ಅತಿಯಾದ ದಂಡ ಪಾವತಿಗೆ ಸವಾರರ, ಚಾಲಕರ ಅಸಮಾಧಾನ
ಗುಂಡಿ ಬಿದ್ದ ರಸ್ತೆಗಳು; ಸಂಚಾರ ಕಷ್ಟಕರ
Team Udayavani, Sep 12, 2019, 5:25 AM IST
ದಂಡ ವಿಧಿಸುತ್ತಿರುವ ಟ್ರಾಫಿಕ್ ಪೊಲೀಸರು
ಮಹಾನಗರ: ನೂತನ ಮೋಟಾರ್ ವಾಹನ ಕಾಯ್ದೆ ಬಗ್ಗೆ ರಾಜ್ಯದ ವಿವಿಧೆಡೆಯಂತೆ ಮಂಗಳೂರಿನಲ್ಲಿಯೂ ಜನಾಕ್ರೋಶ ವ್ಯಕ್ತವಾಗತೊಡಗಿದೆ. “ಮೊದಲು ಸ್ಥಳೀಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚಾ ರಕ್ಕೆ ತೊಂದರೆ ಯಾಗಿರುವ ಗುಂಡಿ ಗಳನ್ನು ಮುಚ್ಚಲಿ; ಆ ಬಳಿಕ ದಂಡ ಪ್ರಯೋಗ ಮಾಡಲಿ’ ಎನ್ನುವ ಮಾತು ಸಾರ್ವ ಜನಿಕರಿಂದ ಕೇಳಿಬರುತ್ತಿದೆ.
ಸಂಚಾರ ನಿಯಮ ಉಲ್ಲಂಘನೆಗೆ ಇದ್ದ ದಂಡವನ್ನು ಭಾರೀ ಪ್ರಮಾಣದಲ್ಲಿ ಏರಿಕೆ ಮಾಡಿರುವುದಕ್ಕೆ ಸಾರ್ವಜನಿಕರು ಈಗಾಗಲೇ ಅಸಮಾಧಾನಗೊಂಡಿದ್ದಾರೆ. ಮಂಗಳೂರಿನಲ್ಲಿಯೂ ಹೊಸ ಕಾಯ್ದೆ ಜಾರಿಗೆ ಬಂದ ಬಳಿಕ ಅಲ್ಲಲ್ಲಿ ಸಂಚಾರ ಪೊಲೀಸರು ವಾಹನ ಸವಾರರನ್ನು ತಡೆದು ನಿಯಮ ಉಲ್ಲಂಘಿಸುವವರಿಗೆ ದಂಡದ ಹಾಕುತ್ತಿದ್ದಾರೆ. ದೊಡ್ಡ ಪ್ರಮಾಣದಲ್ಲಿ ದಂಡ ವಿಧಿಸುತ್ತಿರುವುದು ಜನಸಾಮಾನ್ಯರನ್ನು ಹೈರಾಣಾಗಿಸುತ್ತಿದ್ದು, ಟ್ರಾಫಿಕ್ ಪೊಲೀಸರನ್ನು ಕಂಡರೆ ಆತಂಕಕ್ಕೆ ಒಳಗಾಗುವಂತಾಗಿದೆ. ಇನ್ನೊಂದೆಡೆ, ರಸ್ತೆಗಳು ಸಂಪೂರ್ಣ ಹಾಳಾಗಿರುವುದರಿಂದ ಅದನ್ನು ವಾಹನ ಸವಾರರ ಸುರಕ್ಷತೆ ದೃಷ್ಟಿಯಿಂದ ಸರಿಪಡಿಸುವ ಮೊದಲೇ ಹೊಸ ಸಂಚಾರಿ ನಿಯಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿರುವುದನ್ನು ಜನರು ವಿರೋಧಿಸುತ್ತಿದ್ದಾರೆ.
ವಿವಿಧೆಡೆ ಅಪಾಯಕಾರಿ ಗುಂಡಿ
ನಗರ ಸಹಿತ ಹೊರ ಭಾಗದ ಹೆಚ್ಚಿನ ಕಡೆಗಳಲ್ಲಿ ರಸ್ತೆಗಳಲ್ಲಿ ಮಳೆಯಿಂದಾಗಿ ಡಾಮರು ಕಿತ್ತು ಹೋಗಿ ಅಪಾಯಕಾರಿ ಗುಂಡಿಗಳು ಸೃಷ್ಟಿಯಾಗಿವೆ. ಅದರಲ್ಲಿಯೂ ಮಂಗಳೂರಿನಿಂದ ಸುರತ್ಕಲ್, ತೊಕ್ಕೊಟ್ಟು, ತಲಪಾಡಿ ಸಹಿತ ರಾಷ್ಟ್ರೀಯ ಹೆದ್ದಾ ರಿಗಳ ಸ್ಥಿತಿಯಂತೂ ಹೇಳತೀರದ್ದು. ಉದಾ ಹರಣೆಗೆ ಕೆಪಿಟಿಯಿಂದ ನಂತೂರು ಕಡೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಪದವು ಕ್ರಾಸ್ ಬಳಿ ರಸ್ತೆ ಮಧ್ಯೆಯೇ ಬೃಹತ್ ಹೊಂಡ ನಿರ್ಮಾಣವಾಗಿದ್ದು, ವಾಹನ ಸವಾರರ ಪಾಲಿಗೆ ಮೃತ್ಯುಕೂಪವಾಗಿದೆ. ಅದರಲ್ಲಿಯೂ ರಾತ್ರಿಹೊತ್ತು ಮಳೆ ನೀರು ತುಂಬಿಕೊಂಡಾಗ ಇಂಥ ಹೊಂಡಗಳನ್ನು ಗುರುತಿಸುವುದಕ್ಕೂ ಸಾಧ್ಯವಾಗುವುದಿಲ್ಲ. ಇಂಥಹ ಅಪಾಯಕಾರಿ ಹೊಂಡಗಳಿರುವ ರಸ್ತೆಗಳಲ್ಲಿ ಸಂಚರಿಸುತ್ತಿರಬೇಕಾದರೆ, ಸಾರಿಗೆ ನಿಯಮ ಉಲ್ಲಂಘನೆ ಹೆಸರಿನಲ್ಲಿ ಭಾರೀ ಪ್ರಮಾಣದ ದಂಡವನ್ನು ಏಕೆ ಸರಕಾರಕ್ಕೆ ನೀಡಬೇಕು ಎನ್ನುವುದು ಸಾರ್ವಜನಿಕರ ಪ್ರಶ್ನೆ.
ಜಾಲತಾಣಗಳಲ್ಲಿ ವಿರೋಧ
“ರಸ್ತೆಗಳ ಗುಂಡಿ ಮುಚ್ಚಿ… ಬಳಿಕ ದಂಡ ವಿಧಿಸಿ’ ಎಂಬ ಕೂಗು ಸಾಮಾಜಿಕ ಜಾಲ ತಾಣಗಳಲ್ಲಿಯೂ ಹರಿ ದಾಡುತ್ತಿವೆ. ವಾಹನಗಳು ಗುಂಡಿ ಬಿದ್ದ ರಸ್ತೆಯಲ್ಲಿ ಚಲಿಸುತ್ತಿರುವ ಫೋಟೋ ಗಳನ್ನು ಟ್ವಿಟ್ಟರ್, ಫೇಸ್ಬುಕ್ಗಳಲ್ಲಿ ಹಾಕಿ ನೂತನ ಮೋಟಾರ್ ವಾಹನ ಕಾಯ್ದೆಗೆ ಸಾರ್ವ ಜನಿಕರು ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ. ಗುಂಡಿಗಳಿಂದ ಬಸ್ನವರಿಗೂ ತೊಂದರೆ ನಗರದಲ್ಲಿ ಸುಮಾರು ಮುನ್ನೂರಕ್ಕೂ ಹೆಚ್ಚು ಸಿಟಿ ಬಸ್ಗಳು ದಿನಂಪ್ರತಿ ಓಡಾಡುತ್ತಿವೆ.
ಹೆಚ್ಚಿನ ಸಿಟಿ ಬಸ್ಗಳ ಚಾಲಕರು ರಸ್ತೆ ನಿಯಮಗಳನ್ನು ಗಾಳಿಗೆ ತೂರುತ್ತಿದ್ದಾರೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿದೆ. ಬಸ್ ಮಾಲಕರು ಹೇಳುವ ಪ್ರಕಾರ “ರಸ್ತೆಗಳು ಗುಂಡಿಯಿಂದ ಕೂಡಿದ ಕಾರಣ, ಚಾಲಕರಿಗೆ ನಿಗದಿತ ಸಮಯಕ್ಕೆ ಆಯಾ ಪ್ರದೇಶಕ್ಕೆ ಬಸ್ಗಳನ್ನು ತಲುಪಿಸಲಾಗುತ್ತಿಲ್ಲ. ಈ ವೇಳೆ ಚಾಲಕರು ಓವರ್ ಸ್ಪೀಡ್ ಚಾಲನೆ ಮಾಡುತ್ತಾರೆ. ಸಂಬಂಧಪಟ್ಟ ಇಲಾಖೆ ಕೂಡಲೇ ರಸ್ತೆ ಗುಂಡಿ ಮುಚ್ಚಬೇಕು’ ಎನ್ನುತ್ತಾರೆ.
3.92 ಲಕ್ಷ ರೂ. ದಂಡ
ಹೊಸ ಮೋಟಾರು ವಾಹನ ಕಾಯಿದೆ ಅನುಷ್ಠಾನಕ್ಕೆ ಬಂದ ಬಳಿಕ ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಕಾಯ್ದೆ ಉಲ್ಲಂಘನೆಯ ಬಗ್ಗೆ ಪೊಲೀಸರು ಸೆ. 8ರಿಂದ 10ರ ವರೆಗೆ ಒಟ್ಟು 1,635 ಪ್ರಕರಣ ದಾಖಲಾಗಿದ್ದು, ಒಟ್ಟು 3,92,800 ರೂ. ದಂಡ ವಿಧಿಸಲಾಗಿದೆ. ನಗರದ ಪೂರ್ವ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅತೀ ಹೆಚ್ಚು ದಂಡ ವಸೂಲಾಗಿದ್ದು, 1,24,500ರೂ. ದಂಡ, ಪಶ್ಚಿಮ ಸಂಚಾರಿ ಠಾಣೆ ವ್ಯಾಪ್ತಿಯಲ್ಲಿ 86,900ರೂ., ಉತ್ತರ ಠಾಣೆಯಲ್ಲಿ 1,09,500 ರೂ.ದಂಡ, ದಕ್ಷಿಣ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ 71,900 ದಂಡ ವಿಧಿಸಲಾಗಿದೆ.
ಗೋವಾ ಸರಕಾರದಿಂದ ನೂತನ ನಿರ್ಧಾರ
ಗೋವಾದಲ್ಲಿ ರಸ್ತೆಗಳು ಸಂಪೂರ್ಣ ರಿಪೇರಿಯಾದ ಬಳಿಕವಷ್ಟೇ ನೂತನ ನಿಯಮ ಜಾರಿಗೆ ಬರಲಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಇತ್ತೀಚೆಗೆ ಹೇಳಿಕೆ ನೀಡಿದ್ದರು. ಹಾಳದ ಗುಂಡಿ, ರಸ್ತೆಗಳಿಂದ ವಾಹನ ಸವಾರರು ಕಷ್ಟಪಡುತ್ತಿದ್ದು, ಸದ್ಯದಲ್ಲೇ ರಿಪೇರಿಗೊಳಿಸಲಾಗುವುದು. ಬಳಿಕ ನಿಯಮ ಜಾರಿಗೆ ತರಲಾಗುವುದು ಎಂದ್ದರು. ಈ ನಿಯಮಕ್ಕೆ ಜನ ಬೆಂಬಲ ದೊರಕಿದ್ದು, ರಾಜ್ಯದಲ್ಲಿಯೂ ಇದೇ ರೀತಿ ಮಾಡಬೇಕು ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಗುಂಡಿ ಬಿದ್ದ ರಸ್ತೆಗೆ ತೇಪೆ
ನಗರದಲ್ಲಿ ಹೆಚ್ಚಿನ ರಸ್ತೆಗಳಿಗೆ ಕಾಂಕ್ರೀಟ್ ಹಾಕಲಾಗಿದೆ. ಕೆಲವೊಂದು ಒಳ ರಸ್ತೆಗಳಲ್ಲಿ ಗುಂಡಿ ಬಿದ್ದಿದೆ. ಮಳೆಗಾಲವಾದುದರಿಂದ ಡಾಮರು ಹಾಕಲು ಸಾಧ್ಯವಾಗುತ್ತಿಲ್ಲ. ಈಗಾಗಲೇ ಗುಂಡಿ ಬಿದ್ದ ರಸ್ತೆಗಳನ್ನು ಗುರುತು ಮಾಡಿಕೊಂಡು ತಾತ್ಕಾಲಿಕವಾಗಿ ಕಾಮಗಾರಿ ನಡೆಸುತ್ತಿದ್ದೇವೆ.
– ಮೊಹಮ್ಮದ್ ನಜೀರ್, ಪಾಲಿಕೆ ಆಯುಕ್ತ
ದಂಡ ವಿಧಿಸುವ ಮುನ್ನ ಗುಂಡಿ ಮುಕ್ತಗೊಳಿಸಿ
ಕಾನೂನು ಪಾಲನೆ ಮಾಡದಿದ್ದರೆ ದಂಡ ವಿಧಿಸಬೇಕು. ನಮ್ಮ ವಿರೋಧವಿಲ್ಲ. ಅದಕ್ಕೂ ಮುನ್ನ ರಸ್ತೆಗಳನ್ನು ಗುಂಡಿ ಮುಕ್ತಗೊಳಿಸಿ, ಗುಂಡಿ ಬಿದ್ದ ರಸ್ತೆಗಳಿಗೂ ಟೋಲ್ ನೀಡಬೇಕಾದ ಅನಿವಾರ್ಯತೆ ಇಲ್ಲಿದೆ. ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯಲ್ಲಿ ಸಿಟಿ ಬಸ್ಗಳು ಸಂಚರಿಸುತ್ತಿದ್ದು, ರಸ್ತೆಯಲ್ಲಿನ ಹೊಂಡದಿಂದಾಗಿ ಬಸ್ ಕೆಟ್ಟು ಹೋಗುತ್ತಿದ್ದು, ಮಾಲಕರು ನಷ್ಟ ಅನುಭವಿಸುತ್ತಾರೆ.
– ದಿಲ್ರಾಜ್ ಆಳ್ವ, ಸಿಟಿ ಬಸ್ ಮಾಲಕರ ಸಂಘದ ಅಧ್ಯಕ್ಷ