಾಂಕ್ಗಳು, ವಿಮಾ ಕಚೇರಿಗಳು, ಎಟಿಎಂ, ಪತ್ರಿಕೆ ಮತ್ತು ವಿದ್ಯುನ್ಮಾನ ಮಾಧ್ಯಮಕ್ಕೆ ವಿನಾಯಿತಿಯಿದೆ.
ರೈಲು, ವಿಮಾನ ಪ್ರಯಾಣಿಕರು ಟಿಕೆಟ್ ತೋರಿಸಿ ಪ್ರಯಾಣಿಸಲು ಅವಕಾಶವಿದ್ದು, ಎಸೆಸೆಲ್ಸಿ ಮೌಲ್ಯ ಮಾಪನ ಕೇಂದ್ರಗಳಿಗೆ ತೆರಳುವ ಶಿಕ್ಷಕರಿಗೂ ಅನುಮತಿ ನೀಡಲಾಗಿದೆ.
ಇವರಿಗಿಲ್ಲ ವಿನಾಯಿತಿ
ವಾಣಿಜ್ಯ ಮತ್ತು ಖಾಸಗಿ ಸಂಸ್ಥೆಗಳನ್ನು ತೆರೆಯಲು ಅನುಮತಿಯಿಲ್ಲ. ರಾಜ್ಯ ಸರಕಾರದ ಕಚೇರಿಗಳು ಹಾಗೂ ಅವುಗಳ ಸ್ವಾಯತ್ತ ಸಂಸ್ಥೆಗಳು ನಿಗಮ ಮುಂತಾದವು ಮುಚ್ಚಿರಲಿವೆ. ಕೆಎಸ್ಆರ್ಟಿಸಿ, ಖಾಸಗಿ ಬಸ್ಗಳು ಹಾಗೂ ಖಾಸಗಿ ವಾಹನಗಳ ಸಂಚಾರವನ್ನು (ತುರ್ತು, ಅಗತ್ಯ ಸೇವೆಗಳ ಹೊರತು) ನಿಷೇಧಿಸ ಲಾಗಿದೆ. ಟ್ಯಾಕ್ಸಿಗಳು (ಆಟೋ ರಿಕ್ಷಾಗಳು ಸೇರಿದಂತೆ) ಮತ್ತು ಕ್ಯಾಬ್ಗಳಿಗೂ ನಿಷೇಧವಿದೆ.
ಹೆಜಮಾಡಿ: ಸೀಲ್ಡೌನ್ಗೆ ಸಕಲ ಸಿದ್ಧತೆ
ಜಿಲ್ಲೆಯ ಗಡಿಭಾಗ ಹೆಜಮಾಡಿಯ ಸೀಲ್ ಡೌನ್ಗಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ದಿನಪೂರ್ತಿ ಕಾರ್ಯಾಚರಿಸುವ ಚೆಕ್ಪೋಸ್ಟ್ ಮೂಲಕ ಗಡಿ ಪ್ರವೇಶಕ್ಕೆ ಇರುವ ನಿರ್ಬಂಧಗಳನ್ನು ಪಾಲಿಸಲಾಗುವುದೆಂದು ಕಾಪು ತಹಶೀಲ್ದಾರ್ ಮಹಮ್ಮದ್ ಐಸಾಕ್ ತಿಳಿಸಿದ್ದಾರೆ.
ತುರ್ತು ಆರೋಗ್ಯ ಸಂಬಂಧಿ ಸಮಸ್ಯೆಯಿಂದ ಜಿಲ್ಲೆಗೆ ಆಗಮಿಸುವ ಆ್ಯಂಬುಲೆನ್ಸ್ಗಳನ್ನು ಪರಿಶೀಲಿಸಿ ಒಳಬಿಡಲಾಗುವುದು. ಸರಕಾರಿ ಸ್ವಾಮ್ಯದ ಕಂಪೆನಿಗಳು, ಕೇಂದ್ರ ಸರಕಾರದ ಸ್ವಾಮ್ಯದ ಉದ್ದಿಮೆಗಳ ಯಾರಿಗೇ ಆಗಲಿ ಅವರ ಗುರುತು ಚೀಟಿಯನ್ನು ಪರಿಶೀಲಿಸಿ ಪ್ರವೇಶಕ್ಕೆ ಅನುಮತಿ ಇದೆ ಎಂದರು.
ಉಡುಪಿ ಜಿಲ್ಲಾ ಗಡಿ ಬಂದ್
ಜಿಲ್ಲೆಯ 10 ಗಡಿಗಳನ್ನು ಬುಧವಾರ ರಾತ್ರಿ ಜಿಲ್ಲಾಡಳಿತ ಬಂದ್ ಮಾಡಿದೆ. ಗುರುವಾರದಿಂದ 14 ದಿನಗಳ ಕಾಲ ಗಡಿ ಸೀಲ್ಡೌನ್ ಮಾಡಲಾಗುತ್ತಿದೆ. ಬಸ್ ವ್ಯವಸ್ಥೆ ರದ್ದುಪಡಿಸಲಾಗಿದೆ. ಸಾರ್ವಜನಿಕ ಕಾರ್ಯಕ್ರಮ ನಡೆಸದಂತೆ ಸೂಚಿಸಲಾಗಿದೆ.
ಚರ್ಚ್ಗಳಲ್ಲಿ ಪೂಜೆ ರದ್ದು
ಕೋವಿಡ್ 19 ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ತಳೆದ ನಿರ್ಧಾರಕ್ಕೆ ಪೂರಕವಾಗಿ ಜಿಲ್ಲೆಯ ಎಲ್ಲ ಚರ್ಚ್ಗಳಲ್ಲಿ ಸಾಮೂಹಿಕ ಪೂಜೆ, ಧಾರ್ಮಿಕ ಆಚರಣೆಗಳನ್ನು ರದ್ದುಗೊಳಿಸ ಲಾಗಿದೆ. ಮುಂದಿನ ಆದೇಶ ಬರುವವರೆಗೆ ಈ ಆದೇಶ ಜಾರಿಯಲ್ಲಿರುತ್ತದೆ ಎಂದು ಧರ್ಮಪ್ರಾಂತದ ಅಧ್ಯಕ್ಷ ರೆ|ಡಾ| ಜೆರಾಲ್ಡ್ ಐಸಾಕ್ ಲೋಬೋ ತಿಳಿಸಿದ್ದಾರೆ.