Rain ಕರಾವಳಿಯಾದ್ಯಂತ ಉತ್ತಮ ಮಳೆ: ಸಿಡಿಲಿನ ಅಬ್ಬರಕ್ಕೆ ಬೆಚ್ಚಿದ ಜನತೆ
Team Udayavani, Nov 6, 2023, 11:34 PM IST
ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ನಗರ ಮತ್ತು ಗ್ರಾಮೀಣ ಭಾಗದಲ್ಲಿ ರವಿವಾರ ರಾತ್ರಿಯಿಂದ ಸೋಮವಾರ ಮುಂಜಾನೆ ವರೆಗೆ ಉತ್ತಮ ಮಳೆಯಾಗಿದೆ. ಮಳೆಗಿಂತಲೂ ಸಿಡಿಲಿನ ಅಬ್ಬರ ಜೋರಾಗಿದ್ದು, ಮಧ್ಯರಾತ್ರಿ ಜನರು ಬೆಚ್ಚಿ ಬೀಳುವಂತಾಯಿತು.
ಕರಾವಳಿಯಾದ್ಯಂತ ಸಂಜೆಯ ವೇಳೆಗೆ ಲಘುವಾಗಿ ಆರಂಭಗೊಂಡ ಮಳೆ ರಾತ್ರಿಯಾಗುತ್ತಿದ್ದಂತೆ ಬಿರು ಸಾಗಿ ಸುರಿಯಲಾರಂಭಿಸಿತು. ರಾತ್ರಿ ಯಂತೂ ಈ ಬಾರಿಯ ಮಳೆಗಾಲ ದಲ್ಲಿಯೂ ಕಾಣಿಸದಂತಹ ಸಿಡಿಲಿನ ಆರ್ಭಟದೊಂದಿಗೆ ಬಿರುಸಾಗಿ ಮಳೆ ಸುರಿಯಿತು.
ಸೋಮವಾರ ಹಗಲು ಬಿಸಿಲ ಝಳವಿತ್ತು. ಸಂಜೆ-ರಾತ್ರಿ ಬೆಳ್ತಂಗಡಿ, ಸುಳ್ಯ ತಾ|ನ ಗ್ರಾಮೀಣ ಭಾಗದ ಕೆಲವೆಡೆ ಮಳೆಯಾಗಿದೆ.
ಉಡುಪಿ: ಉತ್ತಮ ಮಳೆ
ಉಡುಪಿ: ಜಿಲ್ಲೆಯಾದ್ಯಂತ ರವಿವಾರ ತಡರಾತ್ರಿ ಧಾರಕಾರ ಮಳೆ ಸುರಿದಿದ್ದು, ಗುಡುಗು, ಸಿಡಿಲಿನ ಆರ್ಭಟಕ್ಕೆ ಕೆಲವು ಮನೆಗಳಲ್ಲಿ ಎಲೆಕ್ಟ್ರಾನಿಕ್ ವಸ್ತುಗಳಿಗೆ ಹಾನಿ ಸಂಭವಿಸಿದೆ. ಮಣಿಪಾಲ ಸುತ್ತಮುತ್ತ ತಡರಾತ್ರಿ ಸಿಡಿಲು ಶಬ್ದ ಸಾರ್ವಜನಿಕರಲ್ಲಿ ಆತಂಕ ಮೂಡಿಸಿತ್ತು. ಹಲವೆಡೆ ಮುಂಜಾಗ್ರತಾ ಕ್ರಮವಾಗಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು. ಸೋಮವಾರ ಮೋಡ ಕವಿದ ವಾತಾವರಣದ ಇತ್ತು.ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಸುರಿದ ಗುಡುಗು ಸಿಡಿಲು ಸಹಿತ ಮಳೆಗೆ ಗಂಭೀರ ಹಾನಿ ಸಂಭವಿಸಿಲ್ಲ ಎಂದು ಜಿಲ್ಲಾಡಳಿತ ಮೂಲಗಳು ತಿಳಿಸಿವೆ.
ಸಿಡಿಲು ಬಡಿದು ಇಬ್ಬರಿಗೆ ಗಾಯ, ಹಾನಿ
ಕೈಕಂಬ: ಕುಪ್ಪೆಪದವಿನ ಕಲ್ಲಾಡಿ ಎಂಬಲ್ಲಿ ರವಿವಾರ ಸಂಜೆ ವಿಮಲಾ ಅವರ ಮನೆಯ ವಿದ್ಯುತ್ ಮೀಟರ್ ಬೋರ್ಡ್ಗೆ ಸಿಡಿಲು ಬಡಿದು ಇಬ್ಬರಿಗೆ ಗಾಯವಾಗಿದ್ದು ಕೇಬಲ್, ಗೃಹೋಪಯೋಗಿ ವಸ್ತುಗಳಿಗೆ ಹಾನಿಯಾಗಿದೆ. ಮಾತ್ರವಲ್ಲದೇ ಮನೆಯ ಗೋಡೆಗಳು ಬಿರುಕು ಬಿಟ್ಟಿವೆ.
ಘಟನೆಯ ವೇಳೆ ವಿಮಲಾ ಅವರ ತಾಯಿ ಸುಂದರಿ ಅವರ ಹಣೆಗೆ ಗಾಯವಾಗಿ¨ದ್ದರೆ ವಿಮಲಾ ಅವರಿಗೆ ಶ್ರವಣ ಸಮಸ್ಯೆವುಂಟಾಗಿದೆ. ಘಟನೆಯಿಂದ 60 ಸಾವಿರ ರೂ. ನಷ್ಟವಾಗಿದೆ.ಗ್ರಾಮಕರಣಿಕ ಮುತ್ತಪ್ಪ ಮತ್ತು ಸಿಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇನ್ನೊಂದೆಡೆ ಗುಡುಗು ಸಹಿತ ಮಳೆಗೆ ಕುಪ್ಪೆಪದವು-ಇರುವೈಲು ಮೂಡುಬಿದಿರೆ ರಸ್ತೆಯ ನೀರಳಿಕೆಯಲ್ಲಿ ಮರ ಉರುಳಿಬಿದ್ದು ವಿದ್ಯುತ್ ಕಂಬ ತುಂಡಾಗಿ ರಸ್ತೆಗೆ ಬಿದ್ದ ಪರಿಣಾಮ ಸ್ವಲ್ಪ ಹೊತ್ತು ವಾಹನ ಸಂಚಾರ ಸ್ಥಗಿತಗೊಂಡಿದೆ.
ಎರಡು ದಿನ ಎಲ್ಲೋ ಅಲರ್ಟ್
ಮಂಗಳೂರು: ಕರಾವಳಿಗೆ ಇನ್ನೆರಡು ದಿನ ಎಲ್ಲೋ ಅಲರ್ಟ್ ಇದೆ. ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಸೋಮವಾರ ಮಂಗಳೂರಿನಲ್ಲಿ ಗರಿಷ್ಠ ತಾಪಮಾನ 30.1 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 23.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಕೃಷಿ ಕಾರ್ಯಕ್ಕೆ ತೊಡಕು
ಕರಾವಳಿಯಾದ್ಯಂತ ಪ್ರಸ್ತುತ ಭತ್ತದ ಕಟಾವು ನಡೆಯುತ್ತಿದ್ದು, ಈ ವೇಳೆ ಮಳೆ ಸುರಿಯುತ್ತಿರುವುದರಿಂದ ಭತ್ತದ ಪೈರು ಬಿದ್ದು ನೆಲ ಕಚ್ಚುತ್ತದೆ. ಇದು ಯಂತ್ರದ ಮೂಲಕ ಕಟಾವಿಗೆ ಸಮಸ್ಯೆಯಾಗುತ್ತಿದೆ.