ಪುತ್ತೂರು ವಿಭಾಗ ವ್ಯಾಪ್ತಿಯಲ್ಲಿ ಸರಕಾರಿ ಬಸ್ ಓಡಾಟ ಹೆಚ್ಚಳ
ಶೇ. 80ರಷ್ಟು ಆದಾಯ ,ಪ್ರತೀ ಕಿ.ಮೀ.ಗೆ 28 ರೂಪಾಯಿ ಸಂಗ್ರಹ
Team Udayavani, Dec 7, 2020, 1:12 PM IST
ಸಾಂದರ್ಭಿಕ ಚಿತ್ರ
ಪುತ್ತೂರು, ಡಿ. 6: ಲಾಕ್ಡೌನ್ನ ಎಂಟು ತಿಂಗಳ ಅವಧಿಯ ಅನಂತರ ಪುತ್ತೂರು ಕೆಎಸ್ಆರ್ಟಿಸಿ ವಿಭಾಗದಲ್ಲಿ ಬಸ್ ಓಡಾಟ ಸಂಖ್ಯೆ ಹೆಚ್ಚಳಗೊಂಡ ಪರಿಣಾಮ ಆದಾಯ ಸಂಗ್ರಹವು ಏರಿಕೆ ಕಂಡಿದೆ.
ಪುತ್ತೂರು ಕೆಎಸ್ಆರ್ಟಿಸಿ ವಿಭಾಗ ಪ್ರತಿದಿನ 75 ಲಕ್ಷ ರೂ. ಆದಾಯ ನಿರೀಕ್ಷೆ ಹೊಂದಿದೆ. ಆದರೆ ಕೋವಿಡ್-19ರ ಪರಿಣಾಮ ಬಸ್ ಓಡಾಟವಿಲ್ಲದೆ ಆದಾಯ ಪಾತಾಳಕ್ಕೆ ಕುಸಿದಿತ್ತು. ಇದೀಗ ಹೆಚ್ಚಿನ ರೂಟ್ಗಳಲ್ಲಿ ಬಸ್ಗಳ ಓಡಾಟ ಪುನರಾರಂಭಗೊಂಡು ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು, ಆರ್ಥಿಕ ಪರಿಸ್ಥಿತಿ ಚೇತರಿಕೆಯ ಹಂತದಲ್ಲಿದೆ.
ಕೋವಿಡ್-19ರ ಪರಿಣಾಮ : ಮೇ 19ರಿಂದ ಕೆಎಸ್ಆರ್ಟಿಸಿ ಉಪವಿಭಾಗದ ಎಲ್ಲ ಘಟಕಗಳ ವ್ಯಾಪ್ತಿಯಲ್ಲಿ ಒಟ್ಟು 50 ಬಸ್ಗಳು ಓಡಾಟ ಆರಂಭಿಸಿದ್ದವು. ಜೂ. 7ರ ವೇಳೆಗೆ ಬಸ್ಗಳ ಸಂಖ್ಯೆ 130ಕ್ಕೆ ಹೆಚ್ಚಿತ್ತು. ಡಿಸೆಂಬರ್ ಆರಂಭಕ್ಕೆ ಓಡಾಟ ಸಂಖ್ಯೆ 450ಕ್ಕೆ ಏರಿದೆ. ಆರಂಭದಲ್ಲಿ ಪುತ್ತೂರು-ಮಂಗಳೂರು ನಡುವೆ ಈ ಹಿಂದೆ ಪ್ರತಿ ಕಿ.ಮೀ.ಗೆ 25 ರೂ. ಆದಾಯ ಬರುತ್ತಿದ್ದರೆ, ಮೇ ತಿಂಗಳಲ್ಲಿ 21 ರೂ.ನಷ್ಟು ಮಾತ್ರ ಸಂಗ್ರಹವಾಗುತ್ತಿತ್ತು. ಪುತ್ತೂರು-ಬೆಂಗಳೂರು ಬಸ್ನಲ್ಲಿ 32 ರೂ. ಇದ್ದ ಆದಾಯ 14 ರೂ.ನಿಂದ 20 ರೂ.ನಷ್ಟಿತ್ತು. ನವೆಂಬರ್ ಅನಂತರ ಅವೆರೆಡು ಈ ಹಿಂದಿನ ಆದಾಯದ ಹಂತಕ್ಕೆ ತಲುಪಿವೆ.
ನೌಕರರು ಕರ್ತವ್ಯಕ್ಕೆ ಹಾಜರು : ಕೆಎಸ್ಆರ್ಟಿಸಿ ಪುತ್ತೂರು ವಿಭಾಗೀಯ ವ್ಯಾಪ್ತಿ 6 ತಾಲೂಕುಗಳನ್ನು ಒಳಗೊಂಡಿದೆ. ಪುತ್ತೂರು, ಸುಳ್ಯ, ಬಂಟ್ವಾಳ, ಬೆಳ್ತಂಗಡಿ, ಬಿ.ಸಿ.ರೋಡ್ ಹಾಗೂ ಮಡಿಕೇರಿ ಘಟಕಗಳಿವೆ. ಒಟ್ಟು 2,400 ಮಂದಿ ಸಿಬಂದಿ ಇದ್ದಾರೆ. ಆರಂಭದಲ್ಲಿ ಶೇ. 33ರಷ್ಟು ನೌಕರರು ಕರ್ತವ್ಯಕ್ಕೆ ಹಾಜರಾಗಿದ್ದರು. ಪ್ರಸ್ತುತ ಹೊರ ಜಿಲ್ಲೆಯ ನೌಕರರು ಕರ್ತವ್ಯಕ್ಕೆ ಮರಳಿರುವ ಕಾರಣ ನೌಕರರ ಸಂಖ್ಯೆ ಹೆಚ್ಚಿದ್ದು ಶೇ. 95ಕ್ಕೂ ಅಧಿಕ ಮಂದಿ ಹಾಜರಾಗಿದ್ದಾರೆ.
ಪ್ರಯಾಣಿಕರ ಸಂಖ್ಯೆ ಹೆಚ್ಚಳ : ಕೋವಿಡ್ ಹಿನ್ನೆಲೆಯಲ್ಲಿ ಮುಚ್ಚಿದ ಪ್ರಮುಖ ದೇವಾಲಯಗಳು ತೆರೆದಿವೆ. ಪೂಜೆ ಪುನಸ್ಕಾರಗಳು ಪುನರಾರಂಭಗೊಂಡಿವೆ. ಹೀಗಾಗಿ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ.
ನಿರ್ಬಂಧ ಸಡಿಲಿಕೆಯಿಂದ ಪರಿಸ್ಥಿತಿ ಸುಧಾರಣೆ : ಕೋವಿಡ್ ಮೊದಲೇ ನಿರೀಕ್ಷಿತ ಆದಾಯದಲ್ಲಿ 60 ಲಕ್ಷ ರೂ. ಮಾತ್ರ ಸಂಗ್ರಹಗೊಂಡು 15 ಲಕ್ಷ ರೂ. ಕೊರತೆ ಉಂಟಾಗುತ್ತಿತ್ತು. ತಿಂಗಳ ಅಂಕಿ ಅಂಶದಲ್ಲಿ ಕೆಲವು ಘಟಕ ಲಾಭದಲ್ಲಿದ್ದರೆ, ಇನ್ನು ಕೆಲವು ನಷ್ಟ ಅನುಭವಿಸುತ್ತವೆ. ಕೊರೊನಾ ಅನಂತರವಂತೂ ನಷ್ಟದ ಅಂತರ ಮತ್ತಷ್ಟು ದ್ವಿಗುಣಗೊಂಡಿತು. ವಿಭಾಗ ವ್ಯಾಪ್ತಿಯಲ್ಲಿ 560 ಬಸ್ಗಳಿದ್ದು, ಅವುಗಳಿಗೆ ಪ್ರತಿ ಕಿ.ಮೀ.ಗೆ 20,160 ರೂ. ಖರ್ಚು ಬೇಕಾಗುತ್ತದೆ. ಲಾಕ್ಡೌನ್ ಪ್ರಾರಂಭದ ಕೆಲ ತಿಂಗಳು ಪೂರ್ಣ ನಷ್ಟ ಉಂಟಾಗಿತ್ತು. ಇದೀಗ ಪರಿಸ್ಥಿತಿ ಸುಧಾರಿಸಿದೆ. ಎರಡು ತಿಂಗಳಿನಿಂದ ಬಸ್ ಓಡಾಟ ಹೆಚ್ಚಳಗೊಂಡಿದ್ದು, ಈ ಹಿಂದಿನ ಅಂಕಿ ಅಂಶಕ್ಕೆ ಹೋಲಿಸಿದರೆ ಪ್ರಸ್ತುತ ಶೇ. 80ರಷ್ಟು ಆದಾಯ ಸಂಗ್ರಹ ವಾಗುತ್ತಿದೆ. ದಿನಂಪ್ರತಿ 450 ಬಸ್ಗಳು ಸಂಚರಿಸುತ್ತಿವೆ. ಬಸ್ನ ಪ್ರತಿ ಕಿ.ಮೀ. ಓಡಾಟಕ್ಕೆ ತಲಾ 37 ರೂ. ಖರ್ಚು ತಗಲುತ್ತದೆ. ಲಾಕ್ಡೌನ್ಗೆ ಪೂರ್ವದಲ್ಲಿ ಪ್ರತಿ ಕಿ.ಮೀ.ಗೆ 32 ರೂ. ಆದಾಯ ಸಿಗುತ್ತಿತ್ತು. ಲಾಕ್ಡೌನ್ ಅನಂತರ ಬಸ್ ಓಡಾಟ ಆರಂಭಿಸಿದ್ದರೂ ಸೀಮಿತ ಪ್ರಯಾಣಿಕರಿಗೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಿದ ಕಾರಣ ಆದಾಯ 12 ರೂ.ಗೆ ಇಳಿದಿತ್ತು. ಎರಡು ತಿಂಗಳಿನಿಂದ ನಿರ್ಬಂಧ ಸಡಿಲಿಸಿ ಬಸ್ ಓಡಾಟ ನಡೆಯುತ್ತಿದ್ದು, ಆದಾಯ 28 ರೂ.ಗೆ ತಲುಪಿದೆ.
ಆದಾಯದಲ್ಲಿ ಚೇತರಿಕೆ : ಪುತ್ತೂರು ವಿಭಾಗದಲ್ಲಿ ಶೇ. 85ರಷ್ಟು ಬಸ್ಗಳ ಓಡಾಟ ಪುನರಾರಂಭಗೊಂಡಿವೆ. ಈಗಾಗಲೇ ಶೇ. 80ರಷ್ಟು ಆದಾಯ ಸಂಗ್ರಹವಾಗುತ್ತಿದೆ. ಲಾಕ್ಡೌನ್ ಬಳಿಕ ಓಡಾಟ, ಆದಾಯ ಸಂಗ್ರಹದಲ್ಲಿ ಚೇತರಿಕೆ ಕಂಡಿದೆ. –ಜಯಕರ ಶೆಟ್ಟಿ, ನಿಯಂತ್ರಣಾಧಿಕಾರಿ, ಪುತ್ತೂರು ಕೆಎಸ್ಆರ್ಟಿಸಿ ವಿಭಾಗ
– ಕಿರಣ್ ಪ್ರಸಾದ್ ಕುಂಡಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು
Road Mishap;ಅರಂತೋಡು: ಕಾರು – ಬೈಕ್ ಢಿಕ್ಕಿ: ಸವಾರ ಸಾವು
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು