ಹೈಡ್ರೋಜನ್ ಉತ್ಪಾದನೆ; ಶೀಘ್ರ ಭಾರತ ವಿಶ್ವದಲ್ಲಿ ಪ್ರಥಮ: ಸಚಿವ ಖೂಬಾ
Team Udayavani, Oct 30, 2021, 6:17 AM IST
ಪಣಂಬೂರು: ಹೈಡ್ರೋಜನ್, ನವೀಕರಿಸಬಹುದಾದ ಇಂಧನ ಉತ್ಪಾದನಾ ಕ್ಷೇತ್ರದಲ್ಲಿ ಭಾರತ ವಿಶ್ವದಲ್ಲಿ ಪ್ರಥಮ ಸ್ಥಾನ ಪಡೆಯಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು ಎಂಸಿಎಫ್ ಈ ವಿಭಾಗದಲ್ಲಿ ಉತ್ಪಾದನೆಗೆ ಬೇಕಾದ ಸಿದ್ಧತೆಗಳನ್ನು ಈಗಿನಿಂದಲೇ ಮಾಡಿಕೊಳ್ಳಬೇಕು ಎಂದು ಕೇಂದ್ರದ ರಸಗೊಬ್ಬರ ಖಾತೆಯ ರಾಜ್ಯ ಸಚಿವ ಭಗವಂತ ಖೂಬಾ ಹೇಳಿದರು.
ಅವರು ಪಣಂಬೂರಿನ ಎಂಸಿಎಫ್ನಲ್ಲಿ 400 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾಗುವ ಅಮೋನಿಯ ಇಂಧನ ಸ್ಥಾವರದ ದಕ್ಷತಾ ಸುಧಾರಣೆ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ದೇಶದಲ್ಲಿ ಇದೀಗ 175 ಗಿಗಾಬೈಟ್ ಹೈಡ್ರೋಜನ್ ಎನರ್ಜಿ ಉತ್ಪಾದನೆ ನಡೆಯುತ್ತಿದೆ. 2030ರ ವೇಳೆಗೆ 450 ಗಿಗಾಬೈಟ್ ಉತ್ಪಾದನೆ ಗುರಿ ಹೊಂದಲಾಗಿದೆ. ಇದಕ್ಕಾಗಿ ದೇಶದಲ್ಲಿ ಸಂಶೋಧನೆ ತಾಂತ್ರಿಕತೆಯ ಮೇಲ್ದರ್ಜೆ ಮತ್ತಿತರ ಪೂರಕ ಕೆಲಸ ಕಾರ್ಯಗಳು ಭರದಿಂದ ನಡೆಯುತ್ತಿವೆ ಎಂದು ಸಚಿವರು ಹೇಳಿದರು.
ಸಂಸದ ನಳಿನ್ ಕುಮಾರ್ ಮಾತ ನಾಡಿ, ದಿ| ಅನಂತ ಕುಮಾರ್ ಸಚಿವರಾಗುವ ವೇಳೆಗೆ ರಸಗೊಬ್ಬರ ಕಾರ್ಖಾನೆಗಳು ಸಂಕಷ್ಟ ಪರಿಸ್ಥಿತಿಯ ಲ್ಲಿದ್ದವು. ಆ ಸಂದರ್ಭ ದಿಟ್ಟ ನಿರ್ಧಾರ ಕೈಗೊಂಡು ಅವುಗಳನ್ನು ಉಳಿಸಿದ ಕೀರ್ತಿ ಅನಂತಕುಮಾರ್ ಅವರಿಗೆ ಸಲ್ಲಬೇಕು ಎಂದು ಸ್ಮರಿಸಿದರು. ಸ್ಥಳೀಯರಿಗೆ ಉದ್ಯೋಗ ದೊರಕಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರದ ಕಂಪೆನಿಗಳು ಮುಂದಾಗಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು.
ಇದನ್ನೂ ಓದಿ:ಟಿ20 ವಿಶ್ವಕಪ್: ಪಾಕಿಸ್ಥಾನ ಗೆಲುವಿನ ಹ್ಯಾಟ್ರಿಕ್
ಸಚಿವ ಎಸ್. ಅಂಗಾರ, ಶಾಸಕರಾದ ಡಾ| ಭರತ್ ಶೆಟ್ಟಿ ವೈ., ವೇದವ್ಯಾಸ ಕಾಮತ್, ಪ್ರತಾಪ್ ಸಿಂಹ ನಾಯಕ್, ಮೇಯರ್ ಪ್ರೇಮಾನಂದ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್, ಆಡಳಿತ ನಿರ್ದೇಶಕ ಶುಭಪ್ರದ ಶಾ, ಹಣಕಾಸು ನಿರ್ದೇಶಕ ಮುರಳಿಧರ ರಾವ್ ಉಪಸ್ಥಿತರಿದ್ದರು.
ಎಂಸಿಎಫ್ ನಿರ್ದೇಶಕ ಪ್ರಭಾಕರ್ ರಾವ್ ಪ್ರಸ್ತಾವನೆಗೈದು, ಡಾ| ಯೋಗೇಶ್ ನಿರ್ವಹಿಸಿದರು.
ರಸಗೊಬ್ಬರ ಉತ್ಪಾದನೆ: 2023ಕ್ಕೆ ದೇಶ ಸ್ವಾವಲಂಬಿ
ದೇಶವು ರಸಗೊಬ್ಬರ ಉತ್ಪಾದನೆಯಲ್ಲಿ 2023ಕ್ಕೆ ಸ್ವಾವಲಂಬಿಯಾಗಬೇಕು ಎನ್ನುವ ಉದ್ದೇಶದಿಂದ ರಸಗೊಬ್ಬರಗಳ ಉತ್ಪಾದನೆಯನ್ನು ಹೆಚ್ಚು ಮಾಡಲು ಬೇಕಾದ ಎಲ್ಲ ಕ್ರಮಗಳನ್ನು ಕೈಗೊಂಡಿದೆ ಎಂದ ಸಚಿವರು ಸ್ಥಳೀಯವಾಗಿ ಭೂಮಿ ಪಡೆದುಕೊಂಡು ಉತ್ಪಾದನೆ ಮಾಡುವ ಕಂಪೆನಿಗಳು ಸ್ಥಳೀಯವಾಗಿ ಉದ್ಯೋಗವಕಾಶ ಕಲ್ಪಿಸಲು ಒತ್ತು ನೀಡುವಂತೆ ಸಚಿವ ಖೂಬಾ ಸೂಚಿಸಿದರು.