“ಪ್ರತಿಯೊಬ್ಬರು ಸಂಗೀತದ ರಸಸ್ವಾದನೆ ನಡೆಸಿ’
Team Udayavani, May 7, 2019, 6:10 AM IST
ಸುರತ್ಕಲ್: ಪ್ರತಿಯೊಬ್ಬರು ತಮಗೆ ಹೊಳೆದಂತೆ ಹಾಡುವ ಮೂಲಕ ಸಂಗೀತದ ರಸಸ್ವಾದನೆಯನ್ನು ನಡೆಸಬೇಕು ಎಂದು ಸಾಹಿತಿ ರಘುರಾಮ ರಾವ್ ಬೈಕಂಪಾಡಿ ನುಡಿದರು.
ಅವರು ಸುರತ್ಕಲ್ ನಾಗರಿಕ ಸಲಹಾ ಸಮಿತಿ ಮತ್ತು ಮಣಿಕೃಷ್ಣ ಸ್ವಾಮಿ ಅಕಾಡೆಮಿ ಸುರತ್ಕಲ್ ಮೇಲ್ಸೇತುವೆ ಕೆಳ ಭಾಗದಲ್ಲಿ ಪ್ರತಿ ತಿಂಗಳ ಮೊದಲ ರವಿವಾರ ಆಯೋಜಿಸುತ್ತಿರುವ ಉದಯರಾಗ ಸರಣಿಯ 15ನೇ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.ಮಾನಸಿಕ ಒತ್ತಡಗಳ ನಿವಾರಣೆಗೆ ಸಂಗೀತ ಅತ್ಯುಪಯುಕ್ತವಾಗಿದ್ದು, ಉದಯ ಕಾಲದಲ್ಲಿ ಸಂಗೀತದ ಆಸ್ವಾದನೆಯೇ ವಿಶಿಷ್ಟ ಅನುಭವ ಎಂದರು.
ತ್ಯಾಗರಾಜರ ಬಗ್ಗೆ ಶ್ವೇತಾದೇವಿ ಎನ್., ಪರಿಚಯಾತ್ಮಕ ಭಾಷಣ ಮಾಡಿದರು. ಮಂಗಳೂರು ಚಿನ್ಮಯಿ ವಿ. ಭಟ್ ಅವರಿಂದ ಹಾಡುಗಾರಿಕೆ ನಡೆಯಿತು. ಸುಮನಾ ಪಿ.ಎಸ್. ಕುಂಟಾರು, ಶೈಲೇಶ್ ರಾವ್ ಕಟೀಲು ಹಿಮ್ಮೇಳದಲ್ಲಿ ಸಹಕರಿ ಸಿದರು. ಮಣಿಕೃಷ್ಣ ಸ್ವಾಮಿ ಅಕಾಡೆಮಿ ಕಾರ್ಯದರ್ಶಿ, ಪಿ. ನಿತ್ಯಾನಂದ ರಾವ್ ಸ್ವಾಗತಿಸಿದರು. ಉದಯರಾಗ ತಂಡದ ಡಾ| ಕೆ. ರಾಜಮೋಹನ್ ರಾವ್, ಪ್ರೊ| ಕೃಷ್ಣ ಮೂರ್ತಿ ಉಪಸ್ಥಿತರಿದ್ದರು.