ಟ್ವೀಟ್ ಮಾಡಿ ರಾಷ್ಟ್ರ ಮಟ್ಟದಲ್ಲಿ ಟೀಕೆಗೆ ಗುರಿಯಾದ ನಳಿನ್ ಕುಮಾರ್ ಕಟೀಲು!
Team Udayavani, May 18, 2019, 6:00 AM IST
ಮಂಗಳೂರು: ಸಾಮಾಜಿಕ ಜಾಲತಾಣ ಟ್ವಿಟರ್ನಲ್ಲಿ ಗುರುವಾರ ವಿವಾದಾತ್ಮಕ ಹೇಳಿಕೆ ಪೋಸ್ಟ್ ಮಾಡಿದ್ದ ಸಂಸದ ನಳಿನ್ ಕುಮಾರ್ ಕಟೀಲು ರಾಷ್ಟ್ರ ಮಟ್ಟದಲ್ಲಿ ಟೀಕೆಗೆ ಗುರಿಯಾಗಿದ್ದಾರೆ.
ಆ ಪೋಸ್ಟ್ಗೆ ಕಾಂಗ್ರೆಸ್ ನಾಯಕರ ಸಹಿತ ದೇಶದೆಲ್ಲೆಡೆ ವಿರೋಧ ವ್ಯಕ್ತವಾಗುತ್ತಿದ್ದಂತೆ ನಳಿನ್ ಟ್ವೀಟನ್ನು ಡಿಲೀಟ್ ಮಾಡಿ ಕ್ಷಮೆಯನ್ನೂ ಯಾಚಿಸಿ ವಿವಾದಕ್ಕೆ ತೆರೆಯೆಳೆಯುವ ಯತ್ನ ಮಾಡಿದ್ದರು. ಅಷ್ಟರಲ್ಲೇ ಅದಕ್ಕೆ ಸಾಕಷ್ಟು ಟೀಕೆ-ಖಂಡನೆಗಳು ವ್ಯಕ್ತವಾಗಿದ್ದರಿಂದ ಬಿಜೆಪಿ ಹೈಕಮಾಂಡ್ನ ಕೆಂಗಣ್ಣಿಗೂ ಗುರಿಯಾದರು.
ಕಾಂಗ್ರೆಸ್ ಪ್ರತಿಭಟನೆ
ಕಾಂಗ್ರೆಸ್ ಮಾತ್ರವಲ್ಲದೆ ಬಿಜೆಪಿಯಲ್ಲೂ ನಳಿನ್ ಟ್ವೀಟ್ಗೆ ವಿರೋಧ ವ್ಯಕ್ತವಾಗಿದೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸಹಿತ ರಾಷ್ಟ್ರೀಯ ನಾಯಕರಿಂದ ಖಂಡನೆ ವ್ಯಕ್ತವಾಗಿದ್ದು, ಪ್ರತಿಭಟನೆಯ ಸ್ವರೂಪ ಪಡೆದಿದೆ. ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಶನಿವಾರ ಬೆಳಗ್ಗೆ 11 ಗಂಟೆಗೆ ಕಾಂಗ್ರೆಸ್ ಭವನದ ಮುಂದೆ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ.
ತಮ್ಮ ಟ್ವೀಟ್ಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲು ನಳಿನ್ ಮಾಧ್ಯಮಕ್ಕೆ ಲಭ್ಯವಾಗಿಲ್ಲ. ‘ನನ್ನ ಕೊನೆಯ ಎರಡು ಟ್ವೀಟ್ಗಳಿಗೆ ಟೀಕೆ ವ್ಯಕ್ತವಾಗಿದ್ದನ್ನು ಗಮನಿಸಿದ್ದೇನೆ. ಯಾರಿಗಾದರೂ ಅದರಿಂದ ಬೇಸರವಾಗಿದ್ದಲ್ಲಿ ನಾನು ಕ್ಷಮೆಯಾಚಿಸುತ್ತೇನೆ. ಯಾರನ್ನೂ ನೋಯಿಸುವುದು ನನ್ನ ಉದ್ದೇಶವಾಗಿರಲಿಲ್ಲ. ನೋವಾಗಿದೆಯೆಂದು ತಿಳಿದ ತತ್ಕ್ಷಣ ಟ್ವೀಟ್ ಹಿಂಪಡೆದಿದ್ದೇನೆ. ಚರ್ಚೆ ಇಲ್ಲಿಗೆ ಮುಗಿಸೋಣ’ ಎಂದು ನಳಿನ್ ಟ್ವೀಟ್ ಮಾಡಿ ಕ್ಷಮೆ ಯಾಚಿಸಿಸುವ ಮೂಲಕ ಪ್ರಕರಣವನ್ನು ತಣ್ಣಗಾಗಿಸುವ ಪ್ರಯತ್ನ ನಡೆಸಿದ್ದಾರೆ.