ಮತ ಬೇಟೆಗಾಗಿ ಲ್ಯಾಪ್ಟಾಪ್ ವಿತರಿಸುತ್ತಿಲ್ಲ : ರಾಯರಡ್ಡಿ
Team Udayavani, Jan 7, 2018, 4:35 PM IST
ಮಂಗಳೂರು: ಶಿಕ್ಷಣಕ್ಕೆ ನೆರವಾ ಗಲು ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ನೀಡುತ್ತಿದ್ದೇವೆಯೇ ಹೊರತು ಮತದ ಬೇಟೆಗಾಗಿ ಅಲ್ಲ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಹೇಳಿದರು.
2016-17ನೇ ಸಾಲಿನ ಎಸ್.ಟಿ.ಟಿ., ಟಿ.ಎಸ್. ಪಿ. ಯೋಜನೆ ಅಡಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸರಕಾರಿ ಪಾಲಿಟೆಕ್ನಿಕ್ಗಳ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಶನಿವಾರ ನಗರದ ಪುರಭವನದಲ್ಲಿ ನಡೆದ ಉಚಿತ ಲ್ಯಾಪ್ಟಾಪ್ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೆಲವೊಂದು ರಾಜಕೀಯ ಪಕ್ಷಗಳು ರಾಜ್ಯ ಸರಕಾರದ ಈ ಮಹತ್ವಾಕಾಂಕ್ಷಿ ಯೋಜನೆಯಲ್ಲಿ 300 ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ಅಪಪ್ರಚಾರ ಮಾಡುತ್ತಿವೆ. ಮಕ್ಕಳ ಭವಿಷ್ಯದ ಮೇಲೆ ರಾಜಕೀಯ ಮಾಡುವುದು ಸರಿಯಲ್ಲ. ಒಂದು ವೇಳೆ ನನ್ನ ಮೇಲೆ ಅನುಮಾನವಿದ್ದರೆ ಸದನ ಸಮಿತಿ ರಚಿಸಿ ತನಿಖೆ ನಡೆಸಲಿ. ಅವ್ಯವಹಾರ ಸಾಬೀತಾದರೆ ತತ್ಕ್ಷಣವೇ ರಾಜೀನಾಮೆ ನೀಡಲು ಸಿದ್ಧನಿದ್ದೇನೆ ಎಂದು ಹೇಳಿದರು.
ಮುಂದಿನ ಒಂದು ವಾರದ ಒಳಗಾಗಿ ರಾಜ್ಯದ ಎಲ್ಲ ಸರಕಾರಿ ಕಾಲೇಜುಗಳಲ್ಲಿ ಓದುತ್ತಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದ ಒಟ್ಟಾರೆ 31,800 ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ನೀಡುತ್ತಿದ್ದೇವೆ. ಈ ಯೋಜನೆಯನ್ನು ಮತ್ತಷ್ಟು ವಿಸ್ತರಿಸಿ, ಮಾರ್ಚ್ ತಿಂಗಳಲ್ಲಿ 1 ಲಕ್ಷದ 50 ಸಾವಿರ ಸಾಮಾನ್ಯ ವರ್ಗದ ಮಕ್ಕಳಿಗೆ ಲ್ಯಾಪ್ಟಾಪ್ ನೀಡಲಿದ್ದೇವೆ ಎಂದರು.
ಭಾರತ ಯುವ ರಾಷ್ಟ್ರವಾಗಿದ್ದು, ಜ್ಞಾನಾರ್ಜನೆ ಯಿಂದ ಬೆಳವಣಿಗೆ ಸಾಧ್ಯ. ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಮಹತ್ವವನ್ನು ನೀಡಿ, ಹೆಚ್ಚು ಮಂದಿ ಪದವೀ ಧರರಾಗಬೇಕು ಎಂಬುದು ಸರಕಾರದ ಉದ್ದೇಶ. ದೇಶದಲ್ಲಿ 100ರಲ್ಲಿ ಕೇವಲ 24 ಮಂದಿ ಮಾತ್ರ ಪದ ವೀಧರರಾಗುತ್ತಿದ್ದಾರೆ. ರಾಜ್ಯದಲ್ಲಿ ಶೇ. 27.3 ಇದ್ದು, ಇದನ್ನು ಮುಂದಿನ 5 ವರ್ಷಗಳಲ್ಲಿ ಶೇ. 40ಕ್ಕೆ ಏರಿಸುವ ಯೋಜನೆ ಸರಕಾರದ್ದು ಎಂದರು.
ವಿಶ್ವವಿದ್ಯಾನಿಲಯಗಳ ಸುಧಾರಣೆಗೆ ಹೆಚ್ಚಿನ ಗಮನ ನೀಡುತ್ತಿದ್ದೇವೆ. ರಾಜ್ಯದ 412 ಸರಕಾರಿ ಪದವಿ ಕಾಲೇಜುಗಳಿಗೆ 300 ಕೋಟಿ ರೂ. ವೆಚ್ಚದಲ್ಲಿ ಮೂಲಸೌಕರ್ಯ ಒದಗಿಸುತ್ತೇವೆ. ರಾಷ್ಟ್ರದಲ್ಲಿ ಮೊದಲ ಬಾರಿಗೆ ಸನಿವಾಸ ಕಾಲೇಜು ತೆರೆಯುತ್ತಿ ದ್ದೇವೆ. ಮೊದಲ ಹಂತದಲ್ಲಿ 16 ಕಾಲೇಜು ತೆರೆಯುತ್ತಿದ್ದು, ಮುಂದಿನ 10 ವರ್ಷದಲ್ಲಿ 175 ಕಾಲೇಜು ಪ್ರಾರಂಭಿಸುತ್ತೇವೆ ಎಂದು ತಿಳಿಸಿದರು.
ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಮಾತನಾಡಿ, ದಕ್ಷಿಣ ಕನ್ನಡ ಬುದ್ಧಿವಂತರ ಜಿಲ್ಲೆ. ಅದರ ಜತೆಗೆ ಮತೀಯ ಸೂಕ್ಷ್ಮ ಜಿಲ್ಲೆ ಎಂಬ ಹಣೆಪಟ್ಟಿಯೂ ಇದೆ. ತಿಳುವಳಿಕೆ ಇರುವವರಿಂದಲೇ ಮತೀಯ ಸಾಮರಸ್ಯ ಕೆಡುತ್ತಿದೆ. ವಿದ್ಯಾರ್ಥಿಗಳು ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ದೇಶದ ಆರ್ಥಿಕತೆ, ಸಾಮಾಜಿಕ ಬದಲಾವಣೆ ವಿದ್ಯಾರ್ಥಿ ಗಳಿಂದ ಸಾಧ್ಯ ಎಂದರು.
ದಕ್ಷಿಣ ಕನ್ನಡ ಜಿಲ್ಲೆಯ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸರಕಾರಿ ಪಾಲಿಟೆಕ್ನಿಕ್ಗಳ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಒಟ್ಟಾರೆ 650 ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ವಿತರಿಸಲಾಯಿತು. ವೇದಿಕೆಯಲ್ಲಿ ಶಾಸಕರಾದ ಜೆ.ಆರ್. ಲೋಬೋ, ಬಿ.ಎ. ಮೊದಿನ್ ಬಾವಾ, ಮಂಗಳೂರು ವಿ.ವಿ. ಕುಲಪತಿ ಪ್ರೊ| ಕೆ. ಬೈರಪ್ಪ, ಮಂಗಳೂರು ಮೇಯರ್ ಕವಿತಾ ಸನಿಲ್, ಮಂಗಳೂರು ತಾ.ಪಂ. ಅಧ್ಯಕ್ಷ ಮಹಮ್ಮದ್ ಮೋನು, ಕಾಲೇಜು ಶಿಕ್ಷಣ ಇಲಾಖೆ
ಪ್ರಾದೇಶಿಕ ಕಚೇರಿ ಜಂಟಿ ನಿರ್ದೇಶಕ ಪ್ರೊ| ಉದಯಶಂಕರ್ ಎಚ್. ಉಪಸ್ಥಿತರಿದ್ದರು. ಬ್ರ್ಯಾಂಡೆಡ್ ಲ್ಯಾಪ್ಟಾಪ್
ವಿದ್ಯಾರ್ಥಿಗಳಿಗೆ ಬ್ರ್ಯಾಂಡೆಡ್ ಲ್ಯಾಪ್ ಟಾಪ್ಗ್ಳನ್ನೇ ನೀಡಲಾಗಿದೆ.
ಪೆಂಟಿಯಮ್-3 ಪ್ರೊಸೆಸರ್ ಇದಾಗಿದೆ. ಟೆಂಡರ್ನಲ್ಲಿ ಏಸರ್ ಸಂಸ್ಥೆಗೆ ಈ ಯೋಜನೆ ಹಸ್ತಾಂತರಿಸಿದ್ದು, ಈ ಲ್ಯಾಪ್
ಟಾಪ್ನ ಮೂಲ ಬೆಲೆ 21,300 ರೂ. ಆದರೆ ಟೆಂಡರ್ನಲ್ಲಿ ಸರಕಾರಕ್ಕೆ 14,490 ರೂ.ಗೆ ಒದಗಿದೆ. ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪನ್ನು ಈ ಹಿಂದೆಯೇ ವಿತರಿಸಬೇಕಿತ್ತು. ಆದರೆ ಕೆಲವು ಅಧಿಕಾರಿಗಳ ಬೇಜವಾಬ್ದಾರಿ
ತನದಿಂದ ವಿಳಂಬವಾಯಿತು.
– ಸಚಿವ ಬಸವರಾಜ ರಾಯರಡ್ಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?
EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ
Vijay Mallya ಹಸ್ತಾಂತರಕ್ಕೆ ಫ್ರಾನ್ಸ್ನೊಂದಿಗೆ ಭಾರತ ಮಾತುಕತೆ
ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್ಕಮ್ ಹೊಟೇಲ್ನಲ್ಲಿ ವ್ಯವಸ್ಥೆ
VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್