ಬಹುವರ್ಷಗಳ ಕನಸು ನನಸಾಗುವತ್ತ:ಮಂಗಳೂರು ವಿವಿ ಘಟಕ ಸ್ಥಾಪನೆಗೆ ಸಿದ್ಧತೆ
Team Udayavani, Aug 13, 2017, 6:45 AM IST
ನೆಲ್ಯಾಡಿ: ಗ್ರಾಮೀಣ ಭಾಗದ ಬಹುವರ್ಷಗಳ ಕನಸು ಇದೀಗ ನನಸಾಗುವ ಹಂತದಲ್ಲಿದೆ. ನೆಲ್ಯಾಡಿಯಲ್ಲಿ ವಿ.ವಿ.ಘಟಕ ಸ್ಥಾಪನೆಗೆ ಮಂಜೂರಾತಿ ದೊರೆತಿರುವುದು ಈ ಭಾಗದ ವಿದ್ಯಾರ್ಥಿಗಳ ಹಾಗೂ ಹೆತ್ತವರ ಸಂತಸಕ್ಕೆ ಕಾರಣವಾಗಿದೆ. ಉದ್ದೇಶಿತ ನೆಲ್ಯಾಡಿ ವಿವಿ ಘಟಕಕ್ಕೆ ಸ್ಥಳ ಮಂಜೂರಾಗಿದ್ದು, ಇತ್ತೀಚೆಗೆ ಮಂಗಳೂರು ವಿವಿ ಕುಲಪತಿಯವರು ನೆಲ್ಯಾಡಿ ಗ್ರಾ.ಪಂ.ಗೆ ಭೇಟಿ ನೀಡಿ ಸಭೆ ನಡೆಸಿ, ಸ್ಥಳಪರಿಶೀಲನೆ ನಡೆಸಿದ್ದರ ಪರಿಣಾಮ ಘಟಕ ಸ್ಥಾಪನೆಯ ಮೊದಲ ಹಂತ ಈಡೇರಿದಂತಾಗಿದೆ.
ತೊಟ್ಟಿಲಗುಂಡಿ ಬಳಿ ವಿವಿ ಘಟಕ ನಿರ್ಮಾಣ
ನೆಲ್ಯಾಡಿ ಪೇಟೆಯಿಂದ ಸುಮಾರು 4.5 ಕಿ.ಮೀ. ದೂರದ ತೊಟ್ಟಿಲಗುಂಡಿಯಲ್ಲಿ ವಿವಿ ಘಟಕ ಸ್ಥಾಪನೆಗೆ 25 ಎಕ್ರೆ ಸ್ಥಳ ಮಂಜೂರಾಗಿದೆ. ಪೇಟೆ ಯಿಂದ 1 ಕಿ.ಮೀ. ಹೆದ್ದಾರಿಯಲ್ಲಿ ಸಾಗಿ ಬಳಿಕ ಮಾದೇರಿ ಮಾರ್ಗದಲ್ಲಿ 3 ಕಿ.ಮೀ. ಹೋದರೆ ಉದ್ದೇಶಿತ ಘಟಕ ತಲುಪಬಹುದು. ಈ ಸ್ಥಳವು ಸರಕಾರಿ ಜಾಗವಾಗಿದ್ದು, ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆಯು ನಡುವೆ ಸ್ಥಳ ಯಾರಿಗೆ ಸೇರಿದ್ದು ಎಂಬುದರ ಬಗ್ಗೆ ಗೊಂದಲವಿತ್ತು. ಬಳಿಕ ನೆಲ್ಯಾಡಿ ತಾ.ಪಂ. ಸದಸ್ಯೆ ಉಷಾ ಅಂಚನ್ ಅವರ ಮಧ್ಯ ಪ್ರವೇಶದ ಫಲವಾಗಿ ಜಂಟಿ ಸರ್ವೆ ನಡೆದು ಇದೀಗ ಶೈಕ್ಷಣಿಕ ಉದ್ದೇಶಕ್ಕೆ ಜಾಗ ಮಂಜೂರಾಗಿದೆ. ಈ 25 ಎಕ್ರೆ ಸ್ಥಳದ ಸುತ್ತಲೂ ಜನವಸತಿ ಪ್ರದೇಶವಿದ್ದು, ಘಟಕದ ಸುತ್ತಲೂ ಮಾರ್ಗ ನಿರ್ಮಿಸುವ ಮೂಲಕ ಜನರಿಗೆ ಹೆಚ್ಚು ಅನುಕೂಲವಾಗುವಂತೆ ಮಾಡುವುದಾಗಿ ಇಲ್ಲಿಗೆ ಭೇಟಿ ನೀಡಿದ್ದ ಕುಲಪತಿಯವರು ತಿಳಿಸಿದ್ದಾರೆ.
ಹಂತಹಂತವಾಗಿ ನಿರ್ಮಾಣ
ಉದ್ದೇಶಿತ ವಿವಿ ಘಟಕ ನಿರ್ಮಾಣಕ್ಕೆ ದೊಡ್ಡ ಮೊತ್ತದ ಹಣ ಬೇಕಿದೆ. ಹಾಗಾಗಿ ಆರಂಭದಲ್ಲಿ ಸರಳ ಕಟ್ಟಡಗಳನ್ನು ನಿರ್ಮಿಸಲಾಗುವುದು. ಉಳಿದಂತೆ ಹಂತ ಹಂತವಾಗಿ ಇತರೆ ಕಟ್ಟಡಗಳ ಕಾಮಗಾರಿ ಕೈಗೆತ್ತಿಕೊಂಡು ಪೂರ್ಣ ಪ್ರಮಾಣದಲ್ಲಿ ಘಟಕ ಅಸ್ತಿತ್ವಕ್ಕೆ ಬರಲಿದೆ. ಅಕ್ಟೊಬರ್ನಲ್ಲಿ ಮಾನ್ಯ ಮುಖ್ಯ ಮಂತ್ರಿಯವರೇ ಶಿಲಾನ್ಯಾಸ ನೆರವೇರಿಸುವ ಅಭಿಪ್ರಾಯವಿದ್ದು, ಇಲ್ಲಿನ ಘಟಕ ಸ್ಥಾಪನೆಯ ಕಾರ್ಯದಲ್ಲಿ ವಿಶೇಷ ಮುತುವರ್ಜಿ ಕೈಗೊಳ್ಳುವ ಸಂಭವ ಇದೆ. ಗ್ರಾಮೀಣ ಭಾಗದ
ವಿದ್ಯಾರ್ಥಿಗಳಿಗೆ ಅನುಕೂಲ
ನೆಲ್ಯಾಡಿಗೆ ಹೊಂದಿಕೊಂಡಂತೆ ನೆಲ್ಯಾಡಿ, ಕೌಕ್ರಾಡಿ, ಶಿಶಿಲ, ಶಿಬಾಜೆ, ಅರಸಿನ ಮಕ್ಕಿ, ಕೊಕ್ಕಡ, ಪಟ್ಟೂರು, ಪಟ್ರಮೆ, ಗೋಳಿತ್ತೂಟ್ಟು, ಕಾಂಚನ, ಹಿರೇಬಂಡಾಡಿ, ವಳಾಲು, ಆಲಂತಾಯ, ರಾಮಕುಂಜ, ಕುಂತೂರು, ಕಡಬ, ಮರ್ದಾಳ, ಇಚಿಲಂಪಾಡಿ, ಕೊಣಾಲು, ಕೊಪ್ಪ- ಮಾದೇರಿ, ಪುಚ್ಚೇರಿ, ಪಡುಬೆಟ್ಟು, ಬಲ್ಯ, ಉದನೆ, ಶಿರಾಡಿ, ಗುಂಡ್ಯ, ರೆಖ್ಯಾ, ಮೊದಲಾದ ಪ್ರದೇಶಗಳ ಸಾವಿರಾರು ವಿದ್ಯಾರ್ಥಿಗಳಿಗೆ ಈ ಘಟಕ ಸ್ಥಾಪನೆಯಿಂದ ಪ್ರಯೋಜನವಾಗಲಿದೆ.
ಇಲ್ಲಿಯವರೆಗೆ ಈ ಭಾಗಗಳ ವಿದ್ಯಾರ್ಥಿ ಗಳು ಹೆಚ್ಚಿನ ಶೈಕ್ಷಣಿಕ ತರಗತಿಗಳಿಗೆ ದೂರದ ಪುತ್ತೂರನ್ನು ಆಶ್ರಯಿಸಬೇಕಾದ ಅನಿವಾರ್ಯದಿಂದ ತ್ರಾಸದಾಯಕ ಪರಿಸ್ಥಿತಿ ನಿರ್ಮಾಣವಾಗಿತ್ತು. ಅವರಿಗೆ ಪ್ರಯಾಣ ಬೆಳೆಸುವುದೇ ದಿನನಿತ್ಯದ ಬಹುದೊಡ್ಡ ಸಮಸ್ಯೆಯಾಗಿತ್ತು. ಈ ಘಟಕ ಸ್ಥಾಪನೆಯಿಂದ ಈ ಭಾಗದ ಉನ್ನತ ಶಿಕ್ಷಣ ಆಕಾಂಕ್ಷಿಗಳಿಗೆ ಹೆಚ್ಚು ಅನುಕೂವಾಗಲಿದೆ. ಹೆಚ್ಚಿನ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ಪ್ರವೇಶಿಸಬಹುದು ಎಂಬುದು ಸ್ಥಳೀಯರ ಅಭಿಪ್ರಾಯ.
ಗ್ರಾಮೀಣರಿಗೆ ಅನುಕೂಲ
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಸಂಕಷ್ಟದ ಬಗ್ಗೆ ಹಲವು ವರ್ಷಗಳಿಂದ ಮಾಡಿದ ಹೋರಾಟದ ಫಲವಾಗಿ ಈಗ ವಿ.ವಿ. ಘಟಕ ಸ್ಥಾಪನೆಗೆ ಮಂಜೂರಾತಿ ದೊರೆತು ಅಕ್ಟೋಬರ್ ವೇಳೆಗೆ ಶಿಲಾನ್ಯಾಸವಾಗಲಿದೆ. 2 ವರ್ಷಗಳ ಹಿಂದೆ ಈ ಜಾಗ ಅಳತೆ ಮಾಡಲು ಬಂದ ಸರ್ವೆ ಅಧಿಕಾರಿಗಳ ಹಾಗೂ ಅರಣ್ಯ ಅಧಿಕಾರಿಗಳ ಸಮಕ್ಷಮದಲ್ಲೇ ಸರ್ವೆ ವಿರೋಧಿಸಿ ಕಲ್ಲೆಸೆತ ನಡೆಸಿದ ಘಟನೆಯಿಂದ ನನ್ನ ತಲೆಗೆ ಕಲ್ಲೇಟು ಬಿದ್ದರೂ ಪುನಃ ಸತತ ಹೋರಾಟದ ಫಲವಾಗಿ ಇಂದು ಸಮಸ್ಯೆ ಪರಿಹಾರವಾಗಿರುವುದು ಸಂತಸ ತಂದಿದೆ.
ಉಷಾ ಅಂಚನ್, ತಾ.ಪಂ. ಸದಸ್ಯೆ, ನೆಲ್ಯಾಡಿ
ಗುರುಮೂರ್ತಿ ಎಸ್. ಕೊಕ್ಕಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು
Road Mishap;ಅರಂತೋಡು: ಕಾರು – ಬೈಕ್ ಢಿಕ್ಕಿ: ಸವಾರ ಸಾವು
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು