ಕರಾವಳಿಯಲ್ಲಿ ಪಿಯುಸಿ ಸೀಟಿಗೆ ಬಹು ಬೇಡಿಕೆ !
Team Udayavani, Aug 11, 2021, 8:10 AM IST
ಮಂಗಳೂರು: ದ್ವಿತೀಯ ಪಿಯುಸಿ ಯಂತೆ ಈ ಬಾರಿ ಎಸೆಸೆಲ್ಸಿ ಪರೀಕ್ಷೆ ಬರೆದ ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣರಾಗಿರುವ ಹಿನ್ನೆಲೆಯಲ್ಲಿ ಪ್ರಥಮ ಪಿಯುಸಿ ಸೀಟಿಗಾಗಿ ಕರಾವಳಿಯ ಪದವಿಪೂರ್ವ ಕಾಲೇಜಿನಲ್ಲಿ ಬಹುಬೇಡಿಕೆ ಶುರುವಾಗಿದೆ. ಎರಡೂ ಜಿಲ್ಲೆಯಲ್ಲಿ 46,968 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಎಸೆಸೆಲ್ಸಿ ಪಾಸಾದ ವಿದ್ಯಾರ್ಥಿಗಳು ಪ್ರಥಮ ಪಿಯುಸಿಗೆ ದಾಖಲಾತಿ ಪಡೆಯುವ ಹಿನ್ನೆಲೆಯಲ್ಲಿ ಕರಾವಳಿ ಭಾಗದ ಸರಕಾರಿ ಪದವಿಪೂರ್ವ, ಅನು ದಾನಿತ ಹಾಗೂ ಅನು ದಾನರಹಿತ ಕಾಲೇಜು ಗಳಲ್ಲಿ ಸೀಟು ಕಾಯ್ದಿರಿ ಸುವ ಪ್ರಕ್ರಿಯೆ ಆರಂಭವಾ ಗಿದೆ. ಉಳಿದಂತೆ ಐಟಿಐ ಸೇರಿ ದಂತೆ ವೃತ್ತಿಪರ ಕೋರ್ಸ್ಗಳಿಗೆ ವಿದ್ಯಾರ್ಥಿಗಳು ದಾಖಲಾತಿ ಪಡೆಯಲಿದ್ದಾರೆ.
ಕಳೆದ ವರ್ಷ ಎಸೆಸೆಲ್ಸಿಯಲ್ಲಿ ದ.ಕ. ಜಿಲ್ಲೆಯ 21,928 ಹಾಗೂ ಉಡುಪಿ ಜಿಲ್ಲೆಯಲ್ಲಿ 11,620 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. ಈ ಬಾರಿ ದ.ಕ ಜಿಲ್ಲೆಯಲ್ಲಿ ಒಟ್ಟು 32,612 ಹಾಗೂ ಉಡುಪಿಯಲ್ಲಿ 14,356 ವಿದ್ಯಾರ್ಥಿಗಳು ತೇರ್ಗಡೆ ಯಾಗಿದ್ದಾರೆ. ಹೀಗಾಗಿ ಕಳೆದ ವರ್ಷ ಕ್ಕಿಂತ ಈ ಬಾರಿ ಎರಡೂ ಜಿಲ್ಲೆಯಲ್ಲಿ ಒಟ್ಟು ಉತ್ತೀರ್ಣ
ವಿದ್ಯಾರ್ಥಿಗಳ ಸಂಖ್ಯೆ 13,420 ರಷ್ಟು ಹೆಚ್ಚಾಗಿದೆ. ಹೀಗಾಗಿ ಎರಡೂ ಜಿಲ್ಲೆಗಳಲ್ಲಿ ಪ್ರಥಮ ಪಿಯು ಸೀಟು ಹೊಂದಿಸುವ ಪ್ರಮೇಯ ಎದುರಾಗಬಹುದು.
ಕಳೆದ ವರ್ಷ ದ.ಕ. ಜಿಲ್ಲೆಯಲ್ಲಿ 29,800 ವಿದ್ಯಾರ್ಥಿಗಳು ಹಾಗೂ ಉಡುಪಿ ಜಿಲ್ಲೆಯಲ್ಲಿ 14800ವಿದ್ಯಾರ್ಥಿಗಳು ಪ್ರಥಮ ಪಿಯುಸಿಗೆ ದಾಖಲಾತಿಯಾಗಿದ್ದರು.
“ವಾಣಿಜ್ಯ’ದತ್ತ ವಿದ್ಯಾರ್ಥಿಗಳ ಚಿತ್ತ! :
ಇತ್ತೀಚೆಗೆ ವಾಣಿಜ್ಯ ವಿಭಾಗದತ್ತ ವಿದ್ಯಾರ್ಥಿಗಳ ಚಿತ್ತ ಬಹುವಾಗಿ ನೆಟ್ಟಿದೆ. ಕಳೆದ ವರ್ಷ ದ.ಕ. ಜಿಲ್ಲೆಯಲ್ಲಿ ಒಟ್ಟು 29 ಸಾವಿರ ವಿದ್ಯಾರ್ಥಿಗಳ ಪೈಕಿ 14 ಸಾವಿರ ವಿದ್ಯಾರ್ಥಿಗಳು ವಾಣಿಜ್ಯ ಹಾಗೂ 11,900 ವಿದ್ಯಾರ್ಥಿಗಳು ವಿಜ್ಞಾನ ವಿಭಾಗ, ಉಡುಪಿಯಲ್ಲಿ 14 ಸಾವಿರ ವಿದ್ಯಾರ್ಥಿಗಳ ಪೈಕಿ 7,948 ವಾಣಿಜ್ಯ, 5,371 ವಿದ್ಯಾರ್ಥಿಗಳು ವಿಜ್ಞಾನ ವಿಭಾಗ ಆಯ್ಕೆ ಮಾಡಿದ್ದರು. ಹೀಗಾಗಿ ಕಳೆದ ವರ್ಷದಂತೆ ಈ ಬಾರಿಯೂ ಪಿಯುವಿನಲ್ಲಿ ವಾಣಿಜ್ಯ ವಿಷಯ ಆಯ್ಕೆಗೆ ವಿದ್ಯಾರ್ಥಿಗಳು ಹೆಚ್ಚಿನ ಒಲವು ವ್ಯಕ್ತಪಡಿಸುವ ಸಾಧ್ಯತೆಯಿದೆ.
ವಿದ್ಯಾರ್ಥಿಗಳ ಸಂಖ್ಯೆ ಅಧಿಕವಿರುವ ಕಾಲೇಜಿನಲ್ಲಿ ಹೆಚ್ಚುವರಿ ವಿಭಾಗ ತೆರೆಯಲು ಕೆಲವು ಕಾಲೇಜಿನಲ್ಲಿ ತೀರ್ಮಾನಿಸಲಾಗಿದ್ದು, ಈ ಪೈಕಿ ಸರಕಾರಿ ಕಾಲೇಜಿನಲ್ಲಿ ಹೆಚ್ಚು ಸೀಟು ಒದಗಿಸಲಾಗುತ್ತದೆ. ಉಳಿದಂತೆ ಎರಡೂ ಜಿಲ್ಲೆಗಳ ಸುಮಾರು 20ಕ್ಕೂ ಅಧಿಕ ಅನು
ದಾನರಹಿತ ಕಾಲೇಜುಗಳು ಹೆಚ್ಚುವರಿ ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶ ನೀಡುವಂತೆ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿವೆ. ಒಂದು ವೇಳೆ ಹೆಚ್ಚುವರಿ ವಿಭಾಗ ತೆರೆದರೆ ಭೌತಿಕ ತರಗತಿ ಆರಂಭವಾದ ಬಳಿಕ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರ ಕೊರತೆ ಎದುರಾಗುವ ಸಾಧ್ಯತೆಯಿದ್ದು ಹಾಲಿ ಶಿಕ್ಷಕರಿಗೆ ಹೆಚ್ಚುವರಿ ಹೊರೆ ಬೀಳಬಹುದು.
“ಸೀಟು ಕೊರತೆ ಆಗದು’ :
ರಾಜ್ಯಾದ್ಯಂತ 5,600 ಪದವಿಪೂರ್ವ ಕಾಲೇಜುಗಳಿದ್ದು ಸುಮಾರು 12 ಲಕ್ಷ ಸೀಟುಗಳಿವೆ. ಈ ವರ್ಷ ಎಸೆಸೆಲ್ಸಿಯಲ್ಲಿ ಸುಮಾರು 8.71 ಲಕ್ಷ ವಿದ್ಯಾರ್ಥಿಗಳು ಪಾಸಾಗಿದ್ದರೂ ಸೀಟುಗಳ ಕೊರತೆ ಎದುರಾಗುವ ಸಾಧ್ಯತೆಯಿಲ್ಲ. ಸರಕಾರಿ ಕಾಲೇಜುಗಳಿಗೆ ಈ ಬಾರಿ ಹೆಚ್ಚಿನ ದಾಖಲಾತಿ ಆಗುವ ನಿರೀಕ್ಷೆಯಿದೆ. – ಉಮಾಶಂಕರ್, ಪ್ರಧಾನ ಕಾರ್ಯದರ್ಶಿ, ಪ್ರಾಥಮಿಕ, ಫ್ರೌಢ ಶಿಕ್ಷಣ ಇಲಾಖೆ ಬೆಂಗಳೂರು