Crime: ಸುಳ್ಯ ಭಾಗದ ಅಪರಾಧ ಸುದ್ದಿಗಳು
Team Udayavani, Apr 16, 2024, 8:34 PM IST
ದ್ವಿಚಕ್ರ ವಾಹನಗಳಿಗೆ ಕಾರು ಢಿಕ್ಕಿ
ಸುಳ್ಯ: ಎರಡು ದ್ವಿಚಕ್ರ ವಾಹನಗಳಿಗೆ ಕಾರೊಂದು ಢಿಕ್ಕಿಯಾದ ಪರಿಣಾಮ ದ್ವಿಚಕ್ರ ವಾಹನ ಸವಾರರು ಗಾಯಗೊಂಡ ಘಟನೆ ಮಾಣಿ-ಮೈಸೂರು ಹೆದ್ದಾರಿಯ ಜಾಲೂÕರಿನಲ್ಲಿ ಸೋಮವಾರ ಸಂಭವಿಸಿದೆ.
ಮಂಡೆಕೋಲಿನ ಬದಿಕಾನದ ಹಿತೇಶ್ ಹಾಗೂ ಅವರ ತಮ್ಮ ಕೃತಿಕ್ ತಮ್ಮ ವಾಹನದಲ್ಲಿ ಸುಳ್ಯಕ್ಕೆ ತೆರಳುತ್ತಿದ್ದ ವೇಳೆ ಜಾಲ್ಸೂರಿನಲ್ಲಿ ಸುಳ್ಯ ಕಡೆಯಿಂದ ಬರುತ್ತಿದ್ದ ಕಾರನ್ನು ಅದರ ಚಾಲಕ ಅಜಾಗರೂಕತೆಯಿಂದ ಚಲಾಯಿಸಿ ದ್ವಿಚಕ್ರ ವಾಹನಗಳಿಗೆ ಢಿಕ್ಕಿ ಉಂಟು ಮಾಡಿದ್ದು, ಘಟನೆಯಲ್ಲಿ ಹಿತೇಶ್ ಹಾಗೂ ಕೃತಿಕ್ ಗಾಯಗೊಂಡಿದ್ದು, ಸುಳ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನೆಯಲ್ಲಿ ಬಿದ್ದ ಸ್ಥಿತಿಯಲ್ಲಿ ಯುವಕನ ಶವ ಪತ್ತೆ
ಸುಳ್ಯ: ಕುಡಿತದ ಚಟ ಹೊಂದಿದ್ದ ಯುವಕನೋರ್ವನ ಮೃತದೇಹ ಬಿದ್ದ ಸ್ಥಿತಿಯಲ್ಲಿ ಮನೆಯಲ್ಲಿ ಪತ್ತೆಯಾಗಿದ್ದು, ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಡೆಕೋಲು ಗ್ರಾಮದ ಕುತ್ಯಾಡಿ ಮನೆ ಕುಸುಮಾವತಿ ಅವರ ಪುತ್ರ ಸಚಿನ್ (28) ಮೃತರು.
ಕುಸುಮಾವತಿ ಅವರು ಎ.14ರಂದು ತನ್ನ ನಡುಗಲ್ಲಿನ ತಂಗಿಯ ಮನೆಗೆ ಹೋಗಿದ್ದು, ಮನೆಯಲ್ಲಿ ಸಚಿನ್ ಒಬ್ಬರೇ ಇದ್ದಿದ್ದರು. ಎ. 15ರಂದು ಬೆಳಗ್ಗೆ ಸಚಿನ್ ಬಿದ್ದು ಗಾಯಗೊಂಡಿರುವ ಫೋಟೋವನ್ನು ಕುಸುಮಾವತಿ ಅವರ ತಂಗಿಯ ಮಗನ ಮೊಬೈಲ್ಗೆ ಕಳುಹಿಸಿದ್ದು, ಮಧ್ಯಾಹ್ನ ಕುತ್ಯಾಡಿಯ ತನ್ನ ಮನೆಗೆ ಕುಸುಮಾವತಿ ಅವರು ಬಂದು ನೋಡಿದಾಗ ಮನೆಯ ಎದುರಿನ ಹಾಗೂ ಹಿಂದಿನ ಬಾಗಿಲು ಒಳಭಾಗದಿಂದ ಹಾಕಲಾಗಿತ್ತು.
ಸಚಿನ್ ಹಾಲ್ನಲ್ಲಿ ಮಲಗಿದ್ದು, ಸುತ್ತಲೂ ರಕ್ತ ಹರಿದಿರುವುದು ಪತ್ತೆಯಾಗಿದೆ. ಇದರಿಂದ ಗಾಬರಿಗೊಂಡು ನೆರೆಕರೆಯವರ ಸಹಾಯದಿಂದ ಬಾಗಿಲು ತೆಗೆದು ಒಳಹೋಗಿ ನೋಡಿದಾಗ ಸಚಿನ್ನ ಬಲಕಣ್ಣಿನ ಮೇಲ್ಭಾಗದಲ್ಲಿ ಗಾಯವಾಗಿ ರಕ್ತ ಹೊರಬಂದು ಮೃತಪಟ್ಟಿರುವುದು ಕಂಡು ಬಂದಿದೆ. ಸಚಿನ್ ತಾಯಿ ಕುಸುಮಾವತಿ ಅವರು ನೀಡಿದ ದೂರಿನಂತೆ ಸುಳ್ಯ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿದೆ.
ಅಪಘಾತ: ಪ್ರಕರಣ ದಾಖಲು
ಸುಳ್ಯ: ಪೆರುವಾಜೆ ಗ್ರಾಮದ ಬೋರಡ್ಕದಲ್ಲಿ ರಸ್ತೆ ಬದಿಯ ಮರಕ್ಕೆ ಸ್ಕೂಟರ್ ಢಿಕ್ಕಿಯಾಗಿ ಸಹಸವಾರ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎ.11ರಂದು ರಾತ್ರಿ ಸ್ಕೂಟರ್ನಲ್ಲಿ ಮಹಮ್ಮದ್ ಮುಸಾಬ್ ಸವಾರನಾಗಿ ಹಾಗೂ ಮಹಮ್ಮದ್ ರಾಜೀಕ್ ಸಹ ಸವಾರನಾಗಿ ಪ್ರಯಾಣಿಸುತ್ತ ಸುಳ್ಯ ತಾಲೂಕಿನ ಪೆರುವಾಜೆ ಗ್ರಾಮದ ಬೋರಡ್ಕಕ್ಕೆ ತಲುಪಿದಾಗ ಮಹಮ್ಮದ್ ಮುಸಾಬ್ ಸ್ಕೂಟರ್ನ್ನು ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ರಸ್ತೆ ಬದಿಯ ಮರಕ್ಕೆ ಢಿಕ್ಕಿಯಾಗಿ ಮಗುಚಿ ಬಿದ್ದಿದ್ದು, ಘಟನೆಯಲ್ಲಿ ಇಬ್ಬರೂ ಗಾಯಗೊಂಡಿದ್ದು, ಗಾಯಾಳುಗಳನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆತಂದಾಗ ಮಹಮ್ಮದ್ ರಾಜಿಕ್ ಮೃತಪಟ್ಟಿದ್ದು, ಮಹಮ್ಮದ್ ಮುಸಾಬ್ ನನ್ನು ಒಳರೋಗಿಯನ್ನಾಗಿ ದಾಖಲಿಸಲಾಗಿತ್ತು. ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.