ಗುಡ್ಡೆಕೊಪ್ಲ: ಕೈರಂಪಣಿ ಬಲೆಗೆ 1,500 ಕೆಜಿ ಮೀನು!
Team Udayavani, Oct 13, 2022, 6:25 AM IST
ಸುರತ್ಕಲ್: ಸುರತ್ಕಲ್ನ ಗುಡ್ಡೆಕೊಪ್ಲ ಕಡಲ ಕಿನಾರೆಯಲ್ಲಿ ತಣ್ಣೀರುಬಾವಿಯ ಮೀನುಗಾರರೊಬ್ಬರು ಹಾಕಿದ ಕೈರಂಪಣಿ ಬಲೆಗೆ ಒಂದೂವರೆ ಸಾವಿರ ಕೆಜಿಗೂ ಅಧಿಕ ಪ್ರಮಾಣದಲ್ಲಿ ಮೀನು ದೊರಕಿದ ಪ್ರಸಂಗ ಬುಧವಾರ ನಡೆಯಿತು.
ಜೀವನ್ ಪಿರೇರಾ ಹಾಗೂ ಸಂಗಡಿಗರು ಕಳೆದ 10-15 ದಿನಗಳಿಂದ ಬಲೆ ಹಾಕುತ್ತಿದ್ದು ಬುಧವಾರ ಮಾತ್ರ ಭರ್ಜರಿ ಮೀನು ಬಲೆಗೆ ಬಿದ್ದಿದೆ. ಬಂಗುಡೆ, ಕೊಡ್ಡಾಯಿ, ಕಲ್ಲೂರು ಮೀನುಗಳ ಸಮೂಹವೇ ಮೀನುಗಾರರ ಪಾಲಾಗಿದೆ. ಇದರಲ್ಲಿ ಸುಮಾರು 400 ಕೆಜಿ ಉಪಯೋಗಕ್ಕೆ ದೊರಕಿದರೆ ಉಳಿದವುಗಳು ಗೊಬ್ಬರಕ್ಕೆ ಬಳಕೆಯಾಗುತ್ತವೆ. ಗೊಬ್ಬರ ಮೀನಿಗೆ ಕೆಜಿಗೆ 17 ರೂ. ದೊರಕುತ್ತದೆ.
ಬೆಳಗ್ಗೆ 7 ಗಂಟೆಗೆ ಬೃಹತ್ ಕೈರಂಪಣಿ ಬಿಡಿಸಿಟ್ಟರೆ ಒಂದು ಗಂಟೆಯ ಬಳಿಕ ಮೇಲೆತ್ತಲಾಗುತ್ತದೆ. ಸುಮಾರು 30 ಮಂದಿ ಬಲೆ ಎಳೆಯಲು ಬೇಕು. ಕಳೆದ ಹಲವು ದಿನಗಳಿಂದ ಬಲೆ ಹಾಕುತ್ತಿದ್ದರೂ ಇಂದು ಅತೀ ಹೆಚ್ಚು ಮೀನು ದೊರಕಿತು ಎಂದು ಜೀವನ್ ಪಿರೇರ ಹೇಳಿದರು.