ಹೆದ್ದಾರಿ ಅಭಿವೃದ್ಧಿ ಪ್ರಾಜೆಕ್ಟ್ ಎಂಜಿನಿಯರ್ ಪರಿಶೀಲನೆ
Team Udayavani, Jul 27, 2018, 1:55 AM IST
ವಿಟ್ಲ: ಸುರತ್ಕಲ್ – ಕಬಕ ರಾಜ್ಯ ಹೆದ್ದಾರಿಯ ಪೊಳಲಿ ದೇವಸ್ಥಾನದಿಂದ ಕಬಕವರೆಗಿನ ರಸ್ತೆಯ ಎರಡೂ ಬದಿಗಳಲ್ಲಿ ಒಂದೂವರೆ ಮೀ. ವಿಸ್ತರಣೆ ಕಾಮಗಾರಿಯ ಪರಿಶೀಲನೆಗೆ ಬೆಂಗಳೂರಿನ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಅಧಿಕಾರಿಗಳಿಬ್ಬರ ತಂಡ ಗುರುವಾರ ಭೇಟಿ ನೀಡಿದೆ. ಹೆದ್ದಾರಿ ಕಾಮಗಾರಿ ಸ್ಥಗಿತ ಎಂಬ ಉದಯವಾಣಿ ಸುದಿನ ವರದಿಯನ್ನು ಗಮನಿಸಿದ ಅಧಿಕಾರಿಗಳು ಲೋಕೋಪಯೋಗಿ ಇಲಾಖಾಧಿಕಾರಿಗಳ ಜತೆಗೆ ರಸ್ತೆಯುದ್ದಕ್ಕೂ ಸಂಚರಿಸಿ, ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಎಕ್ಸಿಕ್ಯೂಟಿವ್ ಎಂಜಿನಿಯರ್ ಪಾಂಡುರಂಗ, ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್ ನಾಗರಾಜ್ ಪಾಟೀಲ್ ಬೆಳಗ್ಗೆ ಪೊಳಲಿಯಿಂದ ಬಿ.ಸಿ. ರೋಡ್, ಮೆಲ್ಕಾರ್, ಪಣೋಲಿಬೈಲ್, ಮಂಚಿ, ಕೊಳ್ನಾಡು, ಕಡಂಬು, ವಿಟ್ಲ, ಕಂಬಳಬೆಟ್ಟು, ಉರಿಮಜಲು, ಕಬಕ ಮಾರ್ಗದಲ್ಲಿ ಸಂಚರಿಸಿ ಕಾಮಗಾರಿಯನ್ನು ವೀಕ್ಷಿಸಿದರು.
ಪ್ರಸ್ತುತ 5.5 ಮೀ. ಅಗಲವಿರುವ ರಸ್ತೆಯನ್ನು 7 ಮೀ.ಗೆ ವಿಸ್ತರಿಸುವ ಈ ಯೋಜನೆಯಲ್ಲಿ ಒಂದೆರಡು ಅಡಿ ಆಳ, ಅದಕ್ಕೆ ಜಲ್ಲಿ ಹಾಕಿ ಆಮೇಲೆ ಡಾಮರು ಹಾಕುವ ಮತ್ತು ನಂದಾವರದಲ್ಲಿ ಕಾಂಕ್ರೀಟ್ ರಸ್ತೆ, ಆವಶ್ಯಕತೆ ಇರುವಲ್ಲಿ ಕಾಂಕ್ರೀಟ್ ಚರಂಡಿ ನಿರ್ಮಾಣ ಕಾಮಗಾರಿಯಾಗಿದೆ. 42 ಕಿ.ಮೀ. ಉದ್ದದ ಈ ರಸ್ತೆ ಅಭಿವೃದ್ಧಿಗೆ 18 ಕೋ. ರೂ. ಅನುದಾನ ಬಿಡುಗಡೆ ಗೊಂಡಿತ್ತು. ವಿಟ್ಲ ಪೇಟೆಯ ಚರಂಡಿ, ಜಂಕ್ಷನ್ ನಲ್ಲಿ ಸರ್ಕಲ್ ನಿರ್ಮಾಣದ ಚಿಂತನೆಯನ್ನೂ ಲೋಕೋಪಯೋಗಿ ಇಲಾಖೆ ಹೊಂದಿತ್ತು. ಬೆಂಗಳೂರಿನ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಅನುದಾನದಲ್ಲಿ 2017ರ ಆಗಸ್ಟ್ನಲ್ಲಿ ಕಾಮಗಾರಿ ಆರಂಭವಾಗಿ ಆಮೆಗತಿಯಲ್ಲಿ ಸಾಗಿತ್ತು. ಮಾರ್ನಬೈಲು, ಮಂಚಿ, ಕೊಳ್ನಾಡು ಮೊದಲಾದೆಡೆ ಕಾಮಗಾರಿ ನಡೆಸಲಾಗಿತ್ತು.
