Mangaluru ಕಾಂಗ್ರೆಸ್ಸನ್ನು ಹಗುರವಾಗಿ ಪರಿಗಣಿಸದಿರಿ: ಬಿ.ವೈ. ವಿಜಯೇಂದ್ರ
ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾಗಿ ಸತೀಶ್ ಕುಂಪಲ ಪದಗ್ರಹಣ
Team Udayavani, Jan 31, 2024, 12:56 AM IST
ಮಂಗಳೂರು: ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಜನತೆ, ಕಾರ್ಯಕರ್ತರು ಉತ್ಸಾಹದಿಂದ ಇದ್ದಾರೆ. ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿಯಾಗುವುದು ನಿಶ್ಚಿತ. ಆದರೆ ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಕಾಂಗ್ರೆಸ್ ಅನ್ನು ಹಗುರವಾಗಿ ಪರಿಗಣಿ ಸದೆ ಹಗಲಿರುಳು ಶ್ರಮ ಪಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಅಡ್ಯಾರ್ಗಾರ್ಡನ್ನಲ್ಲಿ ಮಂಗಳ ವಾರ ಅವರು ದ.ಕ. ಜಿಲ್ಲಾ ಬಿಜೆಪಿ ನೂತನ ಅಧ್ಯಕ್ಷ ಸತೀಶ್ ಕುಂಪಲ ಅವರ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.
ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸುಳ್ಳು ಹೇಳುವುದರಲ್ಲಿ ಎತ್ತಿದ ಕೈ. ವಿಧಾನ ಸಭಾ ಚುನಾವಣೆಯಲ್ಲಿ ಶೇ. 40 ಭ್ರಷ್ಟಾಚಾರದ ಸರಕಾರ ಎಂದು ಜನರ ದಾರಿತಪ್ಪಿಸಿದ್ದರು ಎನ್ನುವುದನ್ನು ಮರೆಯಬಾರದು ಎಂದರು.
ರಾಜ್ಯದಲ್ಲಿ ನಮ್ಮ ತಪ್ಪಿನಿಂದಲೋ ಅಥವಾ ಆಮಿಷಗಳಿಂದಲೋ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಅದೇ ಗೆಲುವಿನ ನಾಗಾಲೋಟವನ್ನು ಮುಂದುವರಿಸಿ ಲೋಕಸಭಾ ಚುನಾವಣೆಯನ್ನೂ ಗೆಲ್ಲಲಿದ್ದೇವೆ ಎಂಬ ಭ್ರಮಾಲೋಕದಲ್ಲಿ ಅದರ ನಾಯಕರಿದ್ದರು. ಆದರೆ ಪಂಚ ರಾಜ್ಯದ ವಿಧಾನಸಭಾ ಚುನಾವಣೆ ಯಲ್ಲಿನ ಸೋಲಿನ ಏಟಿಗೆ ಐಎನ್ಡಿಐಎ ಕೂಟದ ದಳಗಳೆಲ್ಲ ಉದುರಿಬಿದ್ದಿವೆ. ಮುಂಬರುವ ಚುನಾವಣೆ ವೇಳೆಗೆ ಕಾಂಗ್ರೆಸ್ನಲ್ಲೂ ಯಾರಿರುತ್ತಾರೋ ಗೊತ್ತಿಲ್ಲ ಎಂದರು.
ರಾಜ್ಯದಲ್ಲಿರುವುದು ಭ್ರಷ್ಟಾಚಾರದ, ದಲಿತ ವಿರೋಧಿ, ಬಡವರ ವಿರೋಧಿ ಸರಕಾರ. ಅಹಿಂದ ನಾಯಕ ಎನ್ನುತ್ತಿದ್ದ ಸಿದ್ದರಾಮಯ್ಯ ಈಗ ಕೇವಲ ಅಲ್ಪಸಂಖ್ಯಾಕರ ಹಿಂದೆ ಹೋಗುತ್ತಿದ್ದಾರೆ, ಪರಿಶಿಷ್ಟರಿಗೆ ಇರಿಸಿದ್ದ 11,500 ಕೋಟಿ ರೂ. ಮೊತ್ತವನ್ನು ಗ್ಯಾರಂಟಿಗಳಿಗೆ ಖರ್ಚು ಮಾಡಿದ್ದಾರೆ. ಬಿಜೆಪಿಗೆ ಭ್ರಷ್ಟಾಚಾರದ ಹಣೆಪಟ್ಟಿ ಹಚ್ಚಿದ ಕಾಂಗ್ರೆಸ್ನವರು ತಮ್ಮವರ ಮನೆಗೆ ಐಟಿ ದಾಳಿ ವೇಳೆ 150-200 ಕೋಟಿ ರೂ. ಹಣ ಸಿಕ್ಕಿದರೂ ಈಗ ಕೇಂದ್ರ ಸರಕಾರದಿಂದ ಟಾರ್ಗೆಟ್ ಮಾಡಲಾಗುತ್ತಿದೆ ಎಂಬ ದೂರು ಹೊರಿಸುತ್ತಿದ್ದಾರೆ ಹೊರತು ಕಪ್ಪು ಹಣ ಎಂದು ಒಪ್ಪಿಕೊಳ್ಳುತ್ತಿಲ್ಲ ಎಂದರು.
ನಾನು ಪಕ್ಷದ ರಾಜ್ಯಾಧ್ಯಕ್ಷನಾದಾಗ ತಂದೆಯವರು ಮನೆಗೆ ಬಾರದೆ ರಾಜ್ಯ ಪ್ರವಾಸ ಮಾಡಬೇಕು, 28 ಕ್ಷೇತ್ರಗಳನ್ನೂ ಗೆಲ್ಲಿಸುವ ಕೆಲಸ ಆಗಬೇಕು ಎಂದಿದ್ದರು. ಅದನ್ನು ಪಾಲಿಸುತ್ತಿದ್ದೇನೆ ಎಂದರು.
ಸರಕಾರ 1 ತಿಂಗಳೂ ಇರದು
ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಮಾತನಾಡಿ, ಲೋಕಸಭಾ ಚುನಾವಣೆ ಸನಿಹದಲ್ಲಿದೆ. ಈಗಾಗಲೇ ರಾಮ ಮಂದಿರ ಉದ್ಘಾಟನೆ ಮೂಲಕ ಇಡೀ ದೇಶ ರಾಮಮಯವಾಗಿದೆ. ಮೋದಿ ಪ್ರಧಾನಿ ಆಗಬೇಕು ಎಂದು ಇಡೀ ದೇಶ ಮಾತನಾಡುತ್ತಿದೆ. ನಾವು ಎಲ್ಲ 28 ಸ್ಥಾನಗಳನ್ನೂ ಗೆಲ್ಲಬೇಕು. ಹಾಗಾದರೆ ಕಾಂಗ್ರೆಸ್ ರಾಜ್ಯ ಸರಕಾರ ಒಂದೇ ತಿಂಗಳೂ ಇರುವುದಿಲ್ಲ, ಅದರ ನಾಯಕರೇ ಹೊರ ಬರುತ್ತಾರೆ ಎಂದರು.
ಐಎನ್ಡಿಐಎ ಒಡೆದ ಮನೆಆಗಿದೆ. ರಾಹುಲ್ ಗಾಂಧಿ ಬಿಜೆಪಿಗೆ ಸ್ಟಾರ್ ಕ್ಯಾಂಪೇನರ್ ಥರಾ ಆಗಿದ್ದಾರೆ, ರಾಹುಲ್ ಕಾಲಿಟ್ಟಲ್ಲೆಲ್ಲ ಮೋದಿ ಗೆಲ್ತಿ ದ್ದಾರೆ ಎಂದರು.
ಹನುಮನ ಶಾಪ: ನಳಿನ್
ಸಂಸದ ನಳಿನ್ ಕುಮಾರ್ ಮಾತ ನಾಡಿ, ಸತೀಶ್ ಕುಂಪಲ ಅವರು ಪಂಚಾಯತ್ನಿಂದ ಹಿಡಿದು ಶಾಸಕ ಸ್ಥಾನದವರೆಗೆ ಸ್ಪರ್ಧಿಸಿದವರು. ಸಾಮಾನ್ಯ ಕಾರ್ಯಕರ್ತರಾಗಿದ್ದವರು ಅಧ್ಯಕ್ಷರಾಗಿದ್ದಾರೆ. ಅವರ ನೇತೃತ್ವದಲ್ಲಿ ಮತ್ತೆ ಪಕ್ಷ ಜಿಲ್ಲೆಯಲ್ಲಿ ಗೆಲುವು ಸಾಧಿಸಲಿದೆ ಎಂದರು.
ವಿಧಾನ ಸಭೆ ವಿಪಕ್ಷ ನಾಯಕ, ಡಾ| ಅಶ್ವತ್ಥ ನಾರಾಯಣ್, ರಾಜ್ಯ ಸಂಘಟನ ಪ್ರಧಾನ ಕಾರ್ಯದರ್ಶಿ ರಾಜೇಶ್ ಜಿ.ವಿ., ನಿಕಟ ಪೂರ್ವ ಅಧ್ಯಕ್ಷ ಸುದರ್ಶನ ಮೂಡುಬಿದಿರೆ, ರಾಜ್ಯ ಕಾರ್ಯದರ್ಶಿಗಳಾದ ಕ್ಯಾ| ಬೃಜೇಶ್ ಚೌಟ, ಶರಣ್ ಪಲ್ಲಿಕೇರಿ, ಲೋಕಸಭಾ ಚುನಾವಣ ಸಂಚಾಲಕ ನಿತಿನ್ ಕುಮಾರ್, ಶಾಸಕರಾದ ಉಮಾನಾಥ ಕೋಟ್ಯಾನ್, ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ಹರೀಶ್ ಪೂಂಜ, ಭಾಗೀರಥಿ ಮುರುಳ್ಯ, ಪರಿಷತ್ ಸದಸ್ಯರಾದ ಕೋಟ ಶ್ರೀನಿವಾಸ ಪೂಜಾರಿ, ಪ್ರತಾಪಸಿಂಹ ನಾಯಕ್, ಮಂಗಳೂರು ವಿಭಾಗ ಪ್ರಭಾರಿ ಉದಯಕುಮಾರ್ ಶೆಟ್ಟಿ, ಸಹಪ್ರಭಾರಿ ಗೋಪಾಲಕೃಷ್ಣ ಹೇರಳೆ, ಜಿಲ್ಲಾ ಪ್ರಭಾರಿ ಭಾರತೀಶ್, ಸಹ ಪ್ರಭಾರಿ ರಾಜೇಶ್ ಕಾವೇರಿ, ರಾಜ್ಯ ಮಾಧ್ಯಮ ಸಹ ಸಂಚಾಲಕ ಪ್ರಶಾಂತ್ ಕಡೆಂಜಿ, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಉಪಮೇಯರ್ ಸುನೀತಾ ಉಪಸ್ಥಿತರಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ ಸ್ವಾಗತಿಸಿ, ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ ವಂದಿಸಿದರು. ಇದೇ ವೇಳೆ ಕಾಂಗ್ರೆಸ್ನ ಧನಂಜಯ ಸಸಿಹಿತ್ಲು ಹಾಗೂ ರಮೇಶ್ ಚೇಳಾçರು ಪಕ್ಷಕ್ಕೆ ಸೇರ್ಪಡೆಯಾದರು.
3 ಲಕ್ಷಕ್ಕೂ ಅಧಿಕ ಅಂತರದ ಗೆಲುವಿನ ಗುರಿ: ಕುಂಪಲ
ಲೋಕಸಭಾ ಚುನಾವಣೆಯಲ್ಲಿ ದ.ಕ. ಕ್ಷೇತ್ರದಲ್ಲಿ ಕಳೆದ ಬಾರಿ 2.70 ಲಕ್ಷ ಮತದ ಅಂತರದಲ್ಲಿ ಗೆಲುವು ಸಿಕ್ಕಿತ್ತು. ಈ ಬಾರಿ ಅದನ್ನು 3 ಲಕ್ಷಕ್ಕೇರಿಸುವ ಜವಾಬ್ದಾರಿ ಹೊರುತ್ತೇನೆ ಎಂದು ನೂತನ ಅಧ್ಯಕ್ಷ ಸತೀಶ್ ಕುಂಪಲ ಹೇಳಿದರು.
ನನ್ನ ಬಗ್ಗೆ ಯಾವುದೇ ವಿಚಾರವಿದ್ದರೆ, ಆಕ್ಷೇಪವಿದ್ದರೆ ನನಗೇ ನೇರವಾಗಿ ತಿಳಿಸಿ; ಸರಿಪಡಿಸಿಕೊಳ್ಳುವೆ. ನನಗೆ ಕಾರ್ಯಕರ್ತರ ನೋವು, ಭಾವನೆ ಗೊತ್ತಿದೆ, ಯಾರ ಮನಸ್ಸನ್ನೂ ನೋಯಿಸುವ ಕೆಲಸ ಮಾಡೆನು ಎಂದರು.
ನನ್ನನ್ನೂ ಆಶೀರ್ವದಿಸಿ: ಬಿ.ವೈ. ವಿಜಯೇಂದ್ರ
ಯಡಿಯೂರಪ್ಪ ಅವರಿಗೂ ದ.ಕ. ಜಿಲ್ಲೆಗೂ ಇರುವ ಅವಿನಾಭಾವ ಸಂಬಂಧ ತಿಳಿದಿದೆ. ಇಲ್ಲಿಗೆ ಬಂದರೆ ಏನೋ ಖುಷಿ, ನೆಮ್ಮದಿ ಸಿಗುತ್ತದೆ. ಯಡಿ ಯೂರಪ್ಪ ಅವರಂತೆ ನನ್ನನ್ನೂ ಆಶೀರ್ವದಿಸಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು. ಅಧ್ಯಕ್ಷನಾದ ಬಳಿಕ ಶಿವಮೊಗ್ಗಕ್ಕೇ ಹೋಗಿದ್ದು ಒಂದೇ ಬಾರಿ. ಆದರೆ ಇಲ್ಲಿಗೆ ಎರಡನೇ ಬಾರಿ ಬಂದಿರುವೆ ಎಂದರು.
ಸ್ಕ್ವೇರ್ಫೀಟ್ ಮಿನಿಸ್ಟರ್ ಹುದ್ದೆ !
ಬೆಂಗಳೂರಿನಲ್ಲಿ ಮನೆ ನಿರ್ಮಾಣ ಮಾಡಲು ಚದರಡಿಗೆ 100 ರೂ.ಗಳಂತೆ ವಿವಿಧ ಅನುಮೋದನೆಗಳಿಗೆ ಲಂಚ ಕೊಡಬೇಕಾದ ಪರಿಸ್ಥಿತಿ ಇದೆ. ಅದಕ್ಕಾಗಿ ಸರಕಾರವೇ ಸ್ಕ್ವೇರ್ಫೀಟ್ ಮಿನಿಸ್ಟರ್ ಹುದ್ದೆ ಸೃಷ್ಟಿಸಬಹುದು ಎಂದು ವಿಜಯೇಂದ್ರ ವ್ಯಂಗ್ಯವಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್ ಏಜೆಂಟ್ ಟ್ರಿಫ್’: ಬಿಜೆಪಿ ಆರೋಪ
HDK ಪೆನ್ಡ್ರೈವ್ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ
Lok Sabha Election; 2ನೇ ಹಂತದಲ್ಲಿ ಸಕ್ರಿಯ: ಎಚ್.ಡಿ. ಕುಮಾರಸ್ವಾಮಿ
IPL;ಲಕ್ನೋ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 7 ವಿಕೆಟ್ ಗಳ ಜಯ
Congress ಸಚಿವರಿಗೆ 13 ಲೋಕಸಭಾ ಕ್ಷೇತ್ರಗಳ ಹೆಚ್ಚುವರಿ ಉಸ್ತುವಾರಿ