ಪರಿಶ್ರಮ ಯಶಸ್ಸಿನ ಮೂಲಮಂತ್ರ: ಡಾ| ಉಷಾಪ್ರಭಾ
ಓರಿಯೆಂಟೇಶನ್ 2019
Team Udayavani, May 30, 2019, 6:00 AM IST
ಮಹಾನಗರ: ವಿದ್ಯಾರ್ಥಿಗಳು ಆಸಕ್ತಿಯಿಂದ ಹಾಗೂ ಕಠಿನ ಪರಿಶ್ರಮದೊಂದಿಗೆ ದುಡಿದರೆ ಖಂಡಿತ ಉತ್ತಮ ಭವಿಷ್ಯ ರೂಪಿ ಸಿಕೊಳ್ಳುತ್ತಾರೆ. ಯಶಸ್ಸಿನ ಮೂಲಮಂತ್ರ ಕಠಿನ ಶ್ರಮ ಎಂದು ಎಕ್ಸ್ ಪರ್ಟ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆ ಡಾ| ಉಷಾಪ್ರಭಾ ಎನ್. ನಾಯಕ್ ತಿಳಿಸಿದರು.
ನಗರದ ಭಗವತಿ ಕ್ಷೇತ್ರದ ಕೂಟಕ್ಕಳ ಸಭಾಂಗಣದಲ್ಲಿ ನಡೆದ ಎಕ್ಸ್ ಪರ್ಟ್ ಪದವಿಪೂರ್ವ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಮತ್ತು ಅವರ ಪೋಷಕರಿಗೆ ಆಯೋಜಿಸಿದ ಓರಿಯೆಂಟೇಶನ್ 2019 ಕಾರ್ಯ ಕ್ರಮವನ್ನು ಉದ್ಘಾಟಿಸಿ ಅವರು ಮಾತ ನಾಡಿದರು.
ಪದವಿಪೂರ್ವ ಹಂತವು ವಿದ್ಯಾರ್ಥಿಗಳ ಪಾಲಿಗೆ ಅತೀ ಸಂತೋಷಕರ ಸಮಯ. ಈ ಸಮಯ ವ್ಯರ್ಥ ಮಾಡಿಕೊಳ್ಳದೆ ಸದುಪಯೋಗಿಸಿಕೊಳ್ಳಬೇಕು. ಮಕ್ಕಳ ಭವಿಷ್ಯ ರೂಪುಗೊಳಿಸುವಲ್ಲಿ ಪೋಷಕರ ಪಾತ್ರ ತುಂಬಾ ಮುಖ್ಯ. ವಿದ್ಯಾರ್ಥಿ ಶೈಕ್ಷಣಿಕ ಶ್ರೇಷ್ಠತೆ ಪಡೆಯಲು ಪರಿಶ್ರಮದೊಂದಿಗೆ, ಪೋಷಕರ ಪ್ರೋತ್ಸಾಹ ಅತೀ ಮುಖ್ಯ ಎಂದರು.
ಮೊಬೈಲ್ನಿಂದ ದೂರವಿರಿ
ವಿದ್ಯಾರ್ಥಿಗಳು ಮೊಬೈಲ್ ಬಳಕೆಯಿಂದ ದೂರವಿರಬೇಕು. ಈ ಚಟ ಧೂಮಪಾನ ಮದ್ಯಪಾನಕ್ಕಿಂತಲೂ ಹಾನಿಕರವಾದದ್ದು, ಹಣದಿಂದ ಎಲ್ಲವನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದರು. ಇದೇ ಸಂದರ್ಭ ವಿದ್ಯಾರ್ಥಿಗಳಿಗೆ ಪ್ರಮಾಣ ವಚನವನ್ನು ಬೋಧಿಸಿದರು.
ಗುರಿ ಸಾಧಿಸುವ ಛಲ ಮುಖ್ಯ
ಎಕ್ಸ್ಪರ್ಟ್ ಶಿಕ್ಷಣ ಮತ್ತು ಸಮೂಹ ಸಂಸ್ಥೆಗಳ ಅಧ್ಯಕ್ಷ ಪೊ| ನರೇಂದ್ರ ಎಲ್. ನಾಯಕ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಯು ಸರಿಯಾದ ಗುರಿಯನ್ನು ಹೊಂದಿರಬೇಕು.
ಕಠಿನ ಪರಿಶ್ರಮ ಮತ್ತು ಗುರಿ ಸಾಧಿಸುವ ಛಲದೊಂದಿಗೆ ಮುನ್ನಡೆದರೆ ಸಾಧನೆಯ ಪಥ ಮುಟ್ಟಲು ಸಾಧ್ಯ ಎಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ| ರಾಮಚಂದ್ರ ಭಟ್ ಪ್ರಾಸ್ತಾವಿಕ ಮಾತು ಗಳನ್ನಾಡಿದರು.
ವಿದ್ಯಾರ್ಥಿಗಳು ಕಟ್ಟುನಿಟ್ಟಾಗಿ ಅನುಸರಿಸಬೇಕಾದ ಕಾಲೇಜಿನ ನಿಯಮ ನಿಬಂಧನೆಗಳ ಬಗ್ಗೆ ವಿವರಿಸಿದರು.
ದೀಪಿಕಾ ಎ. ನಾಯಕ್, ಯೋಗ ಗುರುಗಳಾದ ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ, ವೇಳಾಪಟ್ಟಿ ಸಂಯೋಜಕ ಪ್ರೊ| ಸುಬ್ರಹ್ಮಣ್ಯ ಉಡುಪ, ಎಐಸಿಇ ವಿಭಾಗದ ಸಂಯೋಜಕ ಪ್ರೊ| ಶ್ಯಾಮ್ ಪ್ರಸಾದ್, ಕನ್ನಡ ವಿಭಾಗದ ಮುಖ್ಯಸ್ಥ ಹಾಗೂ ಕೋಚಿಂಗ್ ಕ್ಲಾಸ್ ಸಂಯೋಜಕ ಕರುಣಾಕರ ಬಳ್ಕೂರು, ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿಗಳಾದ ಭೌತಶಾಸ್ತ್ರ ವಿಭಾಗದ ಉಪನ್ಯಾಸಕ ಪ್ರಸನ್ನ ಕುಮಾರ ಆರ್., ಇಂಗ್ಲಿಷ್ ವಿಭಾಗದ ಉಪನ್ಯಾಸಕಿ ತೆರೆಸಾ ವಿಲ್ಮಾ ಹಾಗೂ ಕಾರ್ಯಕ್ರಮದ ಸಂಯೋಜಕಿ ಶ್ವೇತಾಕುಮಾರಿ ಉಪಸ್ಥಿತರಿದ್ದರು. ಉಪನ್ಯಾಸಕಿ ನೀಹಾ ಫಹೀಮ್ ನಿರೂಪಿಸಿದರು.