ಮೂಲಸೌಲಭ್ಯ ಒದಗಿಸಲು ವಿಫಲ: ಆರೋಪ
Team Udayavani, Nov 24, 2018, 11:06 AM IST
ಬೆಳ್ತಂಗಡಿ: ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ವಾಸಿಸುತ್ತಿರುವ ಮೂಲ ನಿವಾಸಿಗಳಿಗೆ ಮೂಲಭೂತ ಸೌಲಭ್ಯ ಒದಗಿಸುವಲ್ಲಿ ಇಲಾಖೆಗಳು ವಿಫಲವಾಗಿವೆ. ಯಾವುದೇ ಯೋಜನೆ ಬಂದರೂ ಅರಣ್ಯ ಇಲಾಖೆ ಅದಕ್ಕೆ ಅಡ್ಡಿಪಡಿಸುತ್ತಿದೆ. ಸಭೆಗಳು ನಡೆದರೂ ಯಾವುದೂ ಕಾರ್ಯರೂಪಕ್ಕೆ ಬರುತ್ತಿಲ್ಲ ಎಂದು ಬೆಳ್ತಂಗಡಿಯಲ್ಲಿ ಶುಕ್ರವಾರ ಜರಗಿದ ಮಲೆಕುಡಿಯ ಸಮುದಾಯದ ಹಾಗೂ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವಾಸಿಗಳ ಕುಂದುಕೊರತೆ ಸಭೆಯಲ್ಲಿ ಸಮುದಾಯದ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.
ಬೆಳ್ತಂಗಡಿ ಮಿನಿ ವಿಧಾನಸೌಧದಲ್ಲಿ ತಹಶೀಲ್ದಾರ್ ಮದನ್ ಮೋಹನ್ ಅವರ ಅಧ್ಯಕ್ಷತೆಯಲ್ಲಿ ಕುಂದುಕೊರತೆ ಪರಿಶೀಲನ ಸಭೆ ಜರಗಿತು.ಯಂತ್ರಗಳನ್ನು ಬಳಸಿ ರಸ್ತೆಗಳನ್ನು ದುರಸ್ತಿ ಮಾಡಲು ಅರಣ್ಯ ಇಲಾಖೆ ಅಡ್ಡಿಪಡಿಸುತ್ತಿರುವ ಬಗ್ಗೆ ಜಯಾನಂದ ಪಿಲಿಕಳ ಹಾಗೂ ಪರಮೇಶ್ ತಿಳಿಸಿದರು. ಆದರೆ ಯಂತ್ರಗಳ ಬಳಕೆ ಸಾಧ್ಯವಾಗುವುದಿಲ್ಲ ಎಂದು ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ವಲಯಾಧಿಕಾರಿ ಕಿರಣ್ ತಿಳಿಸಿದರು.
ಅರಣ್ಯ ಇಲಾಖೆಯವರೇ ಕುದುರೆಮುಖ ರಾಷ್ಟ್ರೀಯ ಉದ್ಯಾನ ವನದೊಳಗೆ ಯಂತ್ರಗಳನ್ನು ಬಳಸಿ ಹೊಸ ರಸ್ತೆ ಮಾಡುತ್ತಿದ್ದಾರೆ. ಅವರಿಗೆ ಅವಕಾಶವಿದೆಯಾದರೆ ನಮಗೆ ಯಾಕಿಲ್ಲ ಎಂದು ಜನರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಯಾವುದೇ ಇಲಾಖೆಯಿಂದ ಅನುದಾನ ಮಂಜೂರಾಗಬೇಕಾದರೆ ಅರಣ್ಯ ಇಲಾಖೆಯವರ ಎನ್ಒಸಿ ಅಗತ್ಯವಾಗುತ್ತದೆ, ಅದರಿಂದಾಗಿ ಯಾವುದೇ ಕೆಲಸಗಳು ಆಗುತ್ತಿಲ್ಲ ಎಂದು ತಿಳಿಸಿದಾಗ, ಪ್ರತಿ ಕ್ರಿ ಯಿಸಿದ ತಹಶೀಲ್ದಾರ್ ಅವರು ತಾಲೂಕಿನಲ್ಲಿ ಈ ರೀತಿಯಾಗಿ ಆಗಬೇಕಾಗಿರುವ ರಸ್ತೆಗಳ ಪಟ್ಟಿಯನ್ನು ತಯಾರಿಸಿ ಅದನ್ನು ಜಿಲ್ಲಾಧಿಕಾರಿಯವರಿಗೆ ನೀಡಿ, ಅವರ ಮೂಲಕವಾಗಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಂದ ಅನುಮತಿ ಪಡೆಯಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ವಿದ್ಯುತ್ ಸಂಪರ್ಕ ಸಿಕ್ಕಿಲ್ಲ
ಕುದುರೆಮುಖ ರಾಷ್ಟ್ರೀಯ ಉದ್ಯಾನವನದೊಳಗೆ ಇರುವ ಮೂರು ಪ್ರದೇಶಗಳಿಗೆ ವಿದ್ಯುತ್ ಸಂಪರ್ಕಕ್ಕೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ವರ್ಷಗಳೇ ಕಳೆದರೂ ಇನ್ನೂ ಮಂಜೂರಾತಿ ದೊರೆತಿಲ್ಲ, ಈ ಬಗ್ಗೆ ಮಾಹಿತಿ ಇಲ್ಲವಾಗಿದೆ ಎಂದು ತಿಳಿಸಿದಾಗ ಈ ಅರ್ಜಿಗಳು ಪರಿಶೀಲನೆಯ ಹಂತದಲ್ಲಿದ್ದು ಅನುಮೋದನೆ ದೊರೆಕಲಿದೆ ಎಂದು ಮೆಸ್ಕಾಂ ಎಂಜಿನಿಯರ್ ಶಿವಶಂಕರ್ ತಿಳಿಸಿದರು.
ನೆರಿಯ ಗ್ರಾಮದ ಅಂಬಟೆಮಲೆಯಲ್ಲಿ 33 ಕುಟುಂಬಗಳಿಗೆ 1985- 86ರಲ್ಲಿ ಜಮೀನು ಮಂಜೂರಾಗಿದ್ದು ಜಾಗದ ಹಕ್ಕುಪತ್ರಗಳು ಸಿಕ್ಕಿವೆ. ಆದರೆ ಸೂಕ್ತ ರಸ್ತೆ ಸಂಪರ್ಕ ಇಲ್ಲದ ಕಾರಣ ಕೃಷಿ ಮಾಡಲು ಸಾಧ್ಯವಾಗಿಲ್ಲ ಎಂದು ಲಕ್ಷ್ಮಣ ಮಲೆಕುಡಿಯ ಹೇಳಿದರು.
ಇದಕ್ಕೆ ಉತ್ತರಿಸಿದ ತಹಶೀಲ್ದಾರ್ ರಸ್ತೆ ವ್ಯವಸ್ಥೆ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಒಳಗೆ ಹಾಗೂ ಅರಣ್ಯಕ್ಕೆ ತಾಗಿಕೊಂಡಿರುವ ಇತರೆಡೆಗಳಲ್ಲಿ ಜಮೀನಿನ ಬಗ್ಗೆ ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆಯ ನಡುವೆ ಗೊಂದಲವಿದ್ದು ಇದರಿಂದಾಗಿ ಮೂಲನಿವಾಸಿಗಳಿಗೆ ಜಮೀನು ಮಂಜೂರಾಗುತ್ತಿಲ್ಲ ಎಂದು ತಾ. ಪಂ. ಸದಸ್ಯ ಜಯರಾಮ ಹಾಗೂ ಇತರರು ತಿಳಿಸಿದರು. ಇಂತಹ ಸಂದರ್ಭದಲ್ಲಿ ಜಂಟಿ ಸರ್ವೆ ನಡೆಸಿದರೆ ಮಾತ್ರ ಗೊಂದಲ ನಿವಾರಣೆ ಆಗಲಿದೆ ಎಂದು ತಹಶೀಲ್ದಾರ್ ತಿಳಿಸಿದರು.
ಸಮಾಜ ಕಲ್ಯಾಣ ಹಾಗೂ ಐಟಿಡಿಪಿ ಅಧಿಕಾರಿಗಳು ಮೂಲನಿವಾಸಿಗಳು ವಾಸಿಸುತ್ತಿರುವ ಪ್ರದೇಶಗಳಿಗೆ ತೆರಳಿ ಅಲ್ಲಿನ ಸ್ಥಿತಿಗತಿಗಳ ಬಗ್ಗೆ ತಿಳಿದುಕೊಂಡು ಕಾರ್ಯ ನಿರ್ವಹಿಸಬೇಕು. ಎಲ್ಲ ಗ್ರಾಮ ಪಂಚಾಯತುಗಳಿಗೂ ಭೇಟಿ ನೀಡಿ ಅವರ ಕುಂದುಕೊರತೆಗಳನ್ನು ಆಲಿಸಬೇಕು ಎಂಧು ಅಧಿಕಾರಿಗಳಿಗೆ ತಹಶೀಲ್ದಾರ್ ಸೂಚಿಸಿದರು.
ತಾಲೂಕು ಸಮಾಜ ಕಲ್ಯಾಣಾಧಿಕಾರಿ ಎಚ್. ಎಂ. ಪಾಟೀಲ್, ಐಟಿಡಿಪಿ ವಿಸ್ತರಣಾಧಿಕಾರಿ ಹೇಮಲತಾ ಹಾಗೂ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.
ಬದಲಿ ರಸ್ತೆಗೆ ತಡೆಯಾಜ್ಞೆ ಸಾಧ್ಯತೆ
ಮಲೆಕುಡಿಯ ಸಮುದಾಯದ ಮೂಲಭೂತ ಸೌಲಭ್ಯಗಳಿಗೆಂದು ಬಿಡುಗಡೆಯಾಗುವ ಹಣ ಯಾವದೇ ಕಾರಣಕ್ಕೂ ಇತರೆಡೆಗೆ ವರ್ಗಾವಣೆಯಾಗಬಾರದು ಈ ಬಗ್ಗೆ ನಿಗಾ ವಹಿಸುವಂತೆಯೂ ಅಧಿಕಾರಿಗಳಿಗೆ ಸೂಚಿಸಲಾಯಿತು. ನೆರಿಯ ಗ್ರಾಮದ ಬಾಂಜಾರುಮಲೆಗೆ ಸಂಪರ್ಕ ಕಲ್ಪಿಸುವ ಬದಲಿ ರಸ್ತೆಗೆ ಸರ್ವೆ ನಡೆಸುವಂತೆ ಜಿಲ್ಲಾಧಿಕಾರಿಯವರು ಸೂಚನೆ ನೀಡಿದ್ದರು ಆದರೆ ಈಗ ಸರ್ವೆ ನಡೆಸುವುದಕ್ಕೆ ಸ್ಥಳೀಯ ಭೂಮಾಲಕ ಗೋಪಾಲ ಗೌಡ ಅವರು ವಿರೋಧ ವ್ಯಕ್ತಪಡಿಸಿ ತಡೆಯಾಜ್ಞೆ ತರುವ ಕಾರ್ಯ ಮಾಡಿದ್ದಾರೆ ಎಂದು ಸಭೆಗೆ ತಿಳಿಸಲಾಯಿತು. ಈ ಬಗ್ಗೆ ಕೂಡಲೇ ಜಿಲ್ಲಾಧಿಕಾರಿಯವರನ್ನು ಸಂಪರ್ಕಿಸಿ ಅಗತ್ಯಕ್ರಮ ಕೈಗೊಳ್ಳುವುದಾಗಿ ತಹಶೀಲ್ದಾರ್ ತಿಳಿಸಿದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Neha ಹತ್ಯೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ: ಸರಕಾರದ ವಿರುದ್ಧ ಆರ್.ಅಶೋಕ್ ಕಿಡಿ
Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೊಟೀಸ್
Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!
Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ
Sandalwood: ಧೀರೇನ್ ರೀ ಇಂಟ್ರೊಡಕ್ಷನ್