ಆದರೆ ಚುನಾವಣೆಗೆ ಮುನ್ನ ಕಬಕ, ಉರಿ ಮಜಲು, ಕಂಬಳಬೆಟ್ಟು, ಕಲ್ಲಕಟ್ಟ, ಕಡಂಬು ಮೊದಲಾದೆಡೆ ಹೊಂಡಗಳಾದವು. ಅದು ಅಪಾಯಕಾರಿಯಾಗಿದ್ದವು. ಬೆಂಗಳೂರಿನ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ (ಎಸ್.ಎಚ್.ಡಿ.ಪಿ.) ಅಧಿಕಾರಿಗಳು ಇತ್ತ ಧಾವಿಸಲೇ ಇಲ್ಲವೆಂದು ಜು.8ರ ಉದಯವಾಣಿ ಸುದಿನದಲ್ಲಿ ಪ್ರಕಟವಾಗಿತ್ತು. ಇದನ್ನು ಗಮನಿಸಿದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವ ಹಿನ್ನೆಲೆಯಲ್ಲಿ ರಸ್ತೆಯ ಕಾಮಗಾರಿಯನ್ನು ವೀಕ್ಷಿಸಿ, ತೆರಳಿದರು.
ಭರವಸೆ ಸಿಕ್ಕಿದೆ
HSDPEE ಗಮನಕ್ಕೆ ರಸ್ತೆ ಕಾಮಗಾರಿ ಮಾಹಿತಿ ನೀಡಲಾಗಿದೆ. ಗುತ್ತಿಗೆದಾರರನ್ನು ಕರೆದು ಅಧಿಕಾರಿಗಳು ಮಾತನಾಡಿದ್ದಾರೆ. ಅವರಿಗೆ ಮತ್ತೂಂದು ಅವಕಾಶ ನೀಡಲಾಗಿದೆ. ಆಗಲೂ ಕಾಮಗಾರಿ ತೃಪಿಕರ ಇದ್ದಲ್ಲಿ ಅವರು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
– ಉಮೇಶ್ ಭಟ್, ಕಾರ್ಯ ನಿರ್ವಾಹಕ ಎಂಜಿನಿಯರ್, PWD, ಬಂಟ್ವಾಳ
ಮಳೆ ಕಡಿಮೆಯಾಗಲಿ
ಕಾಮಗಾರಿ ಕಳಪೆಯಾಗಿರುವುದು ಹೌದು. ಪ್ರಸ್ತುತ ವಾಹನ ಸಂಚಾರಕ್ಕೆ ಅಡ್ಡಿಯಾಗದಂತೆ ತಾತ್ಕಾಲಿಕ ನಿರ್ವಹಣೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಸಾಮಾನ್ಯವಾಗಿ ಸೆಪ್ಟಂಬರ್ ತಿಂಗಳ ಕೊನೆಯವರೆಗೆ ಮಳೆ ಬೀಳುತ್ತದೆ. ಮತ್ತೆ ಮಳೆ ಕಡಿಮೆಯಾಗುತ್ತದೆ. ಮಳೆ ಕಡಿಮೆಯಾದ ಕೂಡಲೇ ಅಂದರೆ ಅಕ್ಟೋಬರ್ ತಿಂಗಳಲ್ಲಿ ಕಾಮಗಾರಿಯನ್ನು ಪೂರ್ತಿಗೊಳಿಸಲಾಗುವುದು.
– ಪಾಂಡುರಂಗ, ಎಕ್ಸಿಕ್ಯೂಟಿವ್ ಎಂಜಿನಿಯರ್, ಎಸ್.ಎಚ್.ಡಿ.ಪಿ.