ಉಳ್ಳಾಲದಲ್ಲಿ ತೀವ್ರಗೊಂಡ ಕಡಲ್ಕೊರೆತ
Team Udayavani, Jun 20, 2020, 9:05 AM IST
ಉಳ್ಳಾಲ: ಉಚ್ಚಿಲ ಬಟ್ಟಪ್ಪಾಡಿಯಲ್ಲಿ ಸಮುದ್ರದ ಅಲೆಗಳು ತೀರಕ್ಕೆ ಅಪ್ಪಳಿಸುತ್ತಿವೆ.
ಉಳ್ಳಾಲ: ಉಳ್ಳಾಲ, ಸೋಮೇಶ್ವರ ಉಚ್ಚಿಲದಲ್ಲಿ ಸಮುದ್ರದ ಅಬ್ಬರ ಹೆಚ್ಚಾಗಿದ್ದು 20ಕ್ಕೂ ಹೆಚ್ಚಿನ ಮನೆಗಳಿಗೆ ಸಮುದ್ರದ ಅಲೆಗಳು ಅಪ್ಪಳಿಸುತ್ತಿದ್ದು, ಉಚ್ಚಿಲ ಬಟ್ಟಪ್ಪಾಡಿ ಬಳಿ ಸಂಪರ್ಕ ರಸ್ತೆ ಕೊಚ್ಚಿಹೋಗುವ ಭೀತಿಯಲ್ಲಿದೆ.ಉಚ್ಚಿಲದಲ್ಲಿ ಅಪೂರ್ಣ ಮತ್ತು ಅವೈಜ್ಞಾನಿಕ ಶಾಶ್ವತ ಕಾಮಗಾರಿಯಿಂದ ಮನೆಗಳಿಗೆ ಅಪಾಯ ಹೆಚ್ಚಾಗಿದೆ.
ಉಳ್ಳಾಲದ ಕೈಕೋ, ಕಿಲೇರಿಯಾ ನಗರ, ಸಮ್ಮರ್ ಸ್ಯಾಂಡ್, ಸೀಗ್ರೌಂಡ್ ಸೇರಿದಂತೆ ವಿವಿಧೆಡೆ ಸಮುದ್ರದ ಅಲೆಗಳು ದಡಕ್ಕಪ್ಪಳಿಸುತ್ತಿವೆ. ಸೋಮೇಶ್ವರ ಉಚ್ಚಿಲದಲ್ಲಿ ಎಡಿಬಿ ಯೋಜನೆಯಡಿ ಶಾಶ್ವತ ಕಾಮಗಾರಿ ನಡೆಯುತ್ತಿದ್ದು ಅಪೂರ್ಣ ಕಾಮಗಾರಿಯಿಂದ ಬಟ್ಟಪ್ಪಾಡಿ, ನ್ಯೂಉಚ್ಚಿಲ ಸೇರಿದಂತೆ ಕೆಲವೆಡೆ ಕಡಲ್ಕೊರೆತಕ್ಕೆ ಕಾರಣವಾಗಿದೆ. ಬಟ್ಟಪ್ಪಾಡಿ ಬಳಿ ಉಚ್ಚಿಲ ಎಂಡ್ ಪಾಯಿಂಟ್ ಸಂಪರ್ಕಿಸುವ ರಸ್ತೆ ಕೊಚ್ಚಿ ಹೋಗುವ ಭೀತಿಯಲ್ಲಿದೆ.
ಉಚ್ಚಿಲದಲ್ಲಿ ಅಪಾಯದ ಭೀತಿಯಲ್ಲಿ ರುವ ವಸಂತ್ ಅವರು ಮನೆ ತೆರವು ಮಾಡಿ ತೆರಳಿದ್ದಾರೆ. ಉಚ್ಚಿಲ ವ್ಯಾಪ್ತಿಯಲ್ಲಿ 12ಕ್ಕೂ ಹೆಚ್ಚು ತೆಂಗಿನ ಮರಗಳು ಧರಾಶಾಯಿಯಾಗಿವೆ. ಸ್ಥಳಕ್ಕೆ ಸೋಮೇಶ್ವರ ಪುರಸಭಾ ಮುಖ್ಯಾಧಿಕಾರಿ ವಾಣಿ ವಿ. ಆಳ್ವ ಮುಂತಾದವರು ಭೇಟಿ ನೀಡಿದ್ದಾರೆ.
ತುರ್ತು ಕಾಮಗಾರಿಗೆ ಖಾದರ್ ಒತ್ತಾಯ ಸೋಮೇಶ್ವರ ಉಚ್ಚಿಲದಲ್ಲಿ ಕಡಲ್ಕೊರೆತ ದಿಂದ ಅಪಾಯದಲ್ಲಿರುವ ಪ್ರದೇಶಗಳಲ್ಲಿ ತುರ್ತು ಕಾಮಗಾರಿ ನಡೆಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರನ್ನು ಆಗ್ರಹಿಸಲಾಗಿದ್ದು, ಶೀಘ್ರ ಸ್ಪಂದಿಸುವ ಭರವಸೆ ನೀಡಿದ್ದಾರೆ ಎಂದು ಶಾಸಕ ಯು.ಟಿ. ಖಾದರ್ ಅವರು ತಿಳಿಸಿದ್ದಾರೆ.