ಮಾರುಕಟ್ಟೆ ರಸ್ತೆಯಲ್ಲಿ ವಾಹನ ಸವಾರರಿಗೆ ಶಿಸ್ತುಪಾಠ
Team Udayavani, Nov 19, 2017, 10:37 AM IST
ಹಳೆಯಂಗಡಿ: ಬೆಳೆಯುತ್ತಿರುವ ಪಟ್ಟಣ ಹಳೆಯಂಗಡಿಯ ಕೆಲವು ಗ್ರಾಮಾಂತರ ಭಾಗಗಳಲ್ಲಿ ಸಂಚಾರದ ಒತ್ತಡ ತೀವ್ರವಾಗಿ ಕಾಡುತ್ತಿದೆ. ಇದರ ಹಿನ್ನೆಲೆಯಲ್ಲಿ ಸಂಚಾರಿ ಪೊಲೀಸರು ಇಲ್ಲಿನ ನಿರ್ದಿಷ್ಟ ಪ್ರದೇಶದ ರಸ್ತೆಗಳಲ್ಲಿ ಅಡ್ಡಾದಿಡ್ಡಿ ವಾಹನಗಳ ನಿಲುಗಡೆಯ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ.
ಹಳೆಯಂಗಡಿಯ ಒಳಪೇಟೆಯ ಮಾರುಕಟ್ಟೆ ಬಳಿ ವಾಹನಗಳ ದಟ್ಟಣೆ ತೀವ್ರವಾಗಿದೆ. ಇಲ್ಲಿನ ಅಂಗಡಿಗಳಿಗೆ ಹಾಗೂ ಮಾರುಕಟ್ಟೆಗೆ ಬರುವ ಗ್ರಾಹಕರು ತಮ್ಮ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸಿ ತೆರಳುತ್ತಾರೆ. ಇದೇ ರಸ್ತೆಯ ಮೂಲಕ ಸಸಿಹಿತ್ಲು, ಪಡುಪಣಂಬೂರು, ಕದಿಕೆ ಭಾಗಕ್ಕೆ ಸಂಚರಿಸುವ ವಾಹನಗಳಿಗೆ ತೀವ್ರ ಅಡಚಣೆಯಾಗುತ್ತಿತ್ತು.
ಫೋನ್-ಇನ್ ಕಾರ್ಯಕ್ರಮದಲ್ಲಿ ದೂರು
ಈ ಸಮಸ್ಯೆ ಬಗ್ಗೆ ಸ್ಥಳೀಯರು ಮಂಗಳೂರಿನಲ್ಲಿ ಪ್ರತೀ ವಾರ ನಡೆಯುತ್ತಿರುವ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಪೊಲೀಸ್ ಕಮೀಷನರ್ ಟಿ.ಆರ್. ಸುರೇಶ್ ಅವರಲ್ಲಿ ದೂರಿಕೊಂಡಿದ್ದರು. ಕಮೀಷನರ್ ಸೂಚನೆಯಂತೆ ಇದೀಗ ಸಂಚಾರಿ ಪೊಲೀಸರು ಅಡ್ಡಾದಿಡ್ಡಿ ವಾಹನಗಳನ್ನು ನಿಲ್ಲಿಸುವ ಸವಾರರಿಗೆ ಎಚ್ಚರಿಕೆ ನೀಡುತ್ತಿದ್ದು ಆದರೂ ಸುಧಾರಣೆ ಕಾಣದಿದ್ದಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳುತ್ತಿದ್ದಾರೆ.
ಕಾರ್ಯಾಚರಣೆ ನಿರಂತರ
ಪೊಲೀಸ್ ಫೋನ್ಇನ್ ಕಾರ್ಯಕ್ರಮದ ಮೂಲಕ ಸ್ವತಃ ಕಮಿಷನರ್ ಅವರೇ ಸೂಚನೆ ನೀಡಿರುವುದರಿಂದ ಈ ಕಾರ್ಯಾಚರಣೆ ನಡೆಯುತ್ತಿದೆ. ನಾಗರಿಕರು ಪೊಲೀಸರೊಂದಿಗೆ ಸಹಕರಿಸಬೇಕು. ಅವರವರ ವಾಹನಗಳನ್ನು ಶಿಸ್ತಾಗಿ ರಸ್ತೆಯಿಂದ ಸಾಕಷ್ಟು ದೂರದಲ್ಲಿಯೇ ಪಾರ್ಕಿಂಗ್ ಮಾಡಿದಲ್ಲಿ ನಾವೂ ಅವರಿಗೆ ತೊಂದರೆ ಕೊಡುವುದಿಲ್ಲ. ಇತರ ವಾಹನಗಳಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗಬಾರದು ಎಂಬುದು ಇಲಾಖೆಯ ಕಾಳಜಿ.
– ಮಂಜುನಾಥ್ , ಇನ್ಸ್ಪೆಕ್ಟರ್, ಉತ್ತರ ವಲಯ ಸಂಚಾರಿ ಠಾಣೆ, ಕುಳಾಯಿ
ಸುದಿನದಲ್ಲಿ ಪ್ರಕಟ
ಪೊಲೀಸ್ ಫೋನ್-ಇನ್ ಕಾರ್ಯಕ್ರಮದಲ್ಲಿ ಸ್ಥಳೀಯರು ಪ್ರಶ್ನಿಸಿದ ಬಗ್ಗೆ ಉದಯವಾಣಿಯ ಸುದಿನದಲ್ಲಿ ನ.5 ರಂದು
ಪ್ರಕಟಗೊಂಡಿದ್ದು, ಇದನ್ನು ಸಾರ್ವಜನಿಕರು ಹಾಗೂ ಸ್ಥಳೀಯ ಅಂಗಡಿ ಮಾಲೀಕರು ಸ್ವಾಗತಿಸಿದ್ದರು. ಈ ಬಗ್ಗೆ ಗ್ರಾಹಕರಿಗೆ ಒತ್ತಡ ಹೇರಲು ನಮ್ಮಿಂದ ಸಾಧ್ಯವಿಲ್ಲ ಎಂದು ಸ್ಥಳೀಯ ಅಂಗಡಿ ಮಾಲೀಕರು ಪ್ರತಿಕ್ರಿಯಿಸಿದ್ದಾರೆ.