“ಯುವ ಕಾಂಗ್ರೆಸ್ಗೆ ಅವಕಾಶ ನೀಡಿದರೆ ಕ್ಷೇತ್ರ ಬಿಟ್ಟುಕೊಡುವೆ’
Team Udayavani, Nov 3, 2017, 6:20 AM IST
ಮಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಟಿಕೆಟ್ ಹಂಚಿಕೆ ವಿಚಾರದಲ್ಲಿ ಕುತೂಹಲ ಕೆರಳಿಸಿರುವ ಕ್ಷೇತ್ರ ಮೂಲ್ಕಿ-ಮೂಡಬಿದಿರೆ. ನಾಲ್ಕು ಬಾರಿ ಸ್ಪರ್ಧಿಸಿಗೆದ್ದಿರುವ ಹಾಲಿ ಶಾಸಕ ಕೆ. ಅಭಯಚಂದ್ರ ಜೈನ್ ಅವರು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂಬ ಮಾತು ಕೇಳಿಬರುತ್ತಿದೆ. ಯುವ ಕಾಂಗ್ರೆಸ್ನ ಮುಖಂಡ ಮಿಥುನ್ ರೈ ಅವರಿಗೆ ಕ್ಷೇತ್ರ ಬಿಟ್ಟು ಕೊಡುತ್ತಾರೆ ಎಂಬ ಗುಸು-ಗುಸು ಇದೆ. ಈ ಬೆಳವಣಿಗೆಗಳ ನಡುವೆ ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ ಅವರು ಕೂಡ ಆ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದು, ಮೂಡಬಿದಿರೆಯಲ್ಲಿ ಹೆಚ್ಚಾಗಿ ಓಡಾಡುತ್ತಿದ್ದಾರೆ ಎಂಬ ಮಾತುಗಳಿವೆ. ಈ ಬೆಳವಣಿಗೆಗಳ ಮಧ್ಯೆ ಶಾಸಕ ಅಭಯಚಂದ್ರ ಜೈನ್ ಅವರು ಉದಯವಾಣಿಯೊಂದಿಗೆ ಮಾತನಾಡಿದ್ದಾರೆ. ಅವರೊಂದಿಗೆ ನಡೆಸಿದ ಸಂದರ್ಶನ ಇಲ್ಲಿದೆ.
ನಾಲ್ಕೂವರೆ ವರ್ಷಗಳಲ್ಲಿ ಕ್ಷೇತ್ರದ ಅಭಿವೃದ್ಧಿ ನಿಮ್ಮ ನಿರೀಕ್ಷೆಯಂತೆ ಆಗಿದೆಯೇ ?
ಒಳ್ಳೆಯ ಕೆಲಸಗಳು ಆಗಿವೆ. ಹಿಂದಿನ ಬಿಜೆಪಿ ಸರಕಾರದ ಆಡಳಿತಾವಧಿಗೆ ಹೋಲಿಸಿದರೆ ನಾಲ್ಕು ಪಟ್ಟು ಹೆಚ್ಚು ಕೆಲಸವಾಗಿದೆ ಮೂಲ ಸೌಕರ್ಯಕ್ಕೆಂದೇ ಸುಮಾರು 100 ಕೋಟಿ ರೂ.ಗಳ ಅನುದಾನ ಬಂದಿದೆ.
ಇಷ್ಟೆಲ್ಲ ಕೆಲಸ ಮಾಡಿದ ಶಾಸಕ ಜೈನ್ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲ್ಲ ಎಂಬ ಮಾತು ಕೇಳಿಬರುತ್ತಿದೆ?
ಸ್ಪರ್ಧಿಸುವುದಿಲ್ಲ ಎಂದಲ್ಲ. ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ಎಲ್ಲ ರೀತಿಯಿಂದಲೂ ಸಮರ್ಥನಾಗಿದ್ದೇನೆ. ಯುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಸೂಕ್ತ ಅವಕಾಶ ಕೊಡಬೇಕು ಎನ್ನುವುದಷ್ಟೇ ನನ್ನ ಭಾವನೆ.
ಅಂದರೆ ಕ್ಷೇತ್ರದಿಂದ ಹಿಂದೆ ಸರಿಯುವಿರಾ?
ನನ್ನ ಮಗನಿಗೆ, ಪತ್ನಿಗೆ ಟಿಕೆಟ್ ಕೊಡಿ ಎಂದು ನಾನು ಕೇಳುತ್ತಿಲ್ಲ. ನನ್ನ ಜಾತಿಯವರಿಗೂ ಟಿಕೆಟ್ ಕೇಳಿಲ್ಲ. ನಾನು ಕೇಳುತ್ತಿರುವುದು ಯುವ ಕಾಂಗ್ರೆಸ್ಸಿಗರಿಗೆ ಟಿಕೆಟ್ ಕೊಡಿ ಎಂದು. ಈ ಬಗ್ಗೆ ಪಕ್ಷದ ವರಿಷ್ಠರಲ್ಲಿ ಕೇಳಿದ್ದು ನಿಜ.
ರಾಜಕಾರಣಿಯಾದ ನಿಮಗೆ ಇಂತಹ ತ್ಯಾಗ ಮನೋಭಾವ ಹೇಗೆ ಬಂತು?
ನನ್ನ ಪಕ್ಷ ಮಹಾತ್ಮ ಗಾಂಧೀಜಿ ಅವರು ಕಟ್ಟಿದ್ದ ಪಕ್ಷ. ತ್ಯಾಗ, ಮನೋಭಾವ ಇರುವಂಥ ಪಕ್ಷ. ನಿಷ್ಠಾವಂತ ಕಾರ್ಯಕರ್ತನಾಗಿ ಮಾದರಿಯಾಗಿರ ಬೇಕೆನ್ನುವುದು ಆಸೆ. ಚುನಾವಣೆಯಲ್ಲಿ ಯುವ ಕಾಂಗ್ರೆಸ್ಗೆ ಅವಕಾಶ ಕೊಡುವಂತೆ ಸಿಎಂ ಬಳಿ ಪ್ರಸ್ತಾವ ಮಾಡಿದ್ದೆ. ಅಂತಹ ಅವಕಾಶ ಕಾಣುತ್ತಿಲ್ಲ ಎಂದಾಗ ಯುವ ಕಾಂಗ್ರೆಸ್ಸಿಗೆ ಅವಕಾಶ ಕೊಡುವುದಾದರೆ ನನ್ನ ಕ್ಷೇತ್ರವನ್ನೇ ಬಿಟ್ಟು ಕೊಡುವುದಾಗಿ ಹೇಳಿದ್ದೆ.
ಅಂದರೆ ನೀವು ಮುಂದಿನ ಬಾರಿ ಕಣಕ್ಕೆ ಇಳಿಯುವುದಿಲ್ಲ?
ಚುನಾವಣೆಗೆ ನಿಲ್ಲಲ್ಲ ಎಂಬ ಶಬ್ದವೇ ಇಲ್ಲ. ನನ್ನ ಆರೋಗ್ಯ ಪರಿಗಣಿಸಿ ಪಕ್ಷ ಎಲ್ಲಿವರೆಗೆ ಅವಕಾಶ ನೀಡುವುದೋ ಅಲ್ಲಿವರೆಗೆ ಸ್ಪರ್ಧಿಸುವುದಕ್ಕೆ ಸಿದ್ಧ. ಆದರೆ ಒಂದುವೇಳೆ ಪಕ್ಷ ಯುವಕರಿಗೆ ಅವಕಾಶ ಕೊಡುವುದಿದ್ದರೆ ನನ್ನ ಕ್ಷೇತ್ರದಲ್ಲಿ ಕೊಡಲಿ ಎನ್ನುವುದಷ್ಟೇ ನನ್ನ ಆಶಯ.
ಬೇರೆಯವರಿಗೆ ಕ್ಷೇತ್ರ ಬಿಡುವ ರಾಜಕಾರಣಿಗಳು ವಿರಳವಲ್ಲವೇ?
ನಾನು ರಾಜಕಾರಣಿಯೇ ಅಲ್ಲ, ತಂದೆಯೂ ಆಗಿರಲಿಲ್ಲ. ಅವರೊಬ್ಬ ವಿದ್ವಾಂಸ ರಾಗಿದ್ದರು. ಅವರು ತಮ್ಮ ಜೀವನದಲ್ಲಿ ಸರ್ವಸ್ವವನ್ನೂ ಬಡವರಿಗಾಗಿ ದಾನ ಮಾಡಿ ದ್ದವರು. ಕೊನೆಗೆ ಕೈಯಲ್ಲಿದ್ದ ಒಂದು ಉಂಗುರ ಕೂಡ ಬ್ಯಾಂಕ್ನಲ್ಲಿ ಅಡವಿಟ್ಟು ಬಡಮಕ್ಕಳ ಫೀಸ್ ಕಟ್ಟು ತ್ತಿದ್ದರು. ಬಹುಶಃ ಅವರ ಗುಣ ಸ್ವಲ್ಪ ನನ್ನ ರಕ್ತದಲ್ಲಿಯೂ ಬಂದಿರಬೇಕು.
ನಿಮ್ಮ ಕ್ಷೇತ್ರದಿಂದ ಬೇರೆಯವರು ಸ್ಪರ್ಧೆಗೆ ತಯಾರಿ ನಡೆಸಿದ್ದಾರಲ್ಲ?
ನೋಡಿ, ರಾಜಕೀಯದಲ್ಲಿ ಈ ರೀತಿಯ ಬೆಳವಣಿಗೆಗಳು ಆಗುತ್ತಿರುತ್ತವೆ. ಒಂದು ವೇಳೆ ಕ್ಷೇತ್ರ ಬಿಟ್ಟುಕೊಟ್ಟರೆ ವರಿಷ್ಠರು ಯುವ ಕಾಂಗ್ರೆಸ್ಸಿಗರಿಗೆ ಅವಕಾಶ ಮಾಡಿಕೊಡುತ್ತಾರೆ ಎಂಬ ವಿಶ್ವಾಸವಿದೆ. ನನ್ನ ಜೀವನವೇ ಕಾಂಗ್ರೆಸ್. ಬೇರೆಯವರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ.
ಐವನ್ ಡಿ’ಸೋಜಾ ಸ್ಪರ್ಧೆಗೆ ಅಣಿಯಾಗು ತ್ತಿರುವುದು ಗಮನಕ್ಕೆ ಬಂದಿದೆಯೇ?
ಅವರ ವಿಷಯ ನನಗೆ ಗೊತ್ತಿಲ್ಲ. ಅವರು ಈಗ ಎಂಎಲ್ಸಿ ಆಗಿದ್ದಾರೆ. ಅವರ ಆಸೆ ಬಗ್ಗೆ ನಾನು ಮಾತನಾಡಲಿಕ್ಕೆ ಹೋಗುವುದಿಲ್ಲ. ಏನಿದ್ದರೂ ಪಕ್ಷ ನೋಡಿಕೊಳ್ಳುತ್ತದೆ.
ನೀವು ಹೇಳಿದವರಿಗೆ ಟಿಕೆಟ್ ಕೊಡದಿದ್ದರೆ?
ನಾನು ಕಾಂಗ್ರೆಸ್ನಲ್ಲಿ ಇರು ವವನು. ಆ ಪಕ್ಷದ ಬಗ್ಗೆ ನಿಮಗಿಂತ ನನಗೆ ಚೆನ್ನಾಗಿ ಗೊತ್ತಿದೆ. ನನ್ನ ನಿಲುವು ಕಾಂಗ್ರೆಸ್ ಪಕ್ಷ. ಮುಂದಿನ ಚುನಾವಣೆಗೆ ನಾನು ಫಿಟ್. ಆದರೆ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಿಗೆ ಅವಕಾಶ ಮಾಡಿಕೊಡಿ ಎನ್ನುವು ದಷ್ಟೇ ನನ್ನ ಕೋರಿಕೆ.
ನಿಮ್ಮ ನಿಲುವಿಗೆ ಕಾರ್ಯ ಕರ್ತರು ಒಪ್ಪುತ್ತಾರೆಯೇ?
ಕ್ಷೇತ್ರದಲ್ಲಿ ಹಲವು ವರ್ಷ ಕೆಲಸ ಮಾಡಿದವರು ಇದ್ದಾರೆ. ಕಾರ್ಯಕರ್ತರ ಬೆಂಬಲವಿದ್ದರೆ ಮಾತ್ರ ಸ್ಪರ್ಧಿಸುವವರಿಗೆ ರಕ್ಷಣೆ ಸಿಗುತ್ತದೆ. ಅದು ಬಿಟ್ಟು, ಹೊರಗಡೆಯಿಂದ ಯಾರೋ ಬಂದರೆ ಅಂಥವರಿಗೆ ಕಾರ್ಯ ಕರ್ತರಿಂದಲೂ ರಕ್ಷಣೆ ಸಿಗುವುದಿಲ್ಲ. ಹೀಗಾಗಿ ಎಲ್ಲವನ್ನೂ ಒಪ್ಪುವುದು ಬಿಡುವುದು ಕ್ಷೇತ್ರದ ಜನತೆಗೆ ಬಿಟ್ಟ ತೀರ್ಮಾನ.
ಶ್ರವಣಬೆಳಗೊಳ ಮಹಾಮಸ್ತಕಾಭಿಷೇಕಕ್ಕೆ ಪೂರ್ವ ತಯಾರಿ ಹೇಗಿದೆ ?
ಮಹಾಮಸ್ತಕಾಭಿಷೇಕಕ್ಕೆ ಸಾಕಷ್ಟು ತಯಾರಿ ನಡೆಯುತ್ತಿದ್ದು, ಆ ಸಮಿತಿ ಸಹ ಅಧ್ಯಕ್ಷನಾಗಿ ವಾರಕೊಮ್ಮೆ ಅಲ್ಲಿಗೆ ಭೇಟಿ ನೀಡಿ ಸಿದ್ಧತೆಗಳ ಪರಿಶೀಲನೆ ನಡೆಸುತ್ತಿದ್ದೇನೆ. ಈ ಬಾರಿಯ ಬಾಹುಬಲಿ ಮಸ್ತಕಾಭಿಷೇಕ ಉತ್ಸವವನ್ನು ಯಶಸ್ಸುಗೊಳಿಸುವುದಕ್ಕೆ ಹೆಚ್ಚಿನ ಮುತುವರ್ಜಿ ವಹಿಸಿಕೊಂಡಿದ್ದೇನೆ. ಶ್ರವಣಬೆಳಗೊಳಗೆ ಸಂಪರ್ಕ ಕಲ್ಪಿಸುವ ಬಹಳಷ್ಟು ರಸ್ತೆಗಳ ಅಗಲೀ ಕರಣವಾಗುತ್ತಿದೆ. ಭಕ್ತರ ವಾಸ್ತವ್ಯಕ್ಕೆ ಟೆಂಟ್ ಹಾಕುವುದಕ್ಕೆ 75 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದೆ.
– ಸುರೇಶ್ ಪುದುವೆಟ್ಟು