ಚೆನ್ನೈತ್ತೋಡಿ, ಕಾವಳಮೂಡೂರು: ಅಪಾರ ಹಾನಿ
Team Udayavani, Jun 15, 2018, 2:20 AM IST
ಪುಂಜಾಲಕಟ್ಟೆ: ಬುಧವಾರ ರಾತ್ರಿ ಸುರಿದ ಭಾರೀ ಮಳೆಗೆ ಬಂಟ್ವಾಳ ತಾಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿ ತೋಡುಗಳಲ್ಲಿ ನೀರಿನ ಪ್ರವಾಹ ಹೆಚ್ಚಾಗಿ ಗದ್ದೆಯ ಬದುಗಳು ಕೊಚ್ಚಿ ಹೋಗಿ ಬಯಲುಗದ್ದೆ ಜಲಾವೃತವಾಗಿದೆ. ಚೆನ್ನೈತ್ತೋಡಿ ಗ್ರಾ.ಪಂ. ವ್ಯಾಪ್ತಿಯ ಕೊಡಂಬೆಟ್ಟು ಗ್ರಾಮದ ತಿಮ್ಮೊಟ್ಟು ನಾಣ್ಯಪ್ಪ ಪೂಜಾರಿ ಅವರ ಎರಡು ಎಕ್ರೆ ಗದ್ದೆ ಸಂಪೂರ್ಣ ಜಲಾವೃತವಾಗಿದ್ದು, ಬೆಳೆ ನಾಶವಾಗಿದೆ. ಪತ್ತುರ್ಲೆಯಿಂದ ಬೆಟ್ಟುಗದ್ದೆಯವರೆಗೆ ಗದ್ದೆ ಬದು ಕೊಚ್ಚಿ ಹೋಗಿದೆ. ಇಲ್ಲಿನ ಗಂಗಾಧರ ಪೂಜಾರಿ, ಸುಂದರ ಪೂಜಾರಿ, ದುಗುರಮ್ಮ, ಲೀಲಾ ಮೂಲ್ಯೊಟ್ಟು, ರುಕ್ಮಿಣಿ, ಗೋಪಿ, ನಾಲೊಡಿ ಡೊಂಬಯ, ಹೊಸಮನೆ ನಾರಾಯಣ ಪೂಜಾರಿ, ದೋತಿಮಾರ್ ಕಲ್ಯಾಣಿ, ರಾಜು ಪೂಜಾರಿ ಅವರ ಗದ್ದೆಗಳಲ್ಲಿ ಕೆಸರು ಸಹಿತ ನೀರು ತುಂಬಿ ಬೆಳೆ ನಾಶವಾಗಿ ಲಕ್ಷಾಂತರ ರೂ. ನಷ್ಟವಾಗಿದೆ.
ವಿದ್ಯುತ್ ಸಂಪರ್ಕ ಕಡಿತ
ಗಾಳಿ, ಮಳೆಗೆ ಮರದ ಗೆಲ್ಲುಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದು, ವಿದ್ಯುತ್ ಸಂಪರ್ಕ ಕಡಿದಿದೆ. ಜಿ.ಪಂ. ಎಂ. ತುಂಗಪ್ಪ ಬಂಗೇರ ಕಂದಾಯ ಇಲಾಖಾಧಿಕಾರಿಗಳಿಗೆ ಮಾಹಿತಿ ನೀಡಿ ನಷ್ಟದ ವಿವರ ನೀಡಲು ಸೂಚಿಸಿದ್ದಾರೆ. ಪಂ. ಅಭಿವೃದ್ಧಿ ಅಧಿಕಾರಿ ಧರ್ಮರಾಜ್, ಮಾಜಿ ಪಂ. ಸದಸ್ಯ ಪ್ರಕಾಶ್ ಶೆಟ್ಟಿ ಕಕ್ಕಿಬೆಟ್ಟು, ಗ್ರಾ.ಪಂ. ಸದಸ್ಯರಾದ ಮೋಹನದಾಸ ಗಟ್ಟಿ, ಲಕ್ಷ್ಮೀ ನಾರಾಯಣ ಪೂಜಾರಿ, ಸ್ಥಳೀಯ ಪ್ರಮುಖರಾದ ಬೂಬ ಪೂಜಾರಿ ಕುದ್ಕಂದೋಡಿ, ನಾರಾಯಣ ಪೂಜಾರಿ, ಲೋಕನಾಥ ಪೂಜಾರಿ, ಸುಂದರ ಪೂಜಾರಿ ಮತ್ತಿತರರು ಆಗಮಿಸಿ ತಾತ್ಕಾಲಿಕ ಸಹಾಯ ನೀಡಿದ್ದಾರೆ.
ಕಾವಳಮೂಡೂರಿನ ಕೆದ್ದಳಿಕೆ ಸಮೀಪದ ಕೋಡಿಪೀರ್ಯದಲ್ಲಿ ಯಶೋಧರ ಅವರ ತೋಟದ ಬದಿಯ ಗುಡ್ಡದ ಮಣ್ಣು ಜರಿದು ತೋಡಿಗೆ ಬಿದ್ದು, ತಡೆಯುಂಟಾಗಿ ನೀರು ಗದ್ದೆಗೆ ನುಗ್ಗಿ ಹಾನಿಯುಂಟಾಗಿದೆ. ಇಲ್ಲಿನ ಕಾರಿಂಜಬೈಲು, ಪೆರುವಾರು ಕಡೆಗಳಲ್ಲಿ ಗದ್ದೆಗಳು ಜಲಾವೃತವಾಗಿ ಬೆಳೆ ಹಾನಿ ಉಂಟಾಗಿದೆ. ಅಡಿಕೆ ಮರ ಗಳು ಮುರಿದು ಬಿದ್ದಿವೆ. ಜಿ.ಪಂ. ಸದಸ್ಯ ಬಿ. ಪದ್ಮಶೇಖರ ಜೈನ್ ಕಾವಳ ಮೂಡೂರು ಪಿಡಿಒ ಅಧಿಕಾರಿ ವೇದವ ಸ್ಥಳಗಳಿಗೆ ತೆರಳಿದ್ದಾರೆ. ಕಂದಾಯ ಇಲಾಖಾಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಬೆಳ್ತಂಗಡಿ: ಚಾರ್ಮಾಡಿ ಘಾಟಿಯ ಗುಡ್ಡ ಕುಸಿದು ರಸ್ತೆ ಸಂಚಾರ ಸ್ಥಗಿತಗೊಂಡಿದ್ದು, ಘಾಟಿಯ ನಿರ್ವಹಣ ಕಾರ್ಯವನ್ನು ಮಾಜಿ ಶಾಸಕ ಕೆ. ವಸಂತ ಬಂಗೇರ ವೀಕ್ಷಿಸಿದರು. ಹಸನಬ್ಬ ಚಾರ್ಮಾಡಿ, ಜಿ.ಪಂ. ಸದಸ್ಯರಾದ ನಮಿತಾ, ಧರಣೇಂದ್ರ ಕುಮಾರ್, ಬ್ಲಾಕ್ ಕಾಂಗ್ರೆಸ್ ಬೆಳ್ತಂಗಡಿ ಕಾರ್ಮಿಕ ಘಟಕ (ಗ್ರಾಮೀಣ) ಅಧ್ಯಕ್ಷ ಮೋಹನ್ ಗೌಡ ಕಲ್ಮಂಜ ಮೊದಲಾದವರಿದ್ದರು. ಈ ಸಂದರ್ಭ ಮಾಜಿ ಶಾಸಕ ಕೆ. ವಸಂತ ಬಂಗೇರ ಅವರು ಹೆದ್ದಾರಿ ಬದಿಯ ಚರಂಡಿಗಳ ನಿರ್ವಹಣೆಯಾಗದ ಕುರಿತು ರಾ.ಹೆ. ಪ್ರಾಧಿಕಾರದ ಅಧಿಕಾರಿಯನ್ನು ದೂರವಾಣಿ ಮೂಲಕ ಸಂಪರ್ಕಿಸಿ ತೀವ್ರ ತರಾಟೆಗೆ ತೆಗೆದುಕೊಂಡು ಇನ್ನು 10 ದಿನಗಳೊಳಗೆ ಸರಿಪಡಿಸುವಂತೆ ಸೂಚಿಸಿದರು. ಮಾಜಿ ಶಾಸಕರು ಅಧಿಕಾರಿ ಜತೆ ಮಾತನಾಡುವ ವೀಡಿಯೋ ಈಗ ವೈರಲ್ ಆಗಿದೆ.
ಬೆಳ್ತಂಗಡಿ: ಗುರುವಾಯನಕೆರೆ ಬಳಿ ಮನೆ ಆವರಣಕ್ಕೆ ಚರಂಡಿ ನೀರು ನುಗ್ಗಿದೆ.
ಬೆಳ್ತಂಗಡಿ: ಲಾೖಲ- ಅಗರಿ ಸಡಕ್ ರಸ್ತೆಯ ಕಾವಟೆ ಬಳಿ ರಸ್ತೆಗೆ ಅಡ್ಡಲಾಗಿ ಗುಡ್ಡ ಕುಸಿದಿದೆ.
ಬೆಳ್ತಂಗಡಿ: ಸರಕಾರಿ ಆಸ್ಪತ್ರೆಯ ಮುಂಭಾಗ ಆವರಣ ಗೋಡೆ ಕುಸಿದಿದೆ.
ಕೊಡಂಬೆಟ್ಟುವಿನಲ್ಲಿ ತೋಡಿನ ಬದು ಒಡೆದು ಗದ್ದೆಗಳಿಗೆ ನೀರು ನುಗ್ಗಿದೆ.