ಅಭಿವೃದ್ಧಿ ಕಾಮಗಾರಿಗಳ ವಿಚಾರದಲ್ಲಿ ಸಮನ್ವಯ ಕೊರತೆ
ಫಳ್ನೀರು, ಕೋರ್ಟ್, ಸೆಂಟ್ರಲ್ ಮಾರ್ಕೆಟ್, ಡೊಂಗರೆಕೇರಿ ವಾರ್ಡ್
Team Udayavani, Nov 8, 2021, 5:25 AM IST
ಮಹಾನಗರ: ನಗರದ ಭೌಗೋಳಿಕ ಪರಿಸ್ಥಿತಿ ರಾಜ್ಯದ ಇತರ ಪ್ರದೇಶಗಳಿಗೆ ಹೋಲಿಸಿದರೆ ಭಿನ್ನ. ನಗರ ಬಹುತೇಕ ಎತ್ತರ ತಗ್ಗುಗಳಿಂದ ಕೂಡಿರುತ್ತವೆ ಮತ್ತು ವಾರ್ಷಿಕವಾಗಿ 3,500 ರಿಂದ 4,000 ಮಿ.ಮೀ. ಮಳೆಯಾಗುತ್ತದೆ. ಈ ಪರಿಸ್ಥಿತಿಯಲ್ಲಿ ಇಲ್ಲಿನ ರಸ್ತೆಗಳ ಸುಸ್ಥಿತಿ ಕಾಯ್ದುಕೊಳ್ಳುವುದೇ ಸವಾಲು. ರಸ್ತೆಗಳ ಅಭಿವೃದ್ಧಿ ಹಾಗೂ ಮೂಲಸೌಕರ್ಯಗಳ ಅಳವಡಿಕೆ ಕಾಮಗಾರಿಗಳ ಕುರಿತಂತೆ ಇಲಾಖೆಗಳ ನಡುವೆ ಸಮನ್ವಯತೆ ಬಹಳ ಅಗತ್ಯ.
ಆದರೆ, ನಗರದ ಕೆಲವೊಂದು ವಾರ್ಡ್ ಗಳಲ್ಲಿ ಸುತ್ತಾಡಿದಾಗ ಪ್ರಸ್ತುತ ಈ ರೀತಿಯ ಸಮನ್ವಯದ ಕೊರತೆಯಿಂದಾಗಿ ರಸ್ತೆಗಳ ದುಃಸ್ಥಿತಿಗೆ ಕಾರಣವಾಗಿದೇನೊ ಎಂದೆನಿಸುತ್ತದೆ.
ಒಳಭಾಗದ ರಸ್ತೆ ತಕ್ಕಮಟ್ಟಿಗೆ ಸುಸ್ಥಿತಿಯಲ್ಲಿರುವಾಗ ದಿಢೀರನೇ ಒಂದು ದಿನ ಬೆಳಗ್ಗೆ ಕುಡ್ಸೆಂಪ್ನ ಜೇಸಿಬಿಗಳು ಬಂದು ಅಗೆಯಲಾರಂಭಿಸುತ್ತವೆ. 15 ದಿನವೋ, ತಿಂಗಳ್ಳೋ ಯುಜಿಡಿ ಕಾಮಗಾರಿ ನಡೆಸಿ ಕೆಲಸ ಮುಗಿಸಿ ಹೋಗುತ್ತಾರೆ. ಇದ್ದ ಡಾಮರು ಕಿತ್ತು ಹಾಕಿ ರಸ್ತೆಯಿಡೀ ಜಲ್ಲಿಕಲ್ಲುಮಯವಾಗುತ್ತದೆ. ಜತೆಗೆ ಒಂದಷ್ಟು ಹೊಸ ಹೊಂಡ-ಗುಂಡಿ ಸೃಷ್ಟಿಯಾಗುತ್ತವೆ. ಕಾಂಕ್ರೀಟ್ ಅಥವಾ ಡಾಮರು ಕಾಮಗಾರಿಗೆ ಕಾಯುತ್ತಿರುವುದು ನಗರದ ಫಳ್ನೀರು, ಕೋರ್ಟ್, ಸೆಂಟ್ರಲ್ ಮಾರ್ಕೆಟ್, ಡೊಂಗರಕೇರಿ ವಾರ್ಡ್ಗಳ ಕೆಲವು ಒಳರಸ್ತೆಗಳಲ್ಲಿ ಕಂಡುಬಂದ ಚಿತ್ರಣ.
ಫಳ್ನೀರು ವಾರ್ಡ್ನಲ್ಲಿ ಮುಖ್ಯ ರಸ್ತೆಗಳಿಗಿಂತ ಒಳ-ಸಂಪರ್ಕ ರಸ್ತೆಗಳೇ ಹೆಚ್ಚು. ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆಯ ಬಳಿಯ ರಸ್ತೆ ಸಹಿತ ಕೆಲವು ಪ್ರಮುಖ ರಸ್ತೆಗಳಿಗೆ ಕಾಂಕ್ರೀಟ್ ಹಾಕಲಾಗಿದೆ. ಬೆರಳೆಣಿಕೆಯ ಒಳರಸ್ತೆಗಳು ಕಾಂಕ್ರೀಟ್ ಕಾಮಗಾರಿಗೊಂಡಿರುವುದನ್ನು ಹೊರತುಪಡಿಸಿದರೆ ಬಹುತೇಕ ರಸ್ತೆಗಳು ಡಾಮರು ರಸ್ತೆಗಳು. ಆದರೆ ಕೆಲವು ರಸ್ತೆಗಳು ಒಳಚರಂಡಿ ಕಾಮಗಾರಿಗಳಿಗಾಗಿ ಅಗೆಯಲ್ಪಟ್ಟು ರಸ್ತೆ ಸ್ವರೂಪವನ್ನೇ ಕಳೆದುಕೊಂಡಿವೆ. ಗೋರಿಗುಡ್ಡೆ 3ನೇ ಹಾಗೂ 4ನೇ ಅಡ್ಡರಸ್ತೆ, ಸೂಟರ್ಪೇಟೆ 1ನೇ ಮತ್ತು 2ನೇ ಅಡ್ಡರಸ್ತೆ, ರಾಷ್ಟ್ರೀಯ ಹೆದ್ದಾರಿಯನ್ನು ಸಂಪರ್ಕಿಸುವ ನೆಹರೂ ರಸ್ತೆಗಳನ್ನು ಇದಕ್ಕೆ ಉದಾಹರಣೆಯಾಗಿ ತೆಗೆದುಕೊಳ್ಳಬಹುದು. ಇಲ್ಲಿ ಕುಡ್ಸೆಂಪ್ನವರು ಒಳಚರಂಡಿ ಕಾಮಗಾರಿ ಮಾಡಿ ಹೋಗಿದ್ದಾರೆ. ರಸ್ತೆಯ ದುರಸ್ತಿಗಾಗಿ ಸ್ಥಳೀಯರು ಕಾಯುತ್ತಿದ್ದಾರೆ. ರಸ್ತೆ ಅಗೆಯಲು ಅವಸರ ತೋರಿಸುತ್ತಾರೆ. ಅವರ ಕೆಲಸ ಮುಗಿದ ಬಳಿಕ ಇದನ್ನು ಸರಿಪಡಿಸುವ ಗೋಜಿಗೆ ಹೋಗುವುದಿಲ್ಲ. ರಸ್ತೆಗಳು ಹಾಳಾಗಿರುವುದರಿಂದ ವಾಹನಗಳನ್ನು ಚಲಾಯಿಸಲು ಕಷ್ಟಪಡಬೇಕು ಎನ್ನುತ್ತಾರೆ ಸ್ಥಳೀಯ ನಿವಾಸಿ ರವಿ.
ಇದನ್ನೂ ಓದಿ:ಕ್ರಿಪ್ಟೋಕರೆನ್ಸಿಯಲ್ಲಿ ಹೂಡಿಕೆಗೆ ಆಮಿಷವೊಡ್ಡಿ ವಂಚನೆ : ಸಿಸಿಬಿ ಪೊಲೀಸರಿಂದ ಮೂವರ ಬಂಧನ
ನಗರದ ಹೃದಯಭಾಗದ ಮತ್ತು ಪ್ರಮುಖ ವಾರ್ಡ್ ಕೋರ್ಟ್ ವಾರ್ಡ್. ಸ್ಮಾರ್ಟ್ ಸಿಟಿಯಲ್ಲೂ ಈ ವಾರ್ಡ್ ಒಳಗೊಂಡಿದೆ. ಜಿಲ್ಲಾ ನ್ಯಾಯಾಲಯ ಸಂಕೀರ್ಣ, ಅಂಬೇಡ್ಕರ್ ವೃತ್ತ, ಬಂಟ್ಸ್ಹಾಸ್ಟೆಲ್ ವೃತ್ತ ಮೊದಲಾದ ಪ್ರಮುಖ ಪ್ರದೇಶಗಳನ್ನು ಒಳಗೊಂಡಿವೆ. ನಗರದ ಕೆಲವು ಪ್ರಮುಖ ರಸ್ತೆಗಳ ಭಾಗವನ್ನು ಹೊಂದಿರುವುದರಿಂದ ಹೆಚ್ಚಿನ ರಸ್ತೆಗಳು ಕಾಂಕ್ರೀಟ್ ಕಾಮಗಾರಿಗೊಂಡಿವೆ. ಕೆಲವು ಒಳರಸ್ತೆಗಳು ಇನ್ನೂ ಡಾಮರು ರಸ್ತೆಗಳಾಗಿಯೇ ಉಳಿದಿವೆ. ಕೆ.ಎಸ್. ರಾವ್ ರಸ್ತೆಯಿಂದ ನ್ಯಾಯಾಲಯಕ್ಕೆ ಹೋಗುವ ಪ್ರಮುಖ ರಸ್ತೆಯ ಆರಂಭ ಭಾಗದಲ್ಲಿ ಡಾಮರು ಕಿತ್ತು ಹೋಗಿವೆ.
ಅಲೋಶಿಯಸ್ ಪ.ಪೂ. ಕಾಲೇಜ್ನ ಗೇಟ್ನ ಮುಂಭಾಗದಲ್ಲಿ ರಸ್ತೆಪಕ್ಕದಲ್ಲಿ ಗುಂಡಿ ತೆಗೆದು ತಿಂಗಳುಗಳೇ ಕಳೆದಿದ್ದು, ಇನ್ನೂ ಮುಚ್ಚಿಲ್ಲ. ಸ್ಮಾರ್ಟ್ಸಿಟಿಯಲ್ಲಿ ಈ ರಸ್ತೆಯ ಅಭಿವೃದ್ಧಿ ಕಾಣಲಿದೆ ಎಂದು ಹೇಳಲಾಗುತ್ತಿದೆ. ಮಿಲಾಗ್ರಿಸ್ನಿಂದ ಐಎಂಎ ಆಗಿ ಅತ್ತಾವರಕ್ಕೆ ಹೋಗುವ ರಸ್ತೆ ಸ್ಟರಕ್ ರಸ್ತೆ, ಲೋಬೋ ರಸ್ತೆ ಸಹಿತ ಕೆಲವು ರಸ್ತೆಗಳು ಅಭಿವೃದ್ಧಿ ಕಾಣಬೇಕಿದೆ.
ಡೊಂಗರಕೇರಿ ವಾರ್ಡ್ನಲ್ಲಿ ಕೂಡ ಕೆಲವು ಪ್ರಮುಖ ರಸ್ತೆಗಳು ಕಾಂಕ್ರೀಟ್ ಕಾಮಗಾರಿಗೊಂಡಿವೆ. ಒಳರಸ್ತೆಗಳಲ್ಲಿ ಬಹಳಷ್ಟು ರಸ್ತೆಗಳು ಡಾಮರು ರಸ್ತೆಗಳಾಗಿಯೇ ಉಳಿದಿವೆ. ಕೆಲವೆಡೆ ಒಳಚರಂಡಿ ಹಾಗೂ ಕಾಂಕ್ರೀಟ್ ಕಾಮಗಾರಿಗಳಿಗಾಗಿ ರಸ್ತೆ ಮುಚ್ಚಲಾಗಿದೆ. ಡೊಂಗರಕೇರಿ-ನ್ಯೂ ಚಿತ್ರಾ, ಭೋಜರಾವ್ ಲೇನ್-ಪ್ರಗತಿ ಸರ್ವಿಸ್ ಸ್ಟೇಶನ್ ರಸ್ತೆ, ಅಳಕೆ ಬ್ರಿಡ್ಜ್- ಕುದ್ರೋಳಿ ರಸ್ತೆ ಮೊದಲಾದ ಪ್ರಮುಖ ಸಂಪರ್ಕ ರಸ್ತೆಗಳ ಅಭಿವೃದ್ಧಿಗಾಗಿ ಕಾಯುತ್ತಿವೆ. ಕೆಲವು ಒಳರಸ್ತೆಗಳಲ್ಲಿ ಡಾಮರು ಕಿತ್ತುಹೋಗಿ ಗುಂಡಿಗಳು ಬಿದ್ದಿವೆ.
ಸೆಂಟ್ರಲ್ ವಾರ್ಡ್ನಲ್ಲಿ ಸ್ಮಾರ್ಟ್ಸಿಟಿಯಲ್ಲಿ ಕೆಲವು ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳು ಆಗುತ್ತಿವೆ. ಆದ ಕೆಲವೆಡೆ ಪೂರಕ ಕಾಮಗಾರಿಗಳು ಬಾಕಿಯುಳಿದಿವೆ. ಇದರಿಂದಾಗಿ ಒಳರಸ್ತೆಗಳ ಸಂಪರ್ಕಕ್ಕೂ ಸಮಸ್ಯೆಗಳು ತಲೆದೋರಿವೆ. ಪ್ರಮುಖವಾಗಿ ಜಿಎಚ್ಎಸ್ ರಸ್ತೆಯಲ್ಲಿ ಹೊಟೇಲ್ ಸ್ಯಾಫ್ರಾನ್ನಿಂದ ಭವಂತಿ ಸ್ಟ್ರೀಟ್ ರಸ್ತೆಯಲ್ಲಿ ಅರ್ಧಂಬರ್ಧ ಕಾಮಗಾರಿಗಳು ಆಗಿವೆ. ಕಲ್ಪನಾ ಸ್ವೀಟ್ಸ್ ರಸ್ತೆಯಲ್ಲಿ 5 ಯುಜಿಡಿ ವರ್ಕ್ ಆಗಿದ್ದು ಕಾಂಕ್ರೀಟ್ ಕಾಮಗಾರಿಗೆ ಕಾಯುತ್ತಿದೆ. ಬೀಬಿ ಆಲಾಬಿ ರಸ್ತೆ, ಕೊಡಿಯಾಲಬೈಲ್ ಪಾಸ್ಪೋರ್ಟ್ ಕಚೇರಿಯಿಂದ ರಥಬೀದಿಯ ಕಡೆಗೆ ಸಾಗುವ ರಸ್ತೆ, ಗೌರಿಮಠ ರಸ್ತೆ, ನಂದಾದೀಪ ರಸ್ತೆ ಮೊದಲಾದ ರಸ್ತೆಗಳು ಅಭಿವೃದ್ಧಿ ಕಾಣಬೇಕಾಗಿದೆ.
ನಾಗರಿಕರ ಬೇಡಿಕೆಗಳೇನು?
– ಕಾಮಗಾರಿಗಳಿಗಾಗಿ ಅಗೆದು ಹಾಕಿದ ರಸ್ತೆಗಳನ್ನು ಕೆಲಸ ಮುಗಿದ ಕೂಡಲೇ ದುರಸ್ತಿಗೊಳಿಸಿ.
– ಕಾಂಕ್ರೀಟೀಕರಣ ಜತೆಗೆ ಒಳಚರಂಡಿ, ನೀರು ಸರಬರಾಜು ಪೈಪ್ಗಳ ಕಾಮಗಾರಿಗಳನ್ನು ನಡೆಸಬೇಕು; ಕಾಮಗಾರಿ ಮುಗಿದ ಬಳಿಕ ಮತ್ತೇ ರಸ್ತೆ ಆಗೆಯುವುದು ಬೇಡ.
– ಒಳರಸ್ತೆಗಳು ಹಾಳಾಗುವುದು , ಹೊಂಡ ಸಮಸ್ಯೆ ತಪ್ಪಿಸಲು ಡಾಮರು ಬದಲು ಕಾಂಕ್ರೀಟ್ ಕಾಮಗಾರಿ ಉತ್ತಮ.
– ಡಾಮರು, ಕಾಂಕ್ರೀಟ್ ಕಾಮಗಾರಿಯ ಜತೆಗೆ ಮಳೆ ನೀರು ಹರಿದು ಹೋಗಲು ಚರಂಡಿಯ ಕಾಮಗಾರಿ ನಡೆಯಬೇಕು.
ಫಳ್ನೀರು, ಕೋರ್ಟ್, ಸೆಂಟ್ರಲ್ ಮಾರ್ಕೆಟ್, ಡೊಂಗರೆಕೇರಿ ವಾರ್ಡ್ ಗಳಲ್ಲಿ ಉದಯವಾಣಿ ಸುದಿನ ತಂಡ ಸಂಚರಿಸಿ ಮಾಹಿತಿ ಸಂಗ್ರಹಿಸಿದ್ದು, ಕೆಲವೆಡೆ ಒಳರಸ್ತೆಗಳು ದುಃಸ್ಥಿತಿಯನ್ನು ಎದುರಿಸುತ್ತಿದ್ದು, ಕಾಂಕ್ರೀಟ್ ಕಾಮಗಾರಿ ಕೈಗೊಳ್ಳುವುದು ಅಗತ್ಯವಾಗಿದೆ. ಚರಂಡಿ ಹಾಗೂ ಇನ್ನಿತರ ಕಾಮಗಾರಿಗಳಿಗಾಗಿ ಒಳರಸ್ತೆಯನ್ನು ಅಗೆದು ಹಾಗೆಯೇ ಬಿಡಲಾಗುತ್ತಿದ್ದು, ಇದು ಸಂಚಾರಕ್ಕೆ ತೊಂದರೆಯಾಗಿ ಪರಿಣಮಿಸಿದೆ. ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ ಸಾರ್ವಜನಿಕರು ತಮ್ಮ ಅಭಿಪ್ರಾಯಗಳನ್ನು 9900567000 ನಂಬರ್ಗೆ ಕಳುಹಿಸಬಹುದು.
– ಕೇಶವ ಕುಂದರ್
ಚಿತ್ರಗಳು: ಸತೀಶ್ ಇರಾ