ದಕ್ಷಿಣ ಕನ್ನಡ, ಉಡುಪಿ ಉತ್ತಮ ಮಳೆ
Team Udayavani, Jun 26, 2018, 3:41 PM IST
ಮಂಗಳೂರು/ ಉಡುಪಿ: ಕರಾವಳಿಯಾದ್ಯಂತ ಸೋಮವಾರ ಉತ್ತಮ ಮಳೆಯಾಗಿದೆ. ಮಂಗಳೂರು ನಗರ, ಪುತ್ತೂರು, ಬಂಟ್ವಾಳ, ಸುಬ್ರಹ್ಮಣ್ಯ, ಹಳೆಯಂಗಡಿ, ಕಿನ್ನಿಗೋಳಿ, ಸುಳ್ಯ, ಉಳ್ಳಾಲ, ಸುರತ್ಕಲ್, ಬಂಟ್ವಾಳ, ಮಡಂತ್ಯಾರು, ಮಚ್ಚಿನ ಪಡುಬಿದ್ರಿ, ಕಾಪು, ಸೇರಿದಂತೆ ಅನೇಕ ಕಡೆಗಳಲ್ಲಿ ಮಳೆಯಾದ ವರದಿಯಾಗಿದೆ.
ಉಡುಪಿ: 10 ಮನೆಗಳಿಗೆ ಭಾಗಶಃ ಹಾನಿ
ಉಡುಪಿ ತಾಲೂಕಿನಲ್ಲಿ ರವಿವಾರ ರಾತ್ರಿ ಮತ್ತು ಸೋಮವಾರ ಮತ್ತೆ ಮಳೆ ಬಿರುಸಾಗಿದೆ. ಉಡುಪಿ ನಗರವೂ
ಸೇರಿದಂತೆ ತಾಲೂಕಿನ ವಿವಿಧೆಡೆ ಸೋಮವಾರ ನಿರಂತರ ಮಳೆ ಸುರಿದಿದೆ. ಕುಂದಾಪುರ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದೆ. ಉಡುಪಿ ಮತ್ತು ಸುತ್ತಮುತ್ತ ಸೋಮವಾರ ಮಧ್ಯಾಹ್ನದವರೆಗೆ ಹಾಗೂ ಸಂಜೆಯ ಅನಂತರ ಮಳೆ ಅಬ್ಬರವಿತ್ತು. ಕಾರ್ಕಳ ಭಾಗದಲ್ಲಿ ಸಾಧಾರಣ ಪ್ರಮಾಣದಲ್ಲಿ ಮಳೆಯಾಗಿದೆ. ನೆರೆ ಸಮಸ್ಯೆ ಉಂಟಾಗಿಲ್ಲವಾದರೂ ರಸ್ತೆ ಗುಂಡಿಗಳು ಅಲ್ಲಲ್ಲಿ ಅಪಾಯ ಆಹ್ವಾನಿಸುತ್ತಲೇ ಇವೆ. ನೀರು ನಿಂತ ರಸ್ತೆ ಹೊಂಡಗಳು ಅಪಘಾತಕ್ಕೂ ಕಾರಣವಾಗುತ್ತಿವೆ.
ಕರಾವಳಿ ಬೈಪಾಸ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊಂಡಗಳು ಹಾಗೂ ಇಕ್ಕಟ್ಟಿನ ರಸ್ತೆಯ ಪರಿಣಾಮ ದಿನನಿತ್ಯವೆಂಬಂತೆ ಟ್ರಾಫಿಕ್ ಜಾಮ್ ಆಗುತ್ತಿದೆ. ಬೈಪಾಸ್ನಿಂದ ಆದಿಉಡುಪಿ ಕಡೆಗೆ ಹೋಗುವ ರಸ್ತೆಯಲ್ಲೂ ಕೆಲವೆಡೆ ದೊಡ್ಡ ಹೊಂಡಗಳುಂಟಾಗಿವೆ. ಇವುಗಳನ್ನು ತಾತ್ಕಾಲಿಕವಾಗಿಯಾದರೂ ಮುಚ್ಚುವ ಕಾಮಗಾರಿ ನಡೆಸಬೇಕಾಗಿದೆ. ಜೂ. 22ರಿಂದೀಚೆಗೆ ತಾಲೂಕಿನಲ್ಲಿ 10 ಮನೆಗಳಿಗೆ ಗಾಳಿ ಮಳೆಯಿಂದ ಭಾಗಶಃ ಹಾನಿಯಾಗಿದೆ.
ಒತ್ತಿನೆಣೆ: ಕುಸಿತಕ್ಕೆ ತಾತ್ಕಾಲಿಕ ತಡೆ
ರಾಷ್ಟ್ರೀಯ ಹೆದ್ದಾರಿ 66ರ ಒತ್ತಿನೆಣೆಯಲ್ಲಿ ರವಿವಾರ ಗುಡ್ಡ ಕುಸಿತ ನಡೆದ ಸ್ಥಳದಲ್ಲಿ ಸೋಮವಾರ ಐಆರ್ಬಿ ಅಧಿಕಾರಿಗಳು ಸಿಮೆಂಟ್ ಚೀಲಗಳನ್ನು ಜೋಡಿ ಸಿಟ್ಟು, ಮಣ್ಣು ಮತ್ತಷ್ಟು ಕುಸಿಯದಂತೆ ತಡೆಯುವ
ಕೆಲಸ ಮಾಡಿದ್ದಾರೆ.
ರವಿವಾರ ಶಾಸಕ ಸುಕುಮಾರ ಶೆಟ್ಟ, ಕುಂದಾಪುರ ಎಸಿ ಭೂಬಾಲನ್ ಅವರು ಕೂಡ ಭೇಟಿ ನೀಡಿ ತುರ್ತು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು.