ನಿಟ್ಟೆ ವಿ.ವಿ.ಕುಲಪತಿಯಾಗಿ ಡಾ| ಸತೀಶ್ ಕುಮಾರ್ ಭಂಡಾರಿ
Team Udayavani, Nov 13, 2017, 11:50 AM IST
ಉಳ್ಳಾಲ: ದೇರಳಕಟ್ಟೆಯ ನಿಟ್ಟೆ ವಿಶ್ವವಿದ್ಯಾನಿಲಯ ಅಧೀನದ ಕ್ಷೇಮ ಡೀನ್ ಡಾ|ಸತೀಶ್ ಕುಮಾರ್ ಭಂಡಾರಿ ಅವರು ನಿಟ್ಟೆ ವಿ.ವಿ.ಯ ನೂತನ ಕುಲಪತಿಯಾಗಿ ನೇಮಕ ಗೊಂಡಿದ್ದಾರೆ. ಮೈಸೂರು ವಿವಿಯಲ್ಲಿ 1979ರಲ್ಲಿ ಎಂಬಿಬಿಎಸ್ ಪದವಿ ಪೂರೈಸಿದ್ದ ಅವರುಬಳಿಕ ಇಎನ್ಟಿಯಲ್ಲಿ ಡಿಪ್ಲೊಮಾ ಪೂರೈಸಿ, ಮೈಸೂರಿನ ಜೆಜೆಎಂ ಮೆಡಿಕಲ್ ಕಾಲೇಜಿನಲ್ಲಿ 1986ರಲ್ಲಿ ಇಎನ್ಟಿಯಲ್ಲಿ ಎಂಎಸ್ ಪೂರ್ಣಗೊಳಿಸಿದರು. ಬಳಿಕ ಮಂಗಳೂರಿನ ಕಸ್ತೂರ್ಬಾ ಮೆಡಿಕಲ್ ಕಾಲೇಜಿನಲ್ಲಿ 10 ವರ್ಷ ಸಹಾಯಕ ಪ್ರಾಧ್ಯಾಪಕರಾಗಿ ಹಾಗೂ ಸಹ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಕ್ಷೇಮದಲ್ಲಿ 1999ರಿಂದ ಇಎನ್ಟಿ ಪ್ರೊಫೆಸರ್ ಹಾಗೂ ವಿಭಾಗ ಮುಖ್ಯಸ್ಥರಾಗಿ ಸೇವೆ ಆರಂಭಿಸಿದ ಅವರು 13 ವರ್ಷಗಳ ಕಾಲ ವೈಸ್ ಡೀನ್ ಆಗಿ ಸೇವೆ ಸಲ್ಲಿಸಿದರು. ಕಳೆದ ಐದು ವರ್ಷಗಳಿಂದ ಡೀನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಅವರು ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ನ ಜಿಲ್ಲಾ ಅಧ್ಯಕ್ಷರಾಗಿ ಹಾಗೂ ಎಒಐಯ ಕರ್ನಾಟಕ ಹಾಗೂ ಕರಾವಳಿ ಘಟಕದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಪ್ರಶಸ್ತಿ: ಡಾ| ಭಂಡಾರಿ ಅವರು ಭಾರತ ಸರಕಾರದ ಬಿಆರ್ಎನ್ಎಸ್ನಿಂದ ಕೊಡಮಾಡುವ ಸುಮಾರು 30 ಲಕ್ಷ ರೂ. ವಿಶೇಷ ಅನುದಾನವನ್ನು ಸಂಶೋಧನೆಗಾಗಿ ಪಡೆದಿದ್ದಾರೆ. ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ನಿಂದ “ಪ್ರತಿಭಾನ್ವಿತ ಹಳೆ ವಿದ್ಯಾರ್ಥಿ ಪ್ರಶಸ್ತಿ’ಗೆ ಭಾಜನರಾಗಿದ್ದು, ನ್ಯಾಶನಲ್ ಇಂಪೆಡಿಯಮ್ ಕಾಂಪೆಮಡಿಯಮ್ನಿಂದ “ಪ್ರಸಿದ್ಧ ಶಿಕ್ಷಣ ತಜ್ಞ’ ಪ್ರಶಸ್ತಿ ಗಳಿಸಿದ್ದಾರೆ. ಎರಡು ಪುಸ್ತಕಗಳನ್ನು ರಚಿಸಿದ್ದಾರೆ.