ಮೂಡುಬಿದಿರೆಯಲ್ಲಿ ಅಂತಾರಾಷ್ಟ್ರೀಯ ಸ್ಕೌಟ್ಸ್ ಗೈಡ್ಸ್ ಜಾಂಬೂರಿ: ಬೃಹತ್ ಕೃಷಿ ಲೋಕ ದರ್ಶನ
Team Udayavani, Dec 20, 2022, 6:25 AM IST
ಮೂಡುಬಿದಿರೆ: ಇದೇ ತಿಂಗಳ 21 ರಿಂದ 27 ರವರೆಗೆ ನಡೆಯುವ ಅಂತಾರಾಷ್ಟ್ರೀಯ ಸ್ಕೌಟ್ಸ್ ಗೈಡ್ಸ್ ಸಾಂಸ್ಕೃತಿಕ ಜಾಂಬೂರಿಯಲ್ಲಿ ಕೃಷಿ ಮೇಳವೂ ನ ಡೆಯಲಿದೆ.
ದೇಶದ ಮೂರನೇ ಎರಡರಷ್ಟು ಜನ ಕೃಷಿಯಲ್ಲಿ ತೊಡಗಿಕೊಂಡಿದ್ದು, ಜಾಂಬೂರಿಗೆ ದೇಶ ವಿದೇಶಗಳಿಂದ ಬರುವ ಸುಮಾರು 50 ಸಾವಿರ ಮಂದಿ ವಿದ್ಯಾರ್ಥಿಗಳಿಗೆ ಕೃಷಿಯನ್ನು ಪರಿಚಯಿಸುವ ಕೃಷಿಕರ ಬದುಕಿನ ಬಗೆಯನ್ನು ತಿಳಿಸುವ ಉದ್ದೇಶವಿದೆ.
4 ಎಕ್ರೆ ತರಕಾರಿಗೆ ಮೀಸಲು
ಒಟ್ಟು 12 ಎಕ್ರೆ ಪ್ರದೇಶದಲ್ಲಿ 4 ಎಕ್ರೆಯನ್ನು ಕೇವಲ ತರಕಾರಿ ಬೆಳೆ ಯಲು ಮೀಸಲು. ಮೂರ್ನಾಲ್ಕು ತಿಂಗಳ ಹಿಂದಿನಿಂದಲೇ ತಯಾರಿ ನಡೆದಿದ್ದು, ಕುಂಬಳಕಾಯಿ, ಚೀನಿ ಕಾಯಿ, ಸೋರೆಕಾಯಿ, ಹಾಗಲ ಕಾಯಿ, ಮುಳ್ಳು ಸೌತೆ, ಅಡುಗೆ ಸೌತೆ, ಹೀರೆಕಾಯಿ, ಪಡುವಲ ಕಾಯಿ, ಕನ್ನಡ ಪೀರೆ (ಹೀರೆ), ಬದನೆ, ಬೆಂಡೆ, ಸಿಮ್ಲಾ ಮೆಣಸು, ದೊಣ್ಣೆ ಮೆಣಸು, ವಿವಿಧ ಬಗೆಯ ಸೊಪ್ಪು, ನವಿಲು ಕೋಸು, ಟೊಮೇಟೊ, ತೊಂಡೆ ಕಾಯಿ, ಜೋಳದ ತೆನೆ ಇತ್ಯಾದಿ ಈಗಾಗಲೇ ಬೆಳೆದು ಕಂಗೊಳಿಸುತ್ತಿವೆ.
ಸಾಂಪ್ರದಾಯಿಕ ಭತ್ತದ 550 ತಳಿಗಳು ಇಲ್ಲಿವೆ. ವಿದೇಶಿ ತರಕಾರಿಗಳಲ್ಲಿ ಲೆಟ್ಯುಸ್, ಬ್ರುಕೋಲಿ ಸೊಪ್ಪು, ಝುಚಿನಿ, ಪಂಪ್ ಕಿನ್, 6 ಬಗೆಯ ಸೋರೆ ಕಾಯಿ, 70 ವಿಧದ ಬಾಳೆ, 700 ದೇಶೀಯ ಭತ್ತದ ತಳಿಗಳು, ಸಿರಿ ಧಾನ್ಯ, ಎಣ್ಣೆ ಕಾಳುಗಳು, 40 ಬಗೆಯ ಪುರಾತನ ಸಾಂಪ್ರದಾಯಿಕ ಗೆಡ್ಡೆ – ಗೆಣಸು, 150ಕ್ಕೂ ಅಧಿ ಕ ತೆಂಗಿನ ಕಾಯಿ ಕಲಾಕೃತಿಗಳೂ ಸಿದ್ಧಗೊಂಡಿವೆ.
200 ಬಗೆಯ ಆಯುರ್ವೇದೀಯ ಔಷಧ ಭರಿತ ಹಣ್ಣು ಮತ್ತು ಕಾಯಿ, 20 ಬಗೆಯ ಅಡಿಕೆಗಳು, 110 ಬಗೆಯ ವಿದೇಶಿ ಹಣ್ಣುಗಳಲ್ಲದೇ, 100 ಬಗೆಯ ಅಕ್ಕಿ, ತರಕಾರಿ ಮತ್ತು ಹಣ್ಣುಗಳಲ್ಲಿ ಕರಾವಳಿ ಸಂಸ್ಕೃತಿ ಬಿಂಬಿಸುವ ಕಲಾಕೃತಿಗಳು ಇರಲಿವೆ. ಗುಲಾಬಿ, ಸೂರ್ಯಕಾಂತಿ, ಜೀನ್ಯಾ, ಡೇಲಿಯಾ ಸೇರಿದಂತೆ ವಿವಿಧ ಬಗೆಯ ಹೂಗಳೂ ಇರಲಿವೆ.
600 ಮಳಿಗೆ ಗಳಲ್ಲಿ ಪ್ರದರ್ಶನ
ಸುಮಾರು 600 ಮಳಿಗೆಗಳಲ್ಲಿ ಯಂತ್ರೋಪಕರಣಗಳು, ನರ್ಸರಿ, ಕೃಷಿಗೆ ಪೂರಕವಾದ ಗುಡಿ ಕೈಗಾರಿಕೆ ಅಡಿಕೆ ಸುಲಿಯುವ ಯಂತ್ರ, ಬಹುಬಗೆಯ ಬುಟ್ಟಿ, ಕರಕುಶಲ ವಸ್ತುಗಳ ಪ್ರದರ್ಶನ, ಮಾರಾಟ ಸಂಯೋಜಿಸಲಾಗಿದೆ.
ಜಾಂಬೂರಿಗಾಗಿ ಬೃಹತ್ ಗಾಳಿಪಟ!
ಮಂಗಳೂರು, ಡಿ. 19: ವಿಶ್ವ ಸಾಂಸ್ಕೃತಿಕ ಜಾಂಬೂರಿಯಲ್ಲಿ ಟೀಂ ಮಂಗಳೂರು ತಂಡದಿಂದ ಗಾಳಿಪಟ ಪ್ರಾತ್ಯಕ್ಷಿಕೆ ನಡೆಯಲಿದ್ದು, ಬೃಹತ್ ಗಾಳಿಪಟ ಸಿದ್ಧಗೊಂಡಿದೆ.
50 ಅಡಿ ಎತ್ತರ ಮತ್ತು 16 ಅಡಿ ಅಗಲದ ಭಾರತೀಯ ಸಾಂಪ್ರ ದಾಯಿಕ ಗಾಳಿಪಟ ಇದು. ಕೊಡೆ ಬಟ್ಟೆಯಿಂದ ತಯಾರಿಸಲಾಗಿದೆ. ಗಾಳಿಪಟದ ಮೇಲ್ಮೈಯಲ್ಲಿ ಆಯ್ದ ಕೆಲವು ಚಿತ್ರಗಳಿಗೆ ಬಣ್ಣ ಹಚ್ಚಲಾಗಿದೆ. ಉಳಿದವುಗಳಿಗೆ ಪ್ರಾತ್ಯಕ್ಷಿಕೆ ಸಂದರ್ಭ ಮಕ್ಕಳೇ ಬಣ್ಣ ತುಂಬಲಿದ್ದಾರೆ.
ಗೋಕುಲ ಕಲ್ಯಾಣ ಮಂಟಪದಲ್ಲಿ ಸೋಮವಾರ ಗಾಳಿಪಟಕ್ಕೆ ಅಂತಿಮ ಸ್ಪರ್ಶ ನೀಡುವ ಕೆಲಸ ನಡೆಯಿತು. ಟೀಂ ಮಂಗಳೂರು ಗಾಳಿಪಟ ತಂಡದ ಸದಸ್ಯರು ಮತ್ತು ಕಲಾವಿದರಾದ ದಿನೇಶ್ ಹೊಳ್ಳ,
ನವೀನ್ ಅಡ್ಕರ್, ಸತೀಶ್ ರಾವ್, ಭುವನ್ ಪಿ.ಜಿ., ಸಪ್ನಾ ನೊರೋನ್ಹ, ಪ್ರಾಣೇಶ್ ಕುದ್ರೋಳಿ, ಪ್ರೀತಮ್, ಅನುರಾಧಾ, ತಂಡದ ಮುಖ್ಯಸ್ಥ ಸರ್ವೇಶ್ ರಾವ್, ಅರುಣ್ ಕುಮಾರ್, ರವಿ ಅರಸಿನಮಕ್ಕಿ, ಶೇಖರ್ ಶಿಶಿಲ, ಅವಿನಾಶ್ ಭಿಡೆ ಅರಸಿನಮಕ್ಕಿ, ಧಾರಿಣಿ ಮೊದಲಾದವರ ಶ್ರಮ ವಿದು. ನಾಗಬನ, ಆಟಿಕಳಂಜ, ಗುತ್ತಿನಮನೆ, ತುಪ್ಪೆ, ಕೋಳಿ ಅಂಕ, ಯಕ್ಷಗಾನ, ಕಂಬಳ, ರಥೋತ್ಸವ ಮೊದಲಾದ ಚಿತ್ರಗಳನ್ನು ಬಿಡಿಸಲಾಗಿದೆ. ಇದನ್ನು ಹಾರಿ ಸಲಾಗದು. ಬದಲಾಗಿ ಆಳ್ವಾಸ್ ಸಂಸ್ಥೆಯಲ್ಲಿ ಜಾಂಬೂರಿಯ ನೆನಪಿಗಾಗಿ ಪ್ರದರ್ಶನಕ್ಕೆ ಇರಿಸಲು ಸಂಸ್ಥೆಯ ಮುಖ್ಯಸ್ಥರಾದ ಡಾ| ಎಂ. ಮೋಹನ ಆಳ್ವ ಉದ್ದೇಶಿಸಿದ್ದಾರೆ.
ಪ್ರಾತ್ಯಕ್ಷಿಕೆ
ದಿನಕ್ಕೆ 200ರಂತೆ 1 ಸಾವಿರ ಮಕ್ಕಳಿಗೆ ಗಾಳಿಪಟದ ಪ್ರಾತ್ಯಕ್ಷಿಕೆ ನಡೆಯಲಿದೆ. ಮಧ್ಯಾಹ್ನದ ಬಳಿಕ ಮಕ್ಕಳು ತಯಾರಿಸಿದ ಗಾಳಿಪಟಗಳನ್ನು ಹಾರಿಸುವರು. ಜಾಂಬೂರಿಯ ನೆನಪಿಗಾಗಿ ಬೃಹತ್ ಗಾಳಿಪಟವನ್ನೂ ಸಿದ್ಧಪಡಿಸಲಾಗಿದೆ ಎನ್ನುತ್ತಾರೆ ಟೀಂ ಮಂಗಳೂರು ಸದಸ್ಯ ದಿನೇಶ್ ಹೊಳ್ಳ .