ಗ್ರಾಮ ಸ್ವರ್ಗ ಚಾಲೆಂಜ್ ಸ್ವೀಕರಿಸುವುದಿಲ್ಲ;ಸಲಹೆ ಪಡೆಯುವೆ
Team Udayavani, Jun 5, 2019, 6:10 AM IST
ಮಂಗಳೂರು: ಯುವ ಬ್ರಿಗೇಡ್ನ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ಅವರು ಟ್ವಿಟರ್ ಮುಖಾಂತರ ರಾಜ್ಯದ 28 ಸಂಸದರಿಗೆ ಹಾಕಿರುವ ‘ಗ್ರಾಮ ಸ್ವರ್ಗ’ ಚಾಲೆಂಜ್ನ್ನು ಸ್ವೀಕರಿಸುವುದಿಲ್ಲ. ಬದಲಿಗೆ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳ ಅಭಿವೃದ್ಧಿಗೆ ಅವರ ಸಲಹೆಯನ್ನು ಸ್ವೀಕರಿಸುವುದಾಗಿ ಸಂಸದ ನಳಿನ್ಕುಮಾರ್ ಕಟೀಲು ಹೇಳಿದ್ದಾರೆ.
ಗ್ರಾಮ ಸ್ವರ್ಗ ಚಾಲೆಂಜ್ ಸ್ವೀಕರಿಸುವ ಬಗ್ಗೆ ‘ಉದಯವಾಣಿ’ ಸಂಪರ್ಕಿಸಿದಾಗ, ನನ್ನ ಕ್ಷೇತ್ರದಲ್ಲಿ ಈಗಾಗಲೇ ಹಿಂದಿನ ಅವಧಿಯಲ್ಲಿ ಬಳ್ಪ ಗ್ರಾಮವನ್ನು ಆದರ್ಶ ಗ್ರಾಮವಾಗಿ ರೂಪಿಸಲಾಗಿದ್ದು, ಈ ಅವಧಿಯಲ್ಲಿ ಇನ್ನೊಂದು ಗ್ರಾಮವನ್ನು ಅದೇರೀತಿ ಅಭಿವೃದ್ಧಿಪಡಿಸಬೇಕಿದೆ. ಹಾಗಾಗಿ ಈ ಚಾಲೆಂಜ್ನ್ನು ಸ್ವೀಕಾರ ಮಾಡುವುದಿಲ್ಲ. ಬದಲಿಗೆ ಅವರು ಅಥವಾ ಬೇರೆ ಯಾರಾದರೂ ನೀಡುವ ಎಲ್ಲ ಉತ್ತಮ ಸಲಹೆಗಳನ್ನು ಆದರ್ಶ ಗ್ರಾಮ ಅಭಿವೃದ್ಧಿಗೆ ಸ್ವೀಕರಿಸುತ್ತೇನೆ ಎಂದಿದ್ದಾರೆ.
ಚಾಲೆಂಜ್ ಸ್ವೀಕರಿಸಿದ ಮೂವರು ಸಂಸದರು
ಕನಿಷ್ಠ ಮೂಲ ಸೌಕರ್ಯಗಳಿಂದಲೂ ವಂಚಿತವಾಗಿರುವ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ದೊಡ್ಡಾನೆ ಎಂಬ ಹಳ್ಳಿಯ ಅಭಿವೃದ್ಧಿ ಸಲುವಾಗಿ ಯುವ ಬ್ರಿಗೇಡ್ ಗ್ರಾಮಸ್ವರ್ಗ ಅಭಿಯಾನವನ್ನು ವಾರದ ಹಿಂದೆ ಕೈಗೆತ್ತಿಕೊಂಡಿತ್ತು. ಜತೆಗೆ ಇಂತಹದೇ ಹಳ್ಳಿಗಳನ್ನು ಸ್ವರ್ಗವಾಗಿ ರೂಪಿಸುವ ಚಾಲೆಂಜ್ ಸ್ವೀಕರಿಸುವಂತೆ ರಾಜ್ಯದ 28 ಮಂದಿ ಸಂಸದರಿಗೆ ಟ್ವಿಟರ್ನಲ್ಲಿ ಚಾಲೆಂಜ್ ನೀಡಿ ಟ್ಯಾಗ್ ಮಾಡಲಾಗಿತ್ತು. ಈ ಚಾಲೆಂಜ್ನ್ನು ಮೈಸೂರು ಸಂಸದ ಪ್ರತಾಪ್ಸಿಂಹ, ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಮತ್ತು ಚಿಕ್ಕೋಡಿ ಸಂಸದ ಅಣ್ಣಾ ಸಾಹೇಬ್ ಜೊಲ್ಲೆ ಸ್ವೀಕರಿಸಿದ್ದಾರೆ. ಹಳ್ಳಿಗಳನ್ನು ಯುವ ಕಾರ್ಯಕರ್ತರೇ ಆಯ್ಕೆ ಮಾಡಿಕೊಟ್ಟು, ಅವರೊಂದಿಗೆ ಆ ಗ್ರಾಮವನ್ನು ಸ್ವರ್ಗವಾಗಿ ಮಾರ್ಪಡಿಸುವಲ್ಲಿ ಕೈಜೋಡಿಸಲಿದ್ದಾರೆ.