ಹದಗೆಟ್ಟಿದೆ ಹೊಸಕಾವೇರಿ-ದೇವಸ್ಯ ರಸ್ತೆ
Team Udayavani, Nov 19, 2017, 12:07 PM IST
ಕಿನ್ನಿಗೋಳಿ: ಇಲ್ಲಿನ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೊಸಕಾವೇರಿ ದೇವಸ್ಯ ರಸ್ತೆ ನಾದುರಸ್ತಿಯಲ್ಲಿದ್ದು, ಸಂಚಾರಕ್ಕೆ ಯೋಗ್ಯವಾಗಿಲ್ಲ.
ಈ ಬಗ್ಗೆ ಪಂಚಾಯತ್ಗೆ ಮನವಿ ನೀಡಿದರೂ ಪ್ರಯೋಜನವಾಗಿಲ್ಲ. ಚುನಾವಣೆ ಸಂದರ್ಭ ಭರವಸೆ ಕೊಟ್ಟವರು ಮುಂದಿನ ಚುನಾವಣೆ ವೇಳೆಯಲ್ಲೇ ಬರೋದು ಎಂದು ಗ್ರಾಮಸ್ಥರು ದೂರಿದ್ದಾರೆ.
ಹೊಸಕಾವೇರಿ ದೇವಸ್ಯ ಪರಿಸರದಲ್ಲಿ 25ಕ್ಕೂ ಹೆಚ್ಚು ಮನೆಗಳಿದ್ದು, ನಿವಾಸಿಗಳ ಸಂಚಾರಕ್ಕೆ ಇದೇ ಮುಖ್ಯ ರಸ್ತೆಯಾಗಿದೆ. 20 ವರ್ಷಗಳ ಹಿಂದೆ ಡಾಮರು ಹಾಕಿದ್ದು, ಅನಂತರ ಅಲ್ಪಸ್ವಲ್ಪ ತೇಪೆ ಕಾರ್ಯ ಮಾಡಲಾಗಿದೆ. ಈಗ ಈ ರಸ್ತೆ ಜಲ್ಲಿ ಕಲ್ಲುಗಳಿಂದಲೇ ತುಂಬಿಕೊಂಡಿದೆ ಎಂದು ಸ್ಥಳೀಯರು ದೂರಿದ್ದಾರೆ.
ದೇವಸ್ಯಕ್ಕೆ ಹೋಗುವ ರಸ್ತೆಯ ಕೆಳಗಿನ ಭಾಗ ತುಂಬಾ ಇಳಿಜಾ ರಾಗಿದ್ದು, ಡಾಮರು ಹಾಕಿದರೂ ಪ್ರಯೋಜನವಾಗುತ್ತಿಲ್ಲ. ಮಳೆಗಾಲದಲ್ಲಿ ನೀರಿನ ಒರತೆ ಉಕ್ಕುತ್ತವೆ. ರಸ್ತೆಯ ಇಕ್ಕೆಲಗಳಲ್ಲಿ ದಟ್ಟವಾಗಿ ಮರಗಳಿದ್ದು, ಡಾಮರು ಬೇಗನೆ ಕಿತ್ತುಹೋಗಬಹುದು. ಆದುದರಿಂದ ಕಾಂಕ್ರಿಟ್ ಇಲ್ಲವೇ ಇಂಟರ್ಲಾಕ್ ಅಳವಡಿಸಿದರೆ ಶಾಶ್ವತ ಪರಿಹಾರ ಆಗಬಹುದು ಎಂಬುದು ಸ್ಥಳೀಯರ ಅನುಭವದ ಮಾತು.
ಮಳೆಗಾಲದಲ್ಲೂ ನೀರಿನ ಸಮಸ್ಯೆ
ರಾಜ್ಯ ಹೆದ್ದಾರಿ ಕಾಮಗಾರಿಯ ಸಂದರ್ಭ ರಸ್ತೆಯ ಇಕ್ಕೆಲಗಳಲ್ಲಿ ಇದ್ದ ಕುಡಿಯುವ ನೀರಿನ ಪೈಪ್ಲೈನ್ ತುಂಡಾಗಿದ್ದು, ಮತ್ತೆ ದುರಸ್ತಿ ಮಾಡಿಲ್ಲ. ಎತ್ತರದ ಪ್ರದೇಶವಾಗಿರುವುದರಿಂದ ನೀರು ಸುಲಭವಾಗಿ ಏರುವುದಿಲ್ಲ. ಆರಂಭದಲ್ಲಿ ವಾಲ್ಟ್ ಅಳವಡಿಸಿದ್ದರೂ ಯಾರೋ ಗೇಟ್ವಾಲ್ಟ್ ತಿರುಗಿಸುವುದರಿಂದ ಆಗಾಗ ಸಮಸ್ಯೆ ಕಾಡುತ್ತಿದೆ. ಇದಕ್ಕೂ ಪರಿಹಾರ ಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಪ್ರಯೋಜನವಿಲ್ಲ
ಹೊಸಕಾಡು ದೇವಸ್ಯ ಪರಿಸರದಲ್ಲಿ 25ಕ್ಕೂ ಮನೆಗಳಿದ್ದು, ರಸ್ತೆ ದುರಸ್ತಿ ಮಾಡಿ ಎಂದು ಹಲವು ಬಾರಿ ಸಂಬಂಧ ಪಟ್ಟವರಿಗೆ, ಜನಪ್ರತಿನಿಧಿಗಳಿಗೆ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ.
– ಜೋಯ್ಸ,
ಹೊಸಕಾವೇರಿ ದೇವಸ್ಯ ನಿವಾಸಿ
ನೀರು ಪೂರೈಕೆ
ಗ್ರಾಮ ಪಂಚಾಯತ್ನ ಮುಂದಿನ ಕ್ರಿಯಾ ಯೋಜನೆಯಲ್ಲಿ ರಸ್ತೆ ಅಭಿವೃದ್ಧಿಯ ಬಗ್ಗೆ ಹಣಕಾಸಿನ ವ್ಯವಸ್ಥೆ ಮಾಡಲಾಗುವುದು. ಸದ್ಯದ ಮಟ್ಟಿಗೆ ನೀರಿನ ಸಮಸ್ಯೆ ಬಗೆಹರಿಸಲಾಗುವುದು.
– ಫಿಲೋಮಿನಾ ಸಿಕ್ವೇರಾ,
ಕಿನ್ನಿಗೋಳಿ ಗ್ರಾ.ಪಂ. ಅಧ್ಯಕ್ಷರು
ರಘುನಾಥ್ ಕಾಮತ್ ಕೆಂಚನಕೆರೆ