‘ವಿದ್ಯಾರ್ಥಿಗಳು ಪೊಲೀಸ್ ಕೆಲಸದತ್ತ ಆಸಕ್ತಿ ಹೊಂದಲಿ’
Team Udayavani, Oct 29, 2017, 10:07 AM IST
ಮಹಾನಗರ: ವಿದ್ಯಾರ್ಥಿಗಳು ಪೊಲೀಸ್ ಕೆಲಸದತ್ತ ಹೆಚ್ಚಿನ ಆಸಕ್ತಿ ಹೊಂದಬೇಕು ಎಂದು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ಅಪರಾಧ ಮತ್ತು ಸಂಚಾರ ವಿಭಾಗದ ಉಪ ಆಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರು ತಿಳಿಸಿದರು.
ನಗರ ಸೆಂಟ್ರಲ್ ಉಪ ವಿಭಾಗ ಪೊಲೀಸರು ಶನಿವಾರ ನಗರದ ಲೂಡ್ಸ್ ಸೆಂಟ್ರಲ್ ಶಾಲೆಯಲ್ಲಿ ಆಯೋಜಿದ್ದ ‘ಮಾದಕ ವಸ್ತು, ರಸ್ತೆ ಸುರಕ್ಷತೆ ಬಗ್ಗೆ ಮಾಹಿತಿ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪೊಲೀಸರು ಇಲಾಖೆಯು ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಲು ಸದಾ ಮುಂದಿದೆ ಎಂದರು.
ಸುರತ್ಕಲ್ ಉತ್ತರ ಸಾರಿಗೆ ವಿಭಾಗದ ಇನ್ಸ್ಪೆಕ್ಟರ್ ಮಂಜುನಾಥ್ ರಸ್ತೆ ಸುರಕ್ಷಾ ನಿಯಮಗಳ ಬಗ್ಗೆ ವಿವರಿಸಿ, ಸವಾರರು ಮೊಬೈಲ್ನಲ್ಲಿ ಮಾತನಾಡಿ ವಾಹನಗಳಲ್ಲಿ ಸವಾರಿ ಮಾಡಬಾರದು.
ಸೀಟ್ಬೆಲ್ಟ್ ಧರಿಸಿ ಡ್ರೈವಿಂಗ್ ಮಾಡಬೇಕು ಎಂದು ಮೋಟರ್ ವಾಹನ ಕಾಯ್ದೆಯಲ್ಲಿ ಉಲ್ಲೇಖೀಸಿದ್ದು, ಇಲ್ಲವಾದರೆ 100 ರೂ. ದಂಡ ವಿಧಿಸಬಹುದು ಎಂದರು.
ಹೆಲ್ಮೆಟ್ ಧರಿಸಿ
ಶಾಲಾ ಕಾಲೇಜುಗಳಿಗೆ ವಾಹನಗಳಲ್ಲಿ ಬರುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಲೈಸನ್ಸ್ ಹೊಂದಿರಲೇಬೇಕು. ಬೈಕ್ನಲ್ಲಿ ಬರುವವರು ಹೆಲ್ಮೆಟ್ ಧರಿಸಲೇಬೇಕು. ಇದಕ್ಕೆ ಸಂಬಂಧಫಟ್ಟಂತೆ ಈಗಾಗಲೇ ಶಾಲಾ, ಕಾಲೇಜುಗಳಿಗೆ ಸುತ್ತೋಲೆ ಕಳುಹಿಸಲಾಗಿದೆ ಎಂದು ವಿವರಿಸಿದರು. ಇದೇ ವೇಳೆ ಮಂಗಳೂರು ಭ್ರಷ್ಟಾಚಾರ ವಿರೋಧಿ ವಿಭಾಗದ ಡಿವೈಎಸ್ಪಿ ಸುಧೀರ್ ಹೆಗ್ಡೆ, ಇನ್ಸ್ಪೆಕ್ಟರ್ ಯೋಗೀಶ್ ಕುಮಾರ್, ಕದ್ರಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್
ಮಾರುತಿ ನಾಯಕ್ ಸಹಿತ ಶಾಲೆಯವಿದ್ಯಾರ್ಥಿಗಳು ಭಾಗವಹಿಸಿದ್ದರು.
ನಿಯಮ ಉಲ್ಲಂಸಿದರೆ ಕ್ರಮ
ನಮ್ಮ ಸುರಕ್ಷತೆಯ ಬಗ್ಗೆ ನಾವು ಗಮನ ನೀಡಬೇಕು. ಪಾದಾಚಾರಿಗಳು ರಸ್ತೆಯ ಬಲ ಭಾಗದಲ್ಲಿ ನಡೆಯಬೇಕು. ಇದರಿಂದ ಅಪಘಾತವಾಗುವುದನ್ನು ತಡೆಯಲು ಸಾಧ್ಯ. ವಾಹನಗಳಲ್ಲಿ ಸಂಚರಿಸುವ ಮಂದಿ ಕಡ್ಡಾಯವಾಗಿ ಪರವಾನಗಿ ಇಟ್ಟುಕೊಂಡಿರಬೇಕು. ಬೈಕ್ನಲ್ಲಿ ಸಂಚರಿಸುವವರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ನಗರದ ಅನೇಕ ಕಡೆಗಳಲ್ಲಿ ಸಿಸಿ ಕೆಮರಾಗಳನ್ನು ಅಳವಡಿಸಲಾಗಿದೆ. ಒಂದು ವೇಳೆ ನಿಯಮ ಉಲ್ಲಂಘಿಸಿದರೆ, ವಾಹನದ ಮಾಲಕನ ಮನೆಗೆ ನೋಟಿಸ್ ಬರುತ್ತದೆ.
– ಮಂಜುನಾಥ್,
ಸುರತ್ಕಲ್ ಉತ್ತರ ಸಾರಿಗೆ ವಿಭಾಗದ ಇನ್ಸ್ಪೆಕ್ಟರ್