ತುಳುನಾಡಿನ ಸಾಂಸ್ಕೃತಿಕ ವೈಭವಕ್ಕೆ ಸಾಕ್ಷಿಯಾದ “ಕುಡ್ಲದ ಪಿಲಿ ಪರ್ಬ’
Team Udayavani, Oct 3, 2022, 12:59 AM IST
ಮಂಗಳೂರು: ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಸಂಸದ ನಳಿನ್ ಕುಮಾರ್ ಕಟೀಲು ಮಾರ್ಗದರ್ಶನದಲ್ಲಿ ಶಾಸಕ ಡಿ. ವೇದವ್ಯಾಸ ಕಾಮತ್ ನೇತೃತ್ವದಲ್ಲಿ ಹುಲಿವೇಷ ಸ್ಪರ್ಧಾಕೂಟ “ಕುಡ್ಲದ ಪಿಲಿ ಪರ್ಬ 2022′ ರವಿವಾರ ಬೆಳಗ್ಗಿನಿಂದ ರಾತ್ರಿಯವರೆಗೆ ನಗರದ ಕೇಂದ್ರ ಮೈದಾನದಲ್ಲಿ ನಡೆಯಿತು.
ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್ ಕುಮಾರ್ ಉದ್ಘಾಟಿಸಿ ಶುಭ ಹಾರೈಸಿದರು. ಮಂಗಳೂರು ದಕ್ಷಿಣದ ಶಾಸಕ ಡಿ. ವೇದವ್ಯಾಸ ಕಾಮತ್ ಸ್ವಾಗತಿಸಿ ಪ್ರಸ್ತಾವನೆಗೈದು, ತುಳುನಾಡಿನ ಸಾಂಪ್ರದಾಯಿಕ ಕಲೆಗಳು ದೇಶ ವಿದೇಶಕ್ಕೂ ಪಸರಿಸಬೇಕು ಎಂಬ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಮುಂದೆ ದೀಪಾವಳಿ ಸೇರಿದಂತೆ ವಿವಿಧ ಹಬ್ಬಗಳ ಸಂದರ್ಭ ನಾನಾ ರೀತಿಯ ಕಾರ್ಯಕ್ರಮ ಆಯೋಜಿಸಲು ಪ್ರತಿಷ್ಠಾನ ಮುಂದಾಗಿದೆ. ಪಿಲಿ ಪರ್ಬದಲ್ಲಿ ಗೆದ್ದವರಿಗೆ ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದು ಎಂದರು.
ಸಂಸದ ನಳಿನ್ ಕುಮಾರ್, ಮೇಯರ್ ಜಯಾನಂದ ಅಂಚನ್, ಉಪಮೇಯರ್ ಪೂರ್ಣಿಮಾ, ಎಸ್ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದಿರೆ, ನಿಕಟಪೂರ್ವ ಮೇಯರ್ ಪ್ರೇಮಾನಂದ ಶೆಟ್ಟಿ, ಪ್ರತಿಷ್ಠಾನದ ಅಧ್ಯಕ್ಷ, ಮಾಜಿ ಮೇಯರ್ ದಿವಾಕರ ಪಾಂಡೇಶ್ವರ, ಆರೆಸ್ಸೆಸ್ ಮುಖಂಡ ಸುನಿಲ್ ಆಚಾರ್, ಬಿಜೆಪಿ ಮುಖಂಡರಾದ ಸಂತೋಷ್ ಕುಮಾರ್ ರೈ ಬೋಳಿಯಾರ್, ಕಸ್ತೂರಿ ಪಂಜ, ಹಿರಿಯ ಪತ್ರಕರ್ತ ಮನೋಹರ ಪ್ರಸಾದ್, ಕದ್ರಿ ನವನೀತ್ ಶೆಟ್ಟಿ, ಮೆಸ್ಕಾಂ ಅಧಿಕಾರಿ ಕಿಶೋರ್, ಗಿರಿಧರ ಶೆಟ್ಟಿ ಸೇರಿದಂತೆ ಮಹಾನಗರ ಪಾಲಿಕೆ ಸದಸ್ಯರು, ಬಿಜೆಪಿ ಕಾರ್ಯಕರ್ತರು, ಜನಪ್ರತಿನಿಧಿಗಳು ಇದ್ದರು.
ಮಧುರಾಜ್ ಮತ್ತು ಶರ್ಮಿಳಾ ನಿರೂಪಿಸಿದರು.
ಆಕರ್ಷಕ ವೇದಿಕೆ
12 ಹುಲಿವೇಷ ತಂಡಗಳು ಭಾಗವಹಿಸಿದ್ದು ನೋಡುಗರ ಮೆಚ್ಚುಗೆಗೆ ಪಾತ್ರವಾದವು. ಪುಟಾಣಿಗಳು ಕೂಡ ಭಾಗವಹಿಸಿದ್ದು ವಿಶೇಷ. ಪ್ರತೀ ತಂಡಕ್ಕೆ ಸ್ಮರಣಿಕೆ ನೀಡಲಾಯಿತು. ಒಂದು ತಂಡದಲ್ಲಿ 15 ಮಂದಿ ಹುಲಿವೇಷಧಾರಿಗಳು ಇದ್ದು, ಸಾಂಪ್ರದಾಯಿಕ ವ್ಯವಸ್ಥೆಯಡಿ ಇಡೀ ಸ್ಪರ್ಧೆ ನಡೆಯಿತು. ಅಕ್ಕಿಮುಡಿ ಎತ್ತಿ ಹಾಕುವುದು, ಪಲ್ಟಿ ಸೇರಿದಂತೆ ಒಂದೊಂದು ಪ್ರಯೋಗಕ್ಕೂ ಪ್ರತ್ಯೇಕ ಅಂಕಗಳನ್ನು ನಿಗದಿಪಡಿಸಲಾಗಿತ್ತು. ಪ್ರತೀ ತಂಡಕ್ಕೆ 20 ನಿಮಿಷ ಕಾಲಾವಕಾಶ ಇತ್ತು. ಪ್ರವೇಶದ ದ್ವಾರವನ್ನು ಹುಲಿಯ ಮುಖ ಮಾದರಿಯಲ್ಲಿ ರೂಪುಗೊಳಿಸಲಾಗಿತ್ತು. ಸಾವಿರಾರು ಮಂದಿ ಕುಳಿತುಕೊಳ್ಳಲು ಗ್ಯಾಲರಿ ಸಹಿತ ಆಸನ ವ್ಯವಸ್ಥೆ ಮಾಡಲಾಗಿತ್ತು.
ಫೇಸ್ ಪೈಂಟಿಂಗ್, ಹುಲಿ ಕುಣಿತ ಅಬ್ಬರ
ಚಿಕ್ಕ ಮಕ್ಕಳು ಸೇರಿದಂತೆ ಕಾರ್ಯಕ್ರಮಕ್ಕೆ ಆಗಮಿಸಿದ ಹೆಚ್ಚಿನವರು ಹುಲಿ ವೇಷ ಮುಖವರ್ಣಿಕೆ (ಫೇಸ್ ಪೈಂಟಿಂಗ್) ಹಾಕಿಸಿಕೊಳ್ಳುತ್ತಿರುವುದು ಕಂಡುಬಂತು. ಉಳಿದಂತೆ ಮುಖವಾಡ ಮಾರಾಟ, ಹುಲಿ ಟೋಪಿ ಮಳಿಗೆ ತಿಂಡಿ-ತಿನಿಸುಗಳ ಮಳಿಗೆಗಳೂ ಇದ್ದವು